ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ “ಏಕತಾರಿ” ಕಥಾ ಸಂಕಲನಕ್ಕೆ ಸಂದಿದೆ.
ಡಾ. ಎಸ್ ಜಿ ಸಿದ್ದರಾಮಯ್ಯ, ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕನ್ನಡ ಕಥಾ ಪರಂಪರೆಗೆ ವಿಶಿಷ್ಟ ನುಡಿಗಟ್ಟು/ಕಾಣ್ಕೆಯ ಪರಿಚಯ; ಮಾನವೀಯ ಸಂಗತಿಯ ಹೊಸ ಹೊಳವು; ಬದುಕಿನ ಘಟನೆಗಳಲ್ಲಿಯೇ ಹೊಸ ಮಿಂಚಿನ ಹೊಳಪು ಮೂಡಿಸುವ ಶಕ್ತಿ ಕತೆಗಳಲ್ಲಿ ಇರಬೇಕು ಎನ್ನುವ ಮೂರು ಆಯ್ಕೆ ಮಾನದಂಡಗಳನ್ನು ಸಮಿತಿ ರೂಪಿಸಿಕೊಂಡಿತ್ತು.
ಈ ಮಾನದಂಡಗಳ ಆಧಾರದಲ್ಲಿ ಚನ್ನಪ್ಪ ಕಟ್ಟಿ ಅವರ “ಏಕತಾರಿ” ಲೋಕೇಶ ಅಗಸನ ಕಟ್ಟೆಯವರ “ಮೀಸೆ ಹೆಂಗಸು ಮತ್ತು ಇತರ ಕಥೆಗಳು” ಹಾಗೂ ದೀಪ್ತಿ ಭದ್ರಾವತಿಯವರ “ಗೀರು” ಕಥಾ ಸಂಕಲನಗಳು ಅಂತಿಮವಾಗಿ ಪೈಪೋಟಿಗೆ ಇಳಿದಿದ್ದವು.
ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಕಟ್ಟಿ ಕಲಾಕೃತಿಯ ಅನುಭವ ನೀಡುತ್ತಾ, ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ. ಈ ಕಾರಣಕ್ಕಾಗಿ “ಏಕತಾರಿ” ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ.
~ ಡಾ. ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್
ಅಭಿನಂದನೆಗಳು
ಕಟ್ಟಿಯವರು ಶಕ್ತಿಶಾಲಿ ಕಥೆಗಾರರು ೨೦೦೮ ರಲಿ ನನಗೂ ಈ ಪ್ರಶಸ್ತಿ ಬಂದಿತ್ತು