ಜಿ.ಪಿ. ಬಸವರಾಜು
೧
ಸ್ವಯಂ ಅರಿವು ಮಿಂಚಿ
ಬಾನೆಲ್ಲ ಬೆಳಕಾಯಿತು,
ಒಂದೆ ಒಂದು ಕ್ಷಣ
ಮತ್ತೆ ಕತ್ತಲೆಯದೇ ರಾಜ್ಯ
ನಾವೆಲ್ಲ ಈ ರಾಜ್ಯದ
ಕಾಯಂ ಪ್ರಜೆಗಳು
ಅದು ನಮ್ಮೆಲ್ಲರ ಹೆಮ್ಮೆ
೨
ತಾವೊ ನದಿ ಹರಿಯುತ್ತಿದೆ
ಎಂದೂ ಬತ್ತದಂತೆ
ಬಾಯಾರಿದವರೆಲ್ಲ ಬೊಗಸೆ-
ಯಲ್ಲಿ ಮೊಗೆಮೊಗೆದು
ಕುಡಿಯಬಹುದು, ಕುಡಿದಷ್ಟೂ
ನೀರು, ತಣಿಯುವುದು ದಾಹ
ಬಿರುಬೇಸಿಗೆಯಲ್ಲಿ ದಾರಿ-
ಹೋಕರಿಗೆಂದೇ ಹರಿಯುತ್ತಿದೆ
ಈ ನದಿ-ತಾವೊ ನಿರಂತರ
೩
ನನಗೆ ಹೆಸರಿದೆ-
ನಾನು ವಸ್ತುವಲ್ಲ;
ವಸ್ತುವಿಗೆ ಹೆಸರಿಲ್ಲ
ಅದಕ್ಕಾಗಿಯೇ
ಅದು ಬಂದಿಯಲ್ಲ
೪
ನಾನು
ನನ್ನ ಸುತ್ತ-
ನಾನೆ ನಾನು
ಬ್ರಹ್ಮಾಂಡ ಉರುಳಿಸುವ
ಭ್ರಮೆಯಲ್ಲಿ ಸಿಕ್ಕ ಸೆಗಣಿ
ಉಂಡೆಯ ತಳ್ಳುತ್ತಿರುವ
ಹುಳು;
ಕೋಶದೊಳಗೇ ಇದ್ದರೂ
ಜೀವಕ್ಕೆ ಚಿಟ್ಟೆಯ
ಕನಸಾದರೂ ಬಿದ್ದರೆ
ಬದುಕು ಭಾರವಾಗುವುದಿಲ್ಲ,
ಕಾಯುವ ತಪ ಗೊತ್ತಿದ್ದರೆ
ಕಾದಿರುವುದು ಚಿಟ್ಟೆಯ ಪಟ್ಟ
೫
ದೊರೆಯ ಹೆಸರೇ ನೆನಪಿಲ್ಲ
ಅವನು ಎಂದೂ ನಮ್ಮ
ಮುಂದೆ ಬಂದು ನಿಲ್ಲುವುದಿಲ್ಲ
ಅವನ ದಂಡವೊಂದೇ ನಮ್ಮೆದುರು
ಏಟು ಬಿದ್ದಾಗಲೆಲ್ಲ
ಬೆಚ್ಚುತ್ತೇವೆ, ಬೈಯ್ಯುತ್ತೇವೆ
ಮಿತಿಮೀರಿದರೆ ಉರಿದುರಿದು
ಬೆಂಕಿಯಾಗುತ್ತೇವೆ; ಆ ಬೆಂಕಿಯಲ್ಲಿ
ಸುಟ್ಟುಹೋಗುತ್ತಾನೆ ದೊರೆ
ಮತ್ತು
ನಮ್ಮನ್ನು ದಂಡಿಸುವ ದಂಡ
೬
ತಾವೊ ಬಂದ ದಿನ
ಬೀದಿ ಖಾಲಿಯಾಗಿತ್ತು
ಖಾಲಿಯನ್ನು ನೋಡಿಯೇ
ಅವನು ಬರುತ್ತಾನೆ;
ಬೀದಿ ತುಂಬಿದ ದಿನ
ಬರಲು ತಾವೊಗೆ ಜಾಗವೇ
ಇರುವುದಿಲ್ಲ
೭
ತಾವೊ ಸಿಂಹಾಸನ
ಖಾಲಿಯೊ ಭರ್ತಿಯೊ
ಇಡೀ ದಿನ ಚರ್ಚಿಸಿದರೂ
ತುಂಬಲಿಲ್ಲ ಏನೂ
ತಲೆ ಖಾಲಿ ಖಾಲಿ
0 ಪ್ರತಿಕ್ರಿಯೆಗಳು