ಡಾ ಕೆ ಷರೀಫಾ
ದ್ವೇಷದ ಅಗ್ನಿ ಉರಿಯುತ್ತಿದೆ.
ಊರು ಮಸಣ ಮಾಡಿತು ಬಾಂಬು
ದಟ್ಟ ವಸತಿಗಳ ಅಳಿಸಿ ಹಾಕಿ
ನೆಲಸಮ ಗುಡಿ, ರ್ಚು, ಮಸೀದಿ
ನೋವಿನ ಚಿತ್ಕಾರ ಮುಗಿಲು ಮುಟ್ಟಿ
ಕರಕಲು ಛಿದ್ರ ಮಕ್ಕಳ ದೇಹಗಳು.
ಸುರಿವ ಬಾಂಬಿನ ಮಳೆಗೆ ಬೆದರಿದ
ಚಿಣ್ಣರು ಓಡೋಡಿ ಬಂದರು ಬಯಲಿಗೆ
ಜೀರೋ ಡಿಗ್ರಿ ಚಳಿಗೆ ಸೆಟೆದ ಶವಗಳು
ಕಡು ರಾತ್ರಿ ಸೂರ್ಯ ಹುಟ್ಟುವ ಮುನ್ನ
ಉರಿದುರಿದು ಬೂದಿಯಾದ ಬೆಳದಿಂಗಳು.
ದ್ವೇಷದ ಅಗ್ನಿಗೆ ದೇಶ ಬಲಿಯಾಯ್ತು
ಯುದ್ಧ ಕಾಲದಲ್ಲಿ ನನ್ನೊಳಗಿನ ಬುಧ್ಧ
ಸತ್ತು ಸಮಾಧಿ ರಕ್ತ, ಕೀವು, ನಂಜಾಗಿತ್ತು
ತಿನ್ನುವ ಅನ್ನ ದೇವರು ವಿಷವಾಗಿತ್ತು
ಬಾಂಬು ಬಿದ್ದು ಊರು ಬೂದಿಯಾಗಿತ್ತು.
ನೆಲತಬ್ಬಿ ಬಿಕ್ಕಳಿಸಿ ಗಾಂಧಾರಿಯ ರೋದನ
ದಾಳಿಯಲಿ ಪುಡಿಯಾದ ಗೋಡೆಗಳಡಿ
ನೂರು ಶವಗಳ ತಬ್ಬಿ ಅಳುತ್ತಿದ್ದಾಳೆ ಅಮ್ಮ
ಹಿರೋಶಿಮಾ ನಾಗಾಸಾಕಿ ಬಂಜರಾಗಿದ್ದಕ್ಕೆ
ನೆಲದೆದೆ ಬಿರಿವಂತೆ ಬಿಕ್ಕುತ್ತಿದ್ದಾಳೆ ತಾಯಿ.
ಬಹಳ ಶಕ್ತಿಯಿದೆ ಯುದ್ಧಗಳಿಗೆ
ಜೀವ ಸಾಯಿಸುತ್ತದೆ; ಸೃಷ್ಟಿಸುವುದಿಲ್ಲ
ಕಸಿಯುತ್ತದೆ ಕನಸು; ಕಾಣಿಸುವುದಿಲ್ಲ
ಮತಗಳ ಬಂಪರ ಬೆಳೆಯ ಇಳುವರಿ
ಹೆಣ ದೇಶವಾಗುವುದು ಮಾತ್ರ ಖಾತರಿ.
ಮನಮುಟ್ಟಿದ ಕವಿತೆ