ಬಿದಲೋಟಿ ರಂಗನಾಥ್
ನೇರ ಮಾತಿಗೆ ನೋವಿನ ಅಲೆ ತೀಡಿ
ಸೂರ್ಯನ ಕೈಗಿಟ್ಟರು
ಬೆಂದ ಮನಸ್ಸು
ಸಾಗುವ ಬದುಕಿನ ಪಯಣದಲ್ಲಿ
ಹೆಜ್ಜೆ ಗುರುತಾಯಿತು.
ಮರೆಯ ಹೊರಟರೂ ಮರೆಯಲಾಗದೆ
ಮೂಕ ಹಕ್ಕಿಯ ಜೊತೆ
ನೋವ ಸ್ಪುರಿಸಿದೆ
ಹಕ್ಕಿ ಕೊಕ್ಕ ತೀಡಿ ಕಣ್ಣೀರಾಕಿತು.
ಹೋಗುತ್ತಲೇ ಇದ್ದೇನೆ
ಸೂರ್ಯ ಜೊತೆಯಲ್ಲೇ ಬರುತ್ತಿದ್ದಾನೆ
ಚಂದ್ರನ ಆಗಮನದ ದಾರಿಯ ಮೇಲೆ
ಮುಳ್ಳ ಸುರುವಿದ್ದಾರೆ ಪಾಪಿಸ್ಟರು.
ಸಮಾಧಾನ ಮನಸ್ಸಿನ ಹಿಡಿಗನ್ನಡಿಯಾಗಲಿಲ್ಲ
ಹೆಪ್ಪುಗಟ್ಟಿದ ದುಃಖ ಕಣ್ಣೀರಾಗಿ
ಅಂಗೈ ಗುಣಿಯಲಿ ಬಿದ್ದಿದ್ದನ್ನ ಕೆದಕಿ ನೋಡಿದೆ
ಬದುಕಿನ ಹೂವೊಂದು ನಕ್ಕಂತಾಯಿತು.
ಛಲ ಚೆಲ್ಲುವ ಕನಸು
ಮನಸ ಮುನ್ನೆಡೆಸುತ್ತಲೇ ಇದೆ
ಬೆಳ್ಳಿ ಚುಕ್ಕಿಯ ನೋಡುತ
ಮನಸು ಹಗುರಾಗಿದೆ.
ಅಕ್ಕರೆಯ ನುಡಿಮುತ್ತುಗಳ
ಸಂತೈಸುವಿಕೆಗೆ
ಕೆಂಡ ಹುದುಗಿಸಿಕೊಂಡೂ
ನಗುವ ಚೆಲ್ಲುತ್ತಿದೆ
ಮನದೊಳಗಿನ ನವಿಲು.
0 ಪ್ರತಿಕ್ರಿಯೆಗಳು