ತೇಜಾವತಿ ಎಚ್ ಡಿ
ಮೇಲೊಬ್ಬ
ನಗೆ ಕಡಲಿನ ಸುಲ್ತಾನ
ಗಿಳಿ ಪಾಠಗಳಿಂದ ಮರುಳು ಮಾಡುತ್ತ
ಪ್ರಪಂಚಕ್ಕೇ ಕೋಟೆ ಕಟ್ಟಲು
ದಂಡು ದಾಳಿಯೊಡನೆ ಸಜ್ಜಾಗಿದ್ದಾನೆ
ಅಣುಕು ಪ್ರದರ್ಶನದ ಮೂಲಕ
ಅಳಿಯಿಲ್ಲದ ರೈಲಿನ ಮೇಲೆ ನಿಂತು
ಸೂತ್ರವಿಲ್ಲದ ಪಟವನ್ನು ಹಾರಿಸಿ
ಭೃಂಗದ ಬೆನ್ನೇರಿ
ಉತ್ತರ ದಕ್ಷಿಣ ಧ್ರುವಗಳೆಡೆಗೆ
ಸವಾರಿ ಮಾಡುವ
ಅವನಿಗೇಕೆ
ಆಳೆತ್ತರದ ಒಡೆತನ
ಇಲ್ಲೊಬ್ಬ ಸೈತಾನ
ಕ್ರೋಧದ ಕೆನ್ನಾಲಿಗೆಯಲಿ ಉರಿಯುತ್ತಿದ್ದಾನೆ
ಇವನಿಗೇಕೆ ಕರುಣೆ ದಯೆಯ ಹಗೆತನ
ಕಾಲಲ್ಲಿ ಒದ್ದ ಪಾತ್ರೆ
ಕೇವಲ ಅನ್ನದ್ದಲ್ಲವೋ
ಅದು
ಭಕ್ತಿಯ ಪರಮಾನ್ನ
ಭಿಕ್ಷೆಯ ಅಕ್ಷಯ ಪಾತ್ರೆ
ಹಸಿದ ನಾಯಿಗಳು
ಹಳಸಿದ ತಂಗಳಾದರೂ ದಕ್ಕಲಿ ಎಂದು
ನಿಯತ್ತಿನಿಂದ ನಾಲಿಗೆ ಚಾಚುವಾಗ
ಸೈತಾನನ ಎದುರು ಪರಮಾನ್ನವೂ
ಬಾಚಿ ನೆಕ್ಕಿಕೊಳ್ಳಲಾರದಂತೆ ಚೆಲ್ಲಾಪಿಲ್ಲಿಯಾಗಿದೆ
ಕುಣಿದು ಕುಣಿದು ಏರಿದ ಕುಂಭವೀಗ
ಪಾಪದ ಮೊಗ್ಗುಗಳಿಗೆ ಜನ್ಮವಿತ್ತು
ನೆತ್ತರಿನ ಕಂಬನಿ ಹರಿಸುತ್ತಿದೆ
ತೀರದ ಹಸಿವಿಗಾಗಿ
ನನಸಾಗದ ಕನಸಿಗಾಗಿ
0 ಪ್ರತಿಕ್ರಿಯೆಗಳು