ನಿಮ್ಮ ಕತೆ, ಕವಿತೆ
ಚುಟುಕು, ಹನಿ , ಹಾರೈಕೆಗಳೆಲ್ಲ
ನಮ್ಮ ಗುಡಿಸಲಲ್ಲಿನ
ಖಾಲಿ ಗಡಿಗೆಗಳ
ತುಂಬುವೆಂದಾದರೆ ಹೇಳಿ
ನಿಮ್ಮ ಅಕ್ಷರಗಳೆಲ್ಲವ ಹಣೆಗೊತ್ತಿಕೊಳ್ಳುತ್ತೇವೆ.
ಬೋರಲು ಹಾಕಿಬಿಟ್ಟ
ಪಾತ್ರೆಗಳ ತೆಗೆದು
ಪದ ಪದವ ತುಂಬಿಕೊಂಡು
ತಟ್ಟೆ ಮುಂದೆ ಹಸಿದು, ನಿದ್ದೆ ಹೋದ ಕಂದಮ್ಮಗಳ ಎಬ್ಬಿಸಿ
ಬಡಿಸಿ ಬಿಡುತ್ತೇವೆ
ಮಿಕ್ಕುಳಿದರೆ ನಾವೂ.. ಉಣ್ಣತ್ತೇವೆ.
ದಿಕ್ಕು ತಪ್ಪಿ ಹೋಗಿ
ಬೀದಿಗೆ ಬಿದ್ದ
ಕತ್ತಲೆಯ ಬದುಕಿಗೆ
ಕಡೆಯ ಪಕ್ಷ…
ಸೂಡಿಯಷ್ಟಾದರೂ ಹಿಡಿ ಬೆಳಕ ಹಿಡಿಯುವವಾ ಕೇಳಿ
ನಾವೂ.. ಬೆಳಕಿಗೊಮ್ಮೆ
ಬಂದು ಬಿಡುತ್ತೇವೆ.
ಬೆವರು ಬಸಿದರೆ ಮಾತ್ರ
ಅನ್ನ ಬಸಿಯುವ ನಮ್ಮ ರಟ್ಟೆಗಳಿಗೆ..
ನಿಮ್ಮ ಕವಿತೆಗಳು ಕೆಲಸ
ಕೊಡುವವಾ ಕೇಳಿ
ನಾವೂ ನಿಮ್ಮಂತೆ ಬದುಕಿ ಬಿಡುತ್ತೇವೆ
ನಿಮ್ಮ ಓದು, ನಿಮ್ಮ ಲೇಖನಿ
ನಿಮ್ಮ ಚರ್ಚೆ
ನಮಗೊಂದಿಷ್ಟು ಅಕ್ಷರವ ಕಲಿಸುವುದಾದರೆ ಹೇಳಿ
ನಮ್ಮ ದೊರೆಗೊಂದು
ಕಣ್ಣೀರಿನಲೇ ಪತ್ರ
ಬರೆದು ಬಿಡುತ್ತೇವೆ.
ಧನ್ಯವಾದಗಳು ಅವಧಿ ಬಳಗಕ್ಕೆ. ಥ್ಯಾಂಕ್ ಯೂ ಮೋಹನ್ ಸರ್.
ಕವಿತೆಯೆಂದರೆ ಮನುಷ್ಯತ್ವದ ಹುಡುಕಾಟ…
ಕವಯಿತ್ರಿ ಶೋಭಾ ನಾಯ್ಕ ಅಂತಹ ಹುಡುಕಾಟದಲ್ಲಿದ್ದಾರೆ…
ಕವಿತೆ ಪ್ರಾಮಾಣಿಕತೆಯಲ್ಲಿ ಗೆದ್ದಿದೆ..
ಚನ್ನಾಗಿದೆ ಮೇಡಂ
ಶೋಭಾ, ಕಿರಿದರಲ್ಲಿ ಹಿರಿದರ್ಥ ಹೇಳಿಬಿಟ್ಯಲ್ಲೇ ನಮ್ಮೂರ ಹುಡುಗಿ..
ಬಹಳ ಚೆನ್ನಾಗಿದೆ..ಅಂತರಂಗಕ್ಕೆ ತಾಗಿತು…