ಚಂದ್ರಪ್ರಭ ಕಠಾರಿ
ಮನದಾಳದಲೆಲ್ಲೋ ಹುಟ್ಟಿದ
ಅಣು ಗಾತ್ರದ ಭಯದ ಬಿಂದು
ಭುವಿಯಾಚೆ
ಆಕಾಶದಾಚೆ
ಅನಂತತೆಯಾಚೆ
ಭೂತಾಕಾರದೀ ಬೆಳೆದು
ಅಗಣಿತ ನಕ್ಷತ್ರ
ತಾರಾಮಂಡಲಗಳ
ಆಕಾಶಗಂಗೆಯಾಚೆ
ಹುಟ್ಟು ಸಾವಿನಾಚೆ
ಸ್ವರ್ಗ ನರಕಗಳಾಚೆ
ಭವಾವಳಿಗಳಾಚೆ
ಕಟ್ಟಿದ ಮೋಕ್ಷವೆಂಬ
ಕಲ್ಪನಾಲೋಕ.
ಮೈಥುನದಾತುರದಲಿ
ಲಕ್ಷಾಂತರ ವೀರ್ಯಾಣುಗಳ ಸ್ಪರ್ಧೆ
ನುಗ್ಗಾಟ, ಹೋರಾಟ
ಒಂದೇ ಒಂದು ಅಂಡಾಣುವಿನ
ಒಡನಾಟ.
ಬೇಕೋ ಬೇಡವೋ
ಜನಿಸಿದ ಮನುಷ್ಯ ಜನ್ಮ
ದಾ ಸಾರ್ಥಕತೆಗೆ ಹುಡುಕಾಟ
ಸೋತು ಸುಣ್ಣವಾಗಿ
ಎದೆ ಗುಂಡುಕಲ್ಲಾಗಿ
ಸುತ್ತಲಿನ
ಅನ್ಯಾಯ ಅನಿಷ್ಟಗಳಿಗೆ ಕುರುಡಾಗಿ
ಮೂಕಾಗಿ, ಹೆಳವ
ಸ್ವಯಂ ಕೇಂದ್ರಿತ ಭೌತಿಕ ಜಗತ್ತು
ಅರಿಷಡ್ವರ್ಗಗಳ
ಸುಖ ಲೋಲುಪತೆಯಲ್ಲಿ ಮುಳುಗೆದ್ದು
ನಶ್ವರತೆ, ಅನಿತ್ಯತೆಯ ಅಪ್ರಮಾಣಿಸಿ
ಬೌದ್ಧಿಕ ಬರಗಾಲ
ಚಿರಕಾಲ
ಇಲ್ಲೇ ಉಳಿಯುತ್ತೇನೆಂದು ಬೀಗುವ
ಭ್ರಮಾಲೋಕ
ಅಸ್ತಿತ್ವ ಹುಡುಕಿ
ಅಸ್ಮಿತೆಯ ಕಳೇಬರ
ಆಧಾರ, ಪ್ಯಾನ್ ಕಾರ್ಡ್ ನಂಬರ್ ಗಳ
ಹಣೆ ಬರಹ
ಮೊಗ ಹೊತ್ತು
ಮೂರೊತ್ತು ಮೊಬೈಲಿನಲಿ
ಮುಖ ಹೂತು
ತರಕಾರಿ ಖರೀದಿಗೆ
ಕಾಲು ಕೇಜಿ ಚೌಕಾಸಿ
ಗೂಗಲ್ ಪೇಟಿಮ್ ಮಾಡಿ
ಮಾಲುಗಳಲಿ ಎಮ್ಆರ್ಪಿ ಪೀಕಿ
ಆನ್ ಲೇನ್ ಅಮೆಜಾನ್
ಫ್ಲಿಪ್ ಕಾರ್ಟ್ಗಳ ಡಿಸ್ಕೌಂಟ್
ಕ್ರೆಡಿಟ್ ಡೆಬಿಟ್ ಕಾರ್ಡು ಸೇಲುಗಳ
ಮನೆ ಮುಂಬಾಗಿಲಿಗೆ ಬಂದ ಬಡಿವಾರ,
ತಿಂಗಳ ಒಂದನೇ ತೇದಿಗೆ
ಬಿಪಿಎಲ್ ಎಪಿಎಲ್ ಕಾರ್ಡ್
ಬಯೋ ಮೆಟ್ರಿಕ್ ರೇಷನ್ನು
ಮನೆಬಾಡಿಗೆ, ಸ್ಕೂಲ್ ಫೀಸು
ಬ್ಯಾಂಕಲ್ಲಿ ಸರತಿ ನಿಂತ ಪೆನ್ಷೆನ್ನು
ಹೆಬ್ಬಾವು ಕೆರೆಹಾವು
ಕೊಳಕು ಮಂಡಲ
ಮಿಡಿನಾಗರಗಳ ರಸ್ತೆ ಸಂದಿಗೊಂದಿಗಳಲಿ
ನರಳುವ ಟ್ರಾಫಿಕ್ಕಿನಲಿ
ಧಾವಂತದಲಿ ದೇಕುತ್ತ ಸಾಗಿ
ಕಪ್ಪು ಹೊಗೆ ಉಸಿರಾಡಿ
ಆಫೀಸು, ಮನೆ ಸೇರಿ
ಭೂತಾಯಿಗೆ ಜ್ವರ ಬಂತೆಂದು
ಟೀವಿ ಶೋಗಳಲ್ಲಿ ಕಣ್ಣೀರ ಕೋಡಿ.
ಮಗು ಫೋಟೊಕ್ಕಾಗಿ ತವಕಿಸಿತೆಂದು
ಬಸಿರನೊಟ್ಟಯ ಅಮ್ಮನ
ಮೆಟರ್ನಿಟಿ ಫೋಟೊ ಶೂಟಿಂಗ್
ಸ್ಕ್ಯಾನಿಂಗ್ ಮಾಡಿ
ಕ್ಲಿಕ್ಕಿಸಿದ ಡಿಜಿಟಲ್ ಫೋಟೊ
ಒಡಲಲ್ಲೇ
ಕಣ್ಣು ಮಿಟುಕಿಸಿದ ಕಂದಮ್ಮ.
ಓತಪ್ರೋತ ಧುಮ್ಮಿಕ್ಕುವ
ಗುಡ್ ಮಾರ್ನಿಂಗ್ ಗುಡ್ ನೈಟು
ಪಾಲಿಸದ ನೀತಿ ಭೋದನೆ
ಕೆಟ್ಟ ಕರಕಲು ಜೋಕು(ಕೇ!)
ದಿಟದ ಛದ್ಮವೇಷ ತೊಟ್ಟ
ಹಸಿ ಬಿಸಿ ಸುಳ್ಳುಗಳ ವೀರರಾವೇಶ
ವಾಟ್ಸಪ್ಪು, ಫೇಸುಬುಕ್ಕುಗಳ ಸಂದೇಶ.
ಕಾತರಿಸಿಕೊಂಡ ಕಂತಿನ ಪಾಡು
ಕಂಪ್ಯೂಟರ್ ದೊಡ್ಡಪರದೆ ಟಿವಿ
ಮೊಬೈಲ್ ಐಪಾಡು.
ಕೈ ಬೆರಳಲ್ಲೇ ಕುಣಿವ
ಸಕಲ ಗ್ಯಾಜೆಟುಗಳೂ
ಕಾಡುವ ಏಕಾತನತೆಯೂ
ನೆರಳಾಗಿ ಬಿಡದ
ಒಬ್ಬಂಟಿತನದ ಬದುಕೂ
ಇದು
ಈ ಲೋಕ
ಇ ಲೋಕ
ವಾಸ್ತವ ಲೋಕ.
ನಿತ್ಯವೂ ಬಳಸದ ಪದಗುಚ್ಛ ಬಳಕೆ ಅಮೋಘ, ಪ್ರಸ್ತುತ ಜನರ ಬದುಕಿನ ಪರದಾಟಕ್ಕೆ ಹಿಡಿದ ಕನ್ನಡಿ ಎಂದನಿಸುತ್ತದೆ. ಅವಲೋಕನಕ್ಕೆ ಒಂದು ಅವಕಾಶ ಕಲ್ಪಿಸುತ್ತದೆ.
ಒಂದು ಕಡೆ ಸಮಕಾಲೀನ ಜೀವನದ ಜಂಜಾಟಗಳು, ಮತ್ತೊಂದು ಕಡೆ ದ್ವೀಪವಾಗುತ್ತಲೇ ಸಾಗುತ್ತಿರುವ ಮಾನವ…ಇವುಗಳ ಸುತ್ತ ಹರಿದಾಡುವ ಕವನ ಯೋಚಿಸುವಂತೆ ಮಾಡುತ್ತದೆ…
ಹಾರ್ದಿಕ ಅಭಿನಂದನೆಗಳು..
ತುಂಬಾ ಸುಂದರವಾದ ಬರಹ.. ಅದರಲ್ಲೂ ಈಗಿನ ಕಾಲದ ಬದುಕಿಗೆ ಹಿಡಿದ ಕೈಗನ್ನಡಿ ನಿಮ್ಮ ಸಾಲುಗಳು..
ಹಾ ಹಾ ಈಗಿನ ಬದುಕಿನ ವಾಸ್ತವತೆಯನ್ನು ತುಂಬ ಚೆನ್ನಾಗಿ ಅರ್ಥೈಸಿದ್ದೀರಿ ಸರ್ ಇದೆಲ್ಲವನ್ನು ಮೀರಿ ನಮ್ಮ ಹಿರಿಕರು ಬದುಕಿ ಬಾಳಿ ಇದಕ್ಕಿಂತ ಹೆಚ್ಚಿನದೆ ಬದುಕು ದೂಗಿಸಿದ್ದಾರೆ, ನಾವೆಲ್ಲ ಪ್ಲಾಸ್ಟಿಕ್ ಕವರ್ಗಳಂತೆ ನಾಜೂಕಾಗಿ ಗಾಳಿಯಲ್ಲಿ ತೇಲುವಂತೆ ಬದುಕುತಿದ್ದೇವೇನೂ; ಹಾಗೆ ಆಗುಬಿಟ್ಟಿದೆ ಸಹ
🙂 ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸುತ್ತದೆ