ಸಿ. ಎಸ್. ದ್ವಾರಕಾನಾಥ್
ಬೆಂಗಳೂರಿನ ಚಿತ್ರಕಲಾ ಪರಿಷತ್ ಅಯೋಜಿಸಿದ್ದ “ಚಿತ್ರ ಸಂತೆ” ಗೆ ನಿನ್ನೆ ಹೋಗಿದ್ದೆ..
ಕಾಲು ನೋಯಿವಷ್ಟು ಸುತ್ತಾಡಿದೆ, ನೂರಾರು ಕಲಾವಿದರು ತಮ್ಮ ಅಮೂಲ್ಯ ಕಲಾಕೃತಿಗಳನ್ನು ಹರವಿಕೊಂಡು ಕುಂತಿದ್ದರು.. ಸಾವಿರಾರು ಮಂದಿ ಕಲಾಪ್ರೇಮಿಗಳು ಕಲೆಯ ಬಲೆಯಲ್ಲಿ ಸಿಕ್ಕಿ ಮಗ್ನರಾಗಿದ್ದರು…
ಈ ಸಲ ನಾನು ಕಂಡುಕೊಂಡ ವಿಸ್ಮಯವೇನೆಂದರೆ.. ಎಲ್ಲಾ ಕಲಾವಿದರನ್ನೂ ಏಕಕಾಲಕ್ಕೆ ಸೆಳೆದ ‘ಬುದ್ದ’ !!
ದಿನನಿತ್ಯ ಅಸಹಿಷ್ಣತೆ ಯಿಂದ ನರಳುತ್ತಿರುವ ಸಮಾಜ, ಕೂದಲು ಸೀಳುವ ಚರ್ಚೆಗಳು, ವಾದವಿವಾದಗಳು, ಚೀರಾಟಗಳು.. ಇವುಗಳ ನಡುವೆ ಬುದ್ದ..?
ಇಡೀ ಚಿತ್ರಸಂತೆಯೇ ಬುದ್ದಮಯವಾಗಿತ್ತು.. ನನ್ನ ಕಾಲಿಗೆ ಧಣಿವಾಗಿದ್ದರೂ ಬುದ್ದನಲ್ಲಿ ಲೀನವಾದ ನನ್ನ ಮನಸ್ಸಿಗೆ ಧಣಿವಾಗಿರಲಿಲ್ಲ.. ಕಣ್ಣಾಡಿಸಿದ ಕಡೆಯೆಲ್ಲಾ ಕಣ್ಣು ತುಂಬುವ ಬುದ್ದ.. ಎಲ್ಲಕ್ಕೂ ಪರಿಹಾರ ನೀಡುವಂತೆ ಮುಗುಳ್ನಗುತಿದ್ದ ಬುದ್ದದೇವ…!
ನನಗೆ ಲೋಹಿಯಾ ನೆನಪಾದರು.. “ಧ್ಯಾನಮುದ್ರೆ, ದ್ರವಿಸುವ ಕರುಣಾಮುದ್ರೆ, ಸಾಂತ್ವನ ಕೊಡುವ ಅಭಯಮುದ್ರೆ, ಇಂದ್ರಿಯಗಳನ್ನು ಜಯಿಸಿನಿಂತ ಗಂಭೀರಮುದ್ರೆ….” ಲೋಹಿಯಾರನ್ನು ಕೇಳಿಯೇ ಈ ಕಲಾವಿದರು ಬುದ್ಧನನ್ನು ಚಿತ್ರಿಸಿದರೆ?
“…ಸಾರಾನಾಥ, ಮಥುರ, ಔರಂಗಾಬಾದ್, ನಲಂದಾಗಳಲ್ಲಿನ ಬುದ್ಧನ ಮಹಾವಿಗ್ರಹಗಳಾಗಲಿ ಅಥವಾ ಅಜಂತ ಎಲ್ಲೋರ ಮುಂತಾದ ಕಡೆಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಮೆಚ್ಚಿಗೆಯಾಗಬಹುದಾದ, ಅಷ್ಟೇ ಮಹೋನ್ನತವಾದ ಬುದ್ದಮೂರ್ತಿಗಳಾಗಲಿ ಎಲ್ಲ ಒಂದಕ್ಕೊಂದು ತೀರ ಭಿನ್ನವಾಗಿವೆ. ಹಾಗಿದ್ದೂ ಅವೆಲ್ಲ ಒಂದೇ: ಭವವನ್ನು ಗೆದ್ದ ವಿರಾಮಮೂರ್ತಿ..!” ಇಲ್ಲೂ ಇದೇ ಸ್ಥಿತಿ ಎಲ್ಲವೂ ವಿಭಿನ್ನ, ಪ್ರತಿ ಚಿತ್ರವೂ ಬೇರೆಯೇ.. ಆದರೆ ಸ್ರವಿಸುವ ಪ್ರೀತಿ, ಕರುಣೆ, ಸಾಂತ್ವನ ಒಂದೇ…
ಈ ದೇಶಕ್ಕೆ ಇಂದು ಬುದ್ದ ಆಕರ್ಷಕ, ಅವಶ್ಯಕ, ಅನಿವಾರ್ಯ.. ಆದ್ದರಿಂದಲೇ ಕಲಾವಿದನಿಗೆ ಬುದ್ದ ಇಷ್ಟೊಂದು ಕಲಕಿದ್ದಾನೆ.
ನಾವೂ ಈಗ ಕಲಾವಿದನ ಹೃದಯವಾಗೋಣ.. ಅವರವರ ಜಾತಿ, ಧರ್ಮಗಳನ್ನು ಅವರಿಗೆ ಅನಿವಾರ್ಯವಾದರೆ ಮನ ಮನೆಗಳಲ್ಲಿ ಆಚರಿಸಿಕೊಳ್ಳಲಿ ಅದು ಬೀದಿಗೆ ಬರುವುದು ಬೇಡ, ನಮ್ಮಂತವರಿಗಂತೂ ಯಾವ ಕಾರಣಕ್ಕೂ ಬೇಡವೇಬೇಡ.. ಆದರೆ…
ನಮ್ಮ ಕಲಾವಿದನಲ್ಲಿ ಆವರಿಸಿದಂತೆ, ಇಡೀ ಚಿತ್ರಸಂತೆಯಲ್ಲಿ ಆವರಿಸಿದಂತೆ, ‘ಬುದ್ದ’ ಇಡೀ ದೇಶ್ಯಾದ್ಯಂತ ಭೂಮಿ ಆಕಾಶಗಳ ಅಗಲಕ್ಕೂ ಆಲವಾಗಿ ಆವರಿಸಲಿ…
ಈ ದೇಶ “ಬುದ್ದಭಾರತ” ವಾಗಲಿ…
ಅವರವರ ಜಾತಿ, ಧರ್ಮಗಳನ್ನು ಅವರಿಗೆ ಅನಿವಾರ್ಯವಾದರೆ ಮನ ಮನೆಗಳಲ್ಲಿ ಆಚರಿಸಿಕೊಳ್ಳಲಿ ಅದು ಬೀದಿಗೆ ಬರುವುದು ಬೇಡ, ನಮ್ಮಂತವರಿಗಂತೂ ಯಾವ ಕಾರಣಕ್ಕೂ ಬೇಡವೇಬೇಡ.. ಈ ದೇಶ “ಬುದ್ದಭಾರತ” ವಾಗಲಿ…
ಇಂಥ ಭಾರತವಾಗುವ ದಿನಕ್ಕಾಗಿ ಕಾಯುತ್ತಾ …
ಓಶೋ ಅವರ ಬಹುಪಾಲು ಉಪನ್ಯಾಸಗಳು ಬುದ್ಧನ ಮತ್ತು ಲಾವೋ ತ್ಸು ರವರ ಕುರಿತಂತೆ. ಇದರಲ್ಲಿ ಒಂದನ್ನೇ ಆಲಿಸಿದರೆ .. ಅಷ್ಟೇ! ಹೊರಬರುವುದು ಸುಲಭವಲ್ಲ!