ಜಿ ಎನ್ ಮೋಹನ್
ಚಂದ್ರಕೀರ್ತಿ ಎಂದರೆ ಹಾಗೇ.. ತಾನು ಮಾಡುವ ಪ್ರತೀ ಕೆಲಸದಲ್ಲೂ ಒಂದು ಹೊಸತನವಿರುವಂತೆ ನೋಡಿಕೊಳ್ಳುತ್ತಾನೆ. ಆತ ಮಾಧ್ಯಮದ ವಿದ್ಯಾರ್ಥಿಯಾಗಿದ್ದಾಗ, ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾಗ, ನಾಟಕ ಕಲಿಸುವ ಉಪನ್ಯಾಸಕನಾದಾಗ, ತನ್ನದೇ ತಂಡ ಕಟ್ಟಿಕೊಂಡು ನಾಟಕದ ಗುಂಗು ಹಂಚುವ ಎಲ್ಲಾ ಕೆಲಸದಲ್ಲೂ ಅವನ ಉತ್ಸಾಹ ಹಾಗೂ ಹೊಸತನ ನನ್ನನ್ನು ವಿಸ್ಮಿತನನ್ನಾಗಿ ಮಾಡಿದೆ.
ಚಂದ್ರಕೀರ್ತಿ ಈಗ ಒಂದು ಹೊಸ ನಾಟಕ ನಿರ್ದೇಶಿಸಿದ್ದಾನೆ. ಆತ್ಮೀಯರಾದ ಶಿವಕುಮಾರ ಮಾವಲಿ ಅವರ ‘ಸುಪಾರಿ ಕೊಲೆ’ ನಿನ್ನೆ ರಂಗಕ್ಕೇರಿತು. ನಾಟಕ ನೋಡಲು ವ್ಯೋಮ ಥಿಯೇಟರ್ ಕೌಂಟರ್ ನಲ್ಲಿ ಟಿಕೆಟ್ ಕೊಳ್ಳಲು ಹೋದರೆ ಅವರು ಕೊಟ್ಟ ದುಡ್ಡಿಗೆ ಪ್ರತಿಯಾಗಿ ನೀಡಿದ್ದು ಒಂದು ಚಂದನೆಯ ಪಿಸ್ತೂಲ್.
ಅರೆ! ಎಂದು ಬೆರಗಾದವರೇ ಎಲ್ಲರೂ. ನಾಟಕ ಸುಪಾರಿ ಕೊಲೆ ಅಲ್ಲವಾ ಹಾಗಾಗಿ ಪಿಸ್ತೂಲ್ ಆಕಾರದ ಟಿಕೆಟ್!. ಚಂದ್ರಕೀರ್ತಿ ಹಾಗೂ ಅವನ ತಂದೆ ಇಡೀ ರಾತ್ರಿ ನೂರಾರು ಪಿಸ್ತೂಲ್ ತಯಾರಿಸಿದ್ದಾರೆ. ಬಂದವರಿಗೆ ರಂಗಮಂದಿರದೊಳಗೆ ಹೋಗುವ ಮುನ್ನವೇ ನಾಟಕ ಹೇಗಿರುತ್ತದೆ ಎನ್ನುವ ಝಲಕ್ ಸಿಕ್ಕಿ ಹೋಗಿದೆ.
ಸದಾ ಚಡ್ಡಿ ಹಾಕಿಕೊಂಡೆ ಎಲ್ಲೆಡೆ ತಿರುಗುತ್ತಿದ್ದ ಚಂದ್ರಕೀರ್ತಿ ಈಗ ಪ್ಯಾಂಟ್ ಗೇರಿಬಿಟ್ಟಿದ್ದಾನೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ನಾಟಕದಲ್ಲಿ ಒಂದು ಪಾತ್ರ ಮಾಡಿದ್ದ ಕೀರ್ತಿ ಚಡ್ಡಿ ಹಾಕಿಕೊಂಡೇ ಸ್ಟೇಜ್ ಮೇಲೆ ಬಂದಾಗ ಎಲ್ಲರೂ ಹಾ.. ಎಂದು ನಿಟ್ಟುಸಿರಿಟ್ಟರು. ಕಳೆದುಹೋಗಿದ್ದ ಚಂದ್ರಕೀರ್ತಿ ಮತ್ತೆ ಸಿಕ್ಕಂತಾಗಿತ್ತು.
0 ಪ್ರತಿಕ್ರಿಯೆಗಳು