ಚಂದ್ರಶೇಖರ ಹೆಗಡೆ
ಇದೇನು ಮಳೆಯೇ ನಿನ್ನೊಲವಿನ ಮಾಯಾಜಾಲ
ಹೊಕ್ಕಿದಡೆಯೆಲ್ಲಾ ಬಲು ವಿಸ್ತಾರ ಲೀಲಾಜಾಲ
ಪ್ರತಾಪಕ್ಕೆಣೆಯುಂಟೆ ಸಾಲದೆ ರಣಭೇರಿಯ ಕಲ್ಲೋಲ
ಕೊಚ್ಚಿ ಹೋಗುತಿದೆ ಕಣ್ಣೆದುರೆ ನಂಬಿಕೆಗಳ ಬೆಂಬಲ
ಕಹಳೆಯೂದಿರುವೆ ಇದೇಕೋ ತಿಳಿಯದು ಯುದ್ಧ
ಸ್ವಯಂಕೃತಾಪರಾಧವೆಂದಾದರೂ ಕೂಗಿ ಹೇಳು ಓ ಪ್ರಬುದ್ಧ
ಭುವಿ ಬಗೆದ ಪಾಪಗಳ ಪಟ್ಟಿಯಿದೆಯೆನ್ನು ಮಾರುದ್ದ
ಆವರಿಸಿ ತೊಳೆದುಬಿಡು ಒಮ್ಮೆ ಹುಳುಕುಗಳ ಮೆದುಳುದ್ದ
ವಿಚಾರಗಳಿಗೇನೂ ಅಂಕೆಯಿಲ್ಲ ಬಿಮ್ಮಳೆಯೋ ಮಳೆ
ಆಚಾರವೆಂದರೆ ಸಾಕು ಒತ್ತಿ ಬರುವುದು ದುರ್ಬರದ ಕಳೆ
ಬಲು ದುಬಾರಿಯಾಯಿತೆ ಜನುಮ ತಾಳಿದ ವೇಳೆ
ಬೇಯಿಸಿಕೊಳ್ಳದಿರುವುದೇ ವಿಧಿ ಬೆಂಕಿಯನಿಕ್ಕಿ ತನ್ನ ಬೇಳೆ
ಬತ್ತಿ ಹೋಯಿತಲ್ಲ ಎದೆಯೊಳಗಿನ ಕನಸಿನ ಅಂತರ್ಜಲ
ಒಂದಕೊಂದೆಂಬಂತೆ ಬೆಳೆದಿಹುದು ಸಂಕಟಗಳ ಬಾಲ
ಸಾಗುವುದು ಹೇಗೋ ಇದು ತುಂಬಿದ ಸೇತುವೆಗಳ ಕಾಲ
ಕಾಯುತಿಹುದು ಬೇಟೆಯಾಡಲು ವಿನಾಶದ ಮಾರ್ಜಾಲ
ಜಾರುತಿದೆ ಮನುಷ್ಯನ ಹೆಜ್ಜೆಗಳಂತೆ ಬೆಟ್ಟದ ಮಣ್ಣು
ಕುಸಿದುಹೋಗಿದೆ ಹಾದಿಯಂತೆ ಭರವಸೆಯ ಬೆನ್ನು
ಎಲ್ಲಿಹುದೋ ಶ್ರೀವಿಜಯನು ಹೇಳಿದ ಸೈರಿಸುವ ಹೊನ್ನು
ಬೆನ್ನತ್ತಿದಾಗ ಸುಳಿವಿರದ ಆಗಂತುಕ ಮಳೆಯ ಕಣ್ಣು
0 ಪ್ರತಿಕ್ರಿಯೆಗಳು