ದೀಪ್ತಿ ವಿ ಸಿ
ಈ ನಡು ಮಧ್ಯಾಹ್ನದಲಿ
ಕವಿತೆಗಳ ಅರಸುತ್ತ
ಕಂಪ್ಯೂಟರ್ನ ಪರದೆಯಲಿ
ಕಣ್ಣುನೆಟ್ಟು ಕೂರುತ್ತೇನೆ
ಕೀ ಪ್ಯಾಡಿನ ಒತ್ತುಗುಂಡಿಗಳು
ಯಾವುದೇ ಗಳಿಗೆಯಲಿ
ಕಟಕಟ ಸದ್ದು ಮಾಡುತ್ತ
ಪದಗುಚ್ಛಗಳ ಅನಾಮತ್ತು
ತಂದು ಸುರಿದು ಓಡಬಹುದು
ಎದೆಯ ಚಲಿಸುಗಳು ಎತ್ತ ಹೊರಳುತ್ತವೆ
ಯಾರಿಗೆ ಗೊತ್ತಿದೆ
ಇಲ್ಲಿ?
ಬಂದಂತೆ ಶಬ್ಧ, ನಡೆದಂತೆ ವಾಕ್ಯ
ಸತ್ಯ ಸುಳ್ಳಿನ ಅನಾಮತ್ತು ಷರಾಗಳು
ರೂಹಿನ ಚೂರೊಂದು
ದಿಕ್ಕುದೆಸೆಗಳ ನೂರು ವಾಯಿದೆಗಳಲಿ
ಅನಾವರಣಗೊಳ್ಳುತ್ತದೆ
ಬಡತನ, ನೋವು, ಸಂತಸ, ಸಂಕಟ
ಎಲ್ಲವೂ ಮಾರಾಟವಾಗುತ್ತದೆ..
ಇಲ್ಲಿನ ಓಣ ಗಳಲ್ಲಿ
ಅಡ್ಡಾಡುವವರು ಕೇಳುತ್ತಾರೆ
ಕವಿತೆಯಲ್ಲಿ ಅದಿದೆಯೇ? ಇದಿದೆಯೇ?
ಬೆನ್ನು ಬಾಗಿದೆಯೇ? ಕತ್ತು ಹೊರಳಿದೆಯೇ?
ಮತ್ತೆ ಸೊಂಟ?
ಥೋ ಲಯ, ಛಂದಸ್ಸು, ಓಘ ಪಕ್ಕಕ್ಕಿಡಿ
ಜಾತಿ ಧರ್ಮ ಹಳೆಯ ವಿಚಾರ ಬಿಡಿ
ಅದು ಬಿಟ್ಟು
ಅದು ಅದು ಅದು…?
ಅಲ್ಲ
ನೀವೇ ಹೇಳಿ ಖಾಸಗಿಯಾದುದ್ದನ್ನೆಲ್ಲ ಬಿಕರಿಗಿಡುವುದಾದರೆ
ಬೆಡ್ ರೂಮಿಗೂ, ಬಚ್ಚಲಮನೆಗೂ
ಬಾಗಿಲಿಡುವ ಅವಶ್ಯಕತೆ
ಇದೆ ಎಂದು ನಿಮಗೆ
ಅನ್ನಿಸುತ್ತದೆಯೇ ಮಹಾಸ್ವಾಮಿ?
0 ಪ್ರತಿಕ್ರಿಯೆಗಳು