ಶಂಕರಾನಂದ ಹೆಬ್ಬಾಳ
ನಾನು ಒಂಟಿಯಾದರೆ
ಧರಿಸುವುದಿಲ್ಲೇನು…
ಒಂಟಿತನಕ್ಕೆ ಬೆಲೆಯಿಲ್ಲ
ಈ ಜಗದೊಳಗೆ…
ಜಂಟಿಯೇ ಇರಬೇಕಂತೆ…
ಇದೆ ನನಗೆ ಚಿಂತೆ…?
ಕಾಲಿನ ರಕ್ಷಣೆಗಾಗಿ,
ಕಲ್ಲುಮುಳ್ಳುಗಳು ಚುಚ್ಚದಿರಲು,
ಶೋಕಿ ಮಾಡಲು,
ಪಾದ ಕೊಳಕಾಗದಿರಲು
ನಾನು ಬೇಕು,
ಮನೆಯೊಳಗೆ ಮಾತ್ರ
ಪ್ರವೇಶ ನಿಷೇಧ…!
ವಿಧವಿಧ ವಿನ್ಯಾಸದಲ್ಲಿ
ಜೋಡಿಯೇ ಇರಬೇಕು
ಏರುಪೇರಾದರೆ ಇಲ್ಲ
ಚಿಕ್ಕದು ದೊಡ್ಡದಾದರೆ ಇಲ್ಲ,
ಒಂದೇ ನಂಬರ ಬೇಕು
ಒಂದು ಜೊತೆ ಸಾಕು…!
ಹರಿದದ್ದನ್ನು ತಿಪ್ಪೆಗೆ
ಬಿಸಾಡುತ್ತೇವೆ,
ಥುತ್… ಈಗಲೆ ಕಿತ್ತಬೇಕಾ
ದರಿದ್ರ ನನ್ಮಗಂದು…
ಎಂದು ಗೊಣಗಿ ಮತ್ತೆ,
ಹೊಸದನ್ನು ಖರೀದಿಸುವ
ಯತ್ನ…?
ಕೋಪ ನೆತ್ತಿಗೇರಲು
ಕೈಗೆ ಬರುತ್ತೇನೆ,
ಮಕ್ಕಳು ಧರಿಸಲು ಪಿಂಯ್ ಪಿಂಯ್
ಸದ್ದಿನಿಂದ ಮನಸ್ಸೆಳೆಯುತ್ತೇನೆ
ಇದ್ದಾಗ ಪಾದದ ಕೆಳಗೆ
ಹರಿದು ಹಳೆಯದಾದಾಗ
ಸವೆದು ಹೋದ ನೆನಪುಗಳ
ತಿರುಚಿ ಹಾಕಿ ಕೊನೆಯಲ್ಲಿ
ತಿಪ್ಪೆ ಸೇರುವ ವಸ್ತುವಾಗುತ್ತೇನೆ…!
ಹೀಗೆಂದು ಕೊರಗುತ್ತಿತ್ತು
ಮೂಲೆ ಸೇರಿದ ಚಪ್ಪಲಿಯೊಂದು…!
0 ಪ್ರತಿಕ್ರಿಯೆಗಳು