-ಉದಯಕುಮಾರ್ ಹಬ್ಬು
ಇವರು ನನ್ನಪ್ಪ
ನನಗೆ ಇವರನ್ನು ನೋಡಿದ್ದು ನೆನಪಿಲ್ಲ
ಎಂದರೆ ಸತ್ಯವೆ ಸುಳ್ಳೆ
ನೆನಪಿಗೆ ಯಾಕೆ ಬರಲೊಲ್ಲ ಸಾಕಾರ ಮೂರ್ತಿಯಾಗಿ?
ಅವರು ಸತ್ತಾಗ ನಾನು ಆರನೆಯ ತರಗತಿ!
ಕೇಳಿದ್ದು ಓದಿದ್ದು, ನನ್ನಣ್ಣಂದಿರು ಹೇಳಿದ್ದು
ಇಷ್ಟು: ಆರೇಳು ಹೊಟ್ಟೆ ತುಂಬಿಸುವ ಬೃಹತ್
ಕರ್ತವ್ಯ ಅವನ ಹೆಗಲ ಮೇಲಿತ್ತು
ಆದರೆ ಬೆನ್ನು ಗಟ್ಟಿ ಇರಲಿಲ್ಲ
ಸಾವಿನ ಕೊನೆಯ ದಿನದವರೆಗೂ
ಉಪವಾಸ ಕೆಡವಲಿಲ್ಲ ಯಾರನೂ.
ಶಾನುಭೋಗ: ಜತೆ ಶಾನುಭೋಗರು
ಒಂದಿಷ್ಟು ಜಮೀನು ಮನೆ, ಮಕ್ಕಳ ಮದುವೆ
ಮಾಡಿ ನಿವೃತ್ತ ಬದುಕನ್ನು ಕಳೆದರು ನೆಮ್ಮದಿಯಿಂದ.
ಇವರಿಗೆ ಆ ಭಾಗ್ಯವಿಲ್ಲ, ಯಾಕೆಂದರೆ
ಇವರು ಗಾಂಧಿವಾದಿ. ಹಣ ಆಸ್ತಿ ಮಾಡದೆ
ಬರಿಗೈ ದಾಸ, ತಾಳ ತಂಬೂರಿ ಕೈಯೊಳಗೆ
ವಿಠಲನ ಭಜನೆಮನದೊಳಗೆ
ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿ
ಹಿಂದು ಮುಸಲ್ಮಾನ ಐಕ್ಯತೆಗೆ ತಲೆಬಿಸಿ ಮಾಡಿ
ಹರಕು ಅಂಗಿ ಹರಿದ ಧೋತರ
ಹೋಗಿಯೆ ಬಿಟ್ಟರು;
ಯಾಕೆಂದರೆ ಇವರು ಗಾಂಧಿವಾದಿ.
ಗಾಳಿ ಬಂದಾಗ ತೂರಿಕೊಳ್ಳಲಿಲ್ಲ
ಗಾಳಿ ತುಂಬಿದ ಬಲೂನು
ಎದ್ದು ನಡೆದು ಬಿಟ್ಟರು
ಈ ಇಡೀ ಬದುಕನ್ನು ನಮ್ಮೆದುರಿಗೆ ಹಾಸಿ
ಆದರೆ ಈ ಬದುಕು ಹಣ್ಣಿನ ಮರ
ಫಲ ತಿನ್ನುವ ಮೊದಲು ಎದುರಿಸು ಬಿರುಗಾಳಿ
ಎಂದು ಪಾಠ ಕಲಿಯಲು ಎದ್ದು ಹೋಗಿಬಿಟ್ಟರು
ಈಗ ನಾವು ಅವರ ಆದರ್ಶಗಳ ಪುಣ್ಯದ ಫಲಗಳು
ನಮ್ಮ ಕಾಲ ಮೇಲೆ ನಾವು ನಿಂತಿದ್ದೇವೆ.
ಇಡೀ ಬ್ರಹ್ಮಾಂಡದಂತಹ ಬದುಕನ್ನು
ಎದುರಿಸುವ ಛಾತಿ ನೀಡಿ
ದಾರಿ ತೋರಿದ ಅಪ್ಪನಿಗೆ ನಮೊ ನಮಃ






0 Comments