ದೇವರಾಜ್ ಹುಣಸಿಕಟ್ಟಿ
ನೆಲ ಮುಗಿಲು ನಕ್ಷತ್ರವನೇ
ಹಡೆದವರ ನಾಡಲ್ಲಿ…
ವಿಷ ಬಿತ್ತನೆಯ ಹಾಡು
ಹಾಡುವುದ ನಿಲ್ಲಿಸಿ….!
ಜನಿವಾರ ಶಿವದಾರ
ಬಡಿವಾರದ ಮೂಗು
ದಾರಗಳ ಕಿತ್ತೆಸೆದ ಬೀಡಲ್ಲಿ….
ಒಡೆದು ಆಳುವ
ಭಜನೆ ನಿಲ್ಲಿಸಿ…..!
ಸಂತ ಷರೀಪರ
ಸ್ವಂತ ಮಗನೆಂದ
ಗೋವಿಂದ ಭಟ್ಟರ ನೆಲದಲ್ಲಿ …
ಹಲಾಲ್ ಜಟಕಾ
ಒಟ್ಟಾರೆ ಹಲ್ಕಟ್ ಗಳ
ಕಿಚ್ಚು ಹಚ್ಚುವುದ ನಿಲ್ಲಿಸಿ…!
ಸ್ಥಾವರದ ಲಿಂಗವ
ಜಂಗಮಗೊಳಿಸಿದ ಬುವಿಯಲ್ಲಿ…
ಮಸೀದಿಯಲ್ಲಿ ದುರ್ಬಿನು
ಹಿಡಿದು ಲಿಂಗ ಹುಡುಕುವುದ ನಿಲ್ಲಿಸಿ….!
ಜಗದ ಬೆತ್ತಲೆಗೆ ಕತ್ತಲೆಗೆ
ಹುಟ್ಟುಡುಗೆಯಲಿ….
ಕನ್ನಡಿ ಹಿಡಿದ ಅಕ್ಕನ ತವರಲ್ಲಿ….
ಅಕ್ಕ ತಂಗಿಯರ ತೆಲೆ
ಮೇಲಿನ ಸೆರಗ ತೆಗೆಸುವುದ ನಿಲ್ಲಿಸಿ…!!
ಮನುಷ್ಯತ್ವವನೇ ಬಿತ್ತಿ
ಮನುಷ್ಯತ್ವವನೇ ಬೆಳೆದ
ಈ ತಾಯಿ ಮಡಿಲಲ್ಲಿ……..
ನೆಲದ ಬಸಿರೊಡೆದು
ಗರ್ಭ ಪಾತವಾಗಿದೆ….
ದಯವಿಟ್ಟು ನಿಮ್ಮ
ತೆವಲುಗಳಿಗೆ ನೆತ್ತರ
ಚೆಲ್ಲುವುದ ನಿಲ್ಲಿಸಿ….!
0 ಪ್ರತಿಕ್ರಿಯೆಗಳು