ನರೇಂದ್ರ ರೈ ದೇರ್ಲ
ಇವತ್ತಿಗೂ ಟ್ರಾಫಿಕ್ ಜಾಮ್ ನಡುವೆ ಸಿಕ್ಕಿಹಾಕಿಕೊಳ್ಳುವ ಒಬ್ಬ ಟೆಕ್ಕಿ, ಯಾವುದೋ ಜೂನಿಯರ್ ಕಾಲೇಜಿಗೆ ಕನ್ನಡ ಮೇಷ್ಟ್ರಾಗಿ ಸೇರುವ ಯುವಕ, ಚಾರಣದ ನಡುವೆ ಬೆಟ್ಟದ ಬಂಡೆಗೆ ಬೆನ್ನು ಊರಿ ಹಾಯಾಗಿ ಎದೆಯ ಮೇಲಿಟ್ಟು ‘ಚಿದಂಬರ ರಹಸ್ಯ’ವನ್ನು ಓದುವ ಮಹಾನಗರದ ನಯನಾಜುಕಿನ ಹುಡುಗಿ ಇವರೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಮತ್ತೆ ತೇಜಸ್ವಿಯನ್ನು ಬರೆಯುವಾಗಲೆಲ್ಲ ನನಗೆ ಅನಿಸುತ್ತಿದ್ದದ್ದು ಈ ಪೂರ್ಣಚಂದ್ರ ತೇಜಸ್ವಿ ಬಗ್ಗೆ ನಮ್ಮ ನಾಗೇಶ್ ಹೆಗಡೆ ಒಂದು ಪುಸ್ತಕ ಬರೆಯಬೇಕಾಗಿತ್ತು ಎಂದು.
ಎರಡು ದಶಕಗಳ ಹಿಂದೆ ‘ತೇಜಸ್ವಿ ಒಳಗೊಬ್ಬ ಕಲಾವಿದ’ ಎಂಬ ಲೇಖನವನ್ನು ‘ಸುಧಾ’ದ ಕಚೇರಿಗೆ ಹೋಗಿ ನಾಗೇಶ್ ಹೆಗಡೆಯವರ ಕೈಗೆ ಕೊಡುವಾಗ ಆ ಲೇಖನವನ್ನು ಓದುತ್ತಾ ಹೆಗಡೆಯವರು ಹೇಳಿದ ಒಂದು ಮಾತು “ಅಲ್ರಿ ದೇರ್ಲಾ, ಈ ತೇಜಸ್ವಿಯವರ ಮೂಡಿಗೆರೆಯ ಕಾಡಿನ ಮನೆಗೆ ಹೋಗಿ ಒಂದು ದಿವಸ ಅವರೊಂದಿಗೆ ಸುಮ್ಮನೆ ಇದ್ದು ಬರೀ ಗಮನಿಸಿಯೇ ಒಂದು ನುಡಿಚಿತ್ರ ಬರೆಯಬೇಕು”- ಆ ಕ್ಷಣದಿಂದ ನಾಗೇಶ್ ಹೆಗಡೆ ಮತ್ತು ತೇಜಸ್ವಿ ಅವರ ಮುಖಾಮುಖಿಯನ್ನು ಬರಹದ ದಾರಿಯಲ್ಲಿ ನಾನು ನಿರೀಕ್ಷೆ ಮಾಡುತ್ತಲೇ ಇದ್ದೆ. ಇವತ್ತು ನಾಗೇಶ್ ಹೆಗಡೆ ‘ಪೂಚಂತೆ ಗ್ರೇಟ್ ಯಾಕಂತೆ’ ಎಂಬ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ.
ಹಸಿವೆಯಿಂದಲೇ ಹಪಿಹಪಿಸಿ ಓದಿದೆ. ನನ್ನನ್ನೂ ಹೆಗಡೆ ಈ ಕೃತಿಯ ಒಳಗಡೆ ತಂದಿದ್ದಾರೆ. ಸುಮಾರು 13 ಲೇಖನಗಳು ಇರುವ ಒಂದು ಅಪರೂಪದ ಪುಸ್ತಕ. ಕೇವಲ ಒಂದು ಬಾರಿ ಅಷ್ಟೇ ತೇಜಸ್ವಿಯವರಿಗೆ ಮುಖಾಮುಖಿಯಾದ ಹೆಗಡೆ ಉಳಿದಂತೆ ಅವರ ಚಿಂತನೆಯ ದಾರಿಯಲ್ಲೇ ಆಪ್ತವಾಗಿ ಸಾಗಿದವರು. ಬರೆದವರು. ಮಣ್ಣು ನೀರು ಗಾಳಿಗಳಿಗೆ ಮನುಷ್ಯ ಮಾಡುವ ಅನ್ಯಾಯವನ್ನು ನೆಲದ ಭಾಷೆಯಲ್ಲಿ ಬರೆದವರು.
ತೇಜಸ್ವಿಯವರ ನೆಲಾನುಭವದ ಪ್ರಭಾವಕ್ಕೆ ಒಳಗಾದ ಶಿವರಾಮ ಕಾರಂತರು ಕೊನೆಗಾಲದಲ್ಲಿ ಮೂಡಿಗೆರೆಗೆ ಹೋದಂತೆ, ಅಲ್ಲಿ ಒಂದೆರಡು ದಿವಸ ಇದ್ದು ಬಂದಂತೆ ಒಂದು ವೇಳೆ ನಾಗೇಶ್ ಹೆಗಡೆ ನಿರುತ್ತರದಲ್ಲಿ ಒಂದು ವಾರ ಉಳಿದಿದ್ದರೆ ಇಂಥ ಪುಸ್ತಕದ ಸಮೃದ್ಧಿ ಮತ್ತಷ್ಟು ಬಲವಾಗುತ್ತಿತ್ತು… ಇರಲಿ ನೀವೂ ಓದಿ.
0 ಪ್ರತಿಕ್ರಿಯೆಗಳು