ಡಾ ಎಲ್‌ ಹನುಮಂತಯ್ಯ ಹೊಸ ಕವಿತೆ- ಸಾವಿನ ಸಂತೆಯಲಿ ನಿಂತು

ಡಾ ಎಲ್‌ ಹನುಮಂತಯ್ಯ

ಮನೆಯಿಂದ ಹೊರ ನಡೆದರೆ ಕ್ಷಣಾರ್ಧದಲಿ
ರೋಗ ಆವರಿಸುವ ಆತಂಕ
ನಿತ್ಯ ಸಾಲುಗಟ್ಟಿ ಕಾಯುವ ಹೆಣಗಳು
ಸಂಬಂಧಿಕರ ರೋಧನ.
ಪ್ರತಿ ನಿಮಿಷ ಸೈರನ್ನು ಕೂಗಿಸಿಕೊಂಡು
ಓಡಾಡುವ ಅಂಬುಲೆನ್ಸ್‌ ಗಳು.

ಲೋಕದ ಉಸಾಬರಿಯೆ ಬೇಡವೆಂದು
ಒಳಗೆ ಕುಂತರೆ ಮನದಂಗಳದಲಿ
ಗೆಜ್ಜೆ ಕಟ್ಟಿ ಕುಣಿವ ಹದ್ದುಗಳು
ಎದೆಬಡಿತ ಹೆಚ್ಚು ಮಾಡುತ್ತವೆ.

ಫೋನು ರಿಂಗಣಿಸಿದರೆ ಭಯದ
ಅಲೆಗಳು ಅಪ್ಪಳಿಸುತ್ತವೆ.
ಯಾರ ಸಾವಿನ ಸುದ್ದಿಯೋ
ಯಾರಿಗೆ ಬೇಕಾಗಿದೆಯೋ ಬೆಡ್
ಆಕ್ಸಿಜನ್‌ ವೆಂಟಿಲೇಟರ್‌
ಮಗನ ಉಳಿಸಿರೆಂದು ತಾಯಿ
ಕುಟುಂಬದ ಜೀವನಾಡಿ ಗಂಡನ
ಉಳಿಸಿರೆಂದು ಹೆಂಡತಿ
ಅಣ್ಣ ತಮ್ಮ ಅಕ್ಕ ತಂಗಿಯರ
ಉಳಿಸಿಕೊಡಿರೆಂದು ಕಣ್ಣೀರಲಿ
ಕೈತೊಳೆವ ನೂರಾರು ಜನರ
ನೋವು ಕೇಳಿ ಮೂರ್ಚೆ ಬಂದಂತೆ

ಭಯದ ಕಾಲುವೆ ಬೇರೆಡೆಗೆ
ತಿರುಗಿಸಲು ಚಾನೆಲ್ಲು ಹಾಕಿದರೆ
ಸಾವಿನ ಮನೆಯಲ್ಲಿ ಹಿಂದು ಮುಸ್ಲಿಮರ
ಹುಡುಕಿ ಕುಂತ ನಾಯಕ ಮಣಿಗಳ ಸಾಲು.

ದೂರು ನೀಡಿ ದುಃಖಿತರ ನೆರವಿಗೆ
ಧಾವಿಸಲು ಮಂತ್ರಿಗಳ ಮನೆಗೆ ಬಂದರೆ
ಬೆಳಗಿನಿಂದ ಸಂಜೆವರೆಗೆ ಸಭೆ
ಮುಗಿಯಲೇ ಇಲ್ಲ.

ಹೆಣಸಾಗಿಸಲು ಒಬ್ಬ ಮಂತ್ರಿ ಸುಡಲೊಬ್ಬ
ಆಕ್ಸಿಜನ್ನಿಗೊಬ್ಬ ಅಸ್ಥಿ ವಿಸರ್ಜನೆಗೊಬ್ಬ
ಇವರೆಲ್ಲರ ಮೇಲುಸ್ತುವಾರಿಯ ಸುತ್ತ
ತರವಾರಿ ಜೌಷಧಗಳ ಕಂಟ್ರಾಕ್ಟರು
ವೆಂಟಿಲೇಟರಿನ ಡೀಲರುಗಳು ಕಾಯುವುದ
ಕಂಡು ಹಿಂತಿರುಗಿ ಬಂದೆ.

ಮತ್ತದೇ ಸುದ್ದಿ, ನಿನ್ನೆ ಸೇರಿದ
ಪತ್ರಕರ್ತನ ಸಾವು
ಮೊನ್ನೆ ಚೇತರಿಸಿಕೊಂಡಿದ್ದ
ಕ್ರೀಡಾಪಟು ಇನ್ನಿಲ್ಲ.

ಈಗತಾನೆ ಬಂದ ಬಿಸಿ ಸುದ್ದಿ
ಸರ್ಕಾರದ ಹಿರಿಯ ಅಧಿಕಾರಿಯೇ ಸತ್ತ.
ಸಾವಿನ ಸಂತೆಯಲಿ ಯಾರನ್ನ ಯಾರು
ಉಳಿಸಿಕೊಳ್ಳುವುದು
ಸದ್ಯ ಸರ್ಕಾರ ಉಸಿರಾಡುತ್ತಿದೆಯಲ್ಲ!

‍ಲೇಖಕರು Avadhi

May 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: