ಡಾ. ಅನಿಲ್ ಎಮ್ ಚಟ್ನಳ್ಳಿ
**
ದೇವರಿದ್ದಾನಾ?ಎಂದು ಕೇಳಿದ್ದಕ್ಕೆ
ನೀನು ನಕ್ಕು ಸುಮ್ಮನಾದೆ,
ಸುತ್ತಮುತ್ತಲಿನಿಂದ ಹತ್ತು ಪ್ರಶ್ನೆಗಳು
ತೂರಿ ಬಂದಾಗಲೂ
ಉತ್ತರಿಸುವ ಗೋಜಿಗೆ ಹೋಗದೆ
ಸುಮ್ಮನಿರುವುದು ಹೇಗೆ?
ಹೇಳಿಕೊಡು.
ನದಿಯ ನೀರಿನ ಜಗಳ
ಕೂತು ಮನವೊಲಿಸಿ
ಬಗೆಹರಿಸಿದೆ,
ಸಂಘರ್ಷ ತೊರೆದು ಹೀಗೆ
ಸಮನ್ವಯ ಸಾಧಿಸುವುದು ಹೇಗೆ ?
ಹೇಳಿಕೊಡು.
ಕೊಲ್ಲಲು ಬಂದ
ಅಂಗುಲಿಮಾಲನ್ನನ್ನು ಸಲೀಸಾಗಿ ಸೋಲಿಸಿದೆ,
ಹಲ್ಲು ಕಟೆದು, ಕೆಂಗಣ್ಣು ಮಾಡಿ
ಅಬ್ಬರಿಸಿ ಬರುವವರನ್ನು
ಕಣ್ಣಲ್ಲೆ ಸೋಲಿಸುವುದು ಹೇಗೆ ?
ಹೇಳಿಕೊಡು.
ಜೀವದಾನ ಕೇಳಿ ಬಂದ
ಕಿಸಾಗೋತಮಿಗೆ ಸಾವಿರದ ಮನೆಯಿಂದ
ಸಾಸಿವೆ ತರಲು ಕಳಿಸಿದೆ,
ಏನನ್ನೂ ನುಡಿಯದೆ ಹೀಗೆ
ಮಹತ್ತರವಾದುದನ್ನು ತಿಳಿಸುವುದು ಹೇಗೆ ?
ಹೇಳಿಕೊಡು.
ರೋಗ, ಮುಪ್ಪು, ಸಾವನ್ನು ಕಂಡು
ಅಪ್ರತಿಭನಾದೆ,
ಟೊಳ್ಳು ಜೀವನದ ಸುಖದ
ಲೋಲುಪತೆಯಲ್ಲಿ ಮೈ ಮರೆಯದೆ
ನಿತ್ಯ ಸತ್ಯಗಳನ್ನು ಮನಗಾಣುವುದು ಹೇಗೆ ?
ಹೇಳಿಕೊಡು.
ಕವನ ಸರಳವಾದರೂ ಅರ್ಥಗರ್ಭಿತವಾಗಿದೆ, ಚನ್ನಾಗಿದೆ.