ಜೆ ಶ್ರೀನಿವಾಸ ಮೂರ್ತಿ
ಕಾಲುರಿ, ತೊಡೆ ಮಧ್ಯೆ ಉರಿ
ಹೊಟ್ಟೆಯುರಿ, ಎದೆಯುರಿ, ಗಂಟಲುರಿ
ಚಿಟಿಚಿಟಿಲೆ ನೆತ್ತಿ ಸಿಡಿಯುತ್ತದೆ.
ಹುಬ್ಬುಗಂಟಿನ ಮಧ್ಯೆ ಎದ್ದ ಕೆಂಡ.
ಕೋಟೆ ಕಟ್ಟಿದ ಕೆನ್ನಾಲಿಗೆಗಳೇ
ಎದ್ದು ಮುತ್ತಿ ಮುತ್ತಿಟ್ಟು
ಉರಿಯ ನೆಕ್ಕಿದೆ ಜ್ವಾಲೆ ಮಾಲೆ
ಸುಡು, ಸುಟ್ಟುಬಿಡು ಬಿಡು
ಬಿಡು ‘ನನ್ನ’ ದುರ್ಗಿ
ಎಲ್ಲ
ಚಿತ್ತಚಿತೆಯಲ್ಲಿ ಸುಟ್ಟು ಭಸ್ಮ
ಕೆಂಗಣ್ಣನ ನೊಸಲೇರಿತು
ಭಸ್ಮಾರತಿಯಲ್ಲಿ ಮಹಾಕಾಲನ ಮೇಲುದುರಿ
ಎಗರಿ ನೆಕ್ಕುವ ಮಹಾಕಾಳಿಯ ನಾಲಿಗೆಗೆ ಸಿಕ್ಕಿತು
ಕಾಲನ ಹಣೆಗೆ ಕಾಳಿ ನಾಲಿಗೆ ಚಾಚಿ
ಕಾಳಸರ್ಪಶಯನದಲಿ ವಿಪರೀತ ರತಿ
ಸುಟ್ಟದೇಹದ ಮೇಲೆ ಬಟ್ಟಲಾಗಿದೆ ಬುರುಡೆ
ಬೊಮ್ಮನ ತಲೆ ಕತ್ತರಿಸಿ ಹಿಡಿದೆನೆಂದ
ಕಪಾಲಿ ಕೈಯಲ್ಲಿ ಮೊದಲು ನನಗೇ ಭಿಕ್ಷೆ.
ಉಳಿದ ಎಲುಬುಗಳ ಹಾರ
ಕಾಳಿ ಕೊರಳಲ್ಲಿ
ಪಟಪಟನೆ ವಟಗುಟ್ಟಿ
ಮಂತ್ರ ಮಾಟ
ನನ್ನೆದೆಯ ಎಲುಬು ಅವಳೆದೆಯ ಮೇಲೆ
ಕುಣಿದಾಗ ಅವಳು ಕುಣಿಯುತ್ತ ತಾನು
ಅವಳೆದೆಯ ಹಿಂಡಿದಾಗ
ಅವನ ಹಣೆಯಲಿ ಭಸ್ಮ ನನ್ನ ಚರ್ಮವು ಚಕಿತ.
ಅವನೆದೆಯ ಮೇಲೆ ಇವಳು ಕುಣಿದು.
ಅವಳ ನಡು ಮಧ್ಯೆ ಇವನು ನಿಂತು
ಬೂದಿ-ಬುರುಡೆ-ಮೂಳೆಗಳು
ಕಾಳ-ಕಾಳಿಯರು
ಒಂದಾದೇನೇ ನಾನು.
ಶಿವೋಹಂ ಶಿವೋಹಂ
0 ಪ್ರತಿಕ್ರಿಯೆಗಳು