ರವಿಕುಮಾರ್ ನೀಹ ಹೊಸ ಕಾದಂಬರಿ ‘ನೀಗೊನಿ’
‘ಆಕೃತಿ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಲೇಖಕರ ಮಾತು ಇಲ್ಲಿದೆ.
-ರವಿಕುಮಾರ್ ನೀಹ
ಹ್ಯೂಯೆನ್ತ್ಸಾಂಗ್ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ ವಯಸ್ಸಿನಲ್ಲಿ ಬೌದ್ಧಧಮ್ಮಕ್ಕೆ ಮೋಹಿತನಾಗಿ ಸ್ವಂತ ಸಾಹಸದಿಂದ ಭಾರತಕ್ಕೆ ಬರಲು ಯೋಚಿಸುತ್ತಾನೆ. ಕತ್ತೆ, ಕುದುರೆ, ಹೇಸರುಗತ್ತೆಗಳ ಮೇಲೆ ಹೇರು ಏರಿಕೊಂಡು ವಿವಿಧ ರಾಜ್ಯ, ರಾಜರು, ದೇಶ. ದೇಶದ ಗಡಿ ಇವುಗಳನ್ನೆಲ್ಲ ದಾಟಿಕೊಂಡು ಭಾರತಕ್ಕೆ ಬರುತ್ತಾನೆ. ಬರುವಾಗ ಉಂಟಾಗುವ ವಾತಾವರಣದ ವೈಪರೀತ್ಯ, ಏಕಸಂವಹನವಿಲ್ಲದ ಭಾಷೆ, ದೇಹಕ್ಕೆ ಬೇರೆ ಬೇರೆ ಪ್ರದೇಶದ ಆಹಾರ ಒಗ್ಗದೆ, ಮರುಭೂಮಿ, ಶೀತಗಾಳಿ, ಬಿಸಿಗಾಳಿ, ಗಿರಿಕಂದರ, ಎತ್ತರದ ಪರ್ವತ, ದಾರಿಗಳಿಲ್ಲದ ಕಾಡುಮೇಡು, ಮಂಜು ಕಣಿವೆಗಳೆಲ್ಲ ಹಾದು ಬರುತ್ತಾನೆ.
ಎಷ್ಟು ಕಾಲ ಹಸಿವೆಯಿಂದ ನರಳಿದ್ದನೋ? ಆರೋಗ್ಯ ಕೆಡಿಸಿಕೊಂಡಿದ್ದನೋ? ದಾರಿಹೋಕರಿಂದ/ ಕಳ್ಳಕಾಕರರಿಂದ ಎಷ್ಟು ಹಲ್ಲೆ ಮಾಡಿಸಿಕೊಂಡಿದ್ದನೋ? ಯಾವ್ಯಾವ ಗಡಿಗಳಲ್ಲಿ ದೇಶದ್ರೋಹದ ಪಟ್ಟವನ್ನು ಹೊತ್ತಿಕೊಂಡಿದ್ದನೋ? ಒಂದು ದೇಶದ ಗಡಿಯಿಂದ ಮತ್ತೊಂದು ದೇಶದ ಗಡಿ ತಲುಪಲು ಏನೇನೂ ಪ್ರಯತ್ನಪಟ್ಟನೋ…? ಯಾವ ಯಾವ ಪ್ರದೇಶಗಳಲ್ಲಿ ಭಾಷೆಗಳ ತೊಡುಕನ್ನು ಎದುರಿಸಿದ್ದನೋ? ಇವೆಲ್ಲವನ್ನು ದಾಟಿ ಪೆಷಾವರ್ ಮೂಲಕ ಕಾಶ್ಮೀರ ಮತ್ತು ಪಂಜಾಬುಗಳನ್ನು ಹಾದು ಉತ್ತರಭಾರತಕ್ಕೆ ತಲುಪುತ್ತಾನೆ. ನಲಂದ ವಿಶ್ವವಿದ್ಯಾಲಯವನ್ನು ಸಂದರ್ಶಿಸುತ್ತಾನೆ. ಪಾಲಿ, ಸಂಸ್ಕೃತವನ್ನು ಕಲಿಯುತ್ತಾನೆ. ದಕ್ಷಿಣ, ಪಶ್ವಿಮ ಭಾರತದಲ್ಲೆಲ್ಲಾ ಸುತ್ತಾಡುತ್ತಾನೆ. ಕರ್ನಾಟಕಕ್ಕೂ ಭೇಟಿ ನೀಡಿ ಪುಲುಕೇಶಿಯ ಆಡಳಿತದ ವಿವರಗಳನ್ನು ತನ್ನ ಕೃತಿಯಲ್ಲಿ ಬರೆದಿಡುತ್ತಾನೆ.
ತ್ಸಾö್ಯಂಗ್ನ ಆಸಕ್ತಿಯ ತೀವ್ರತೆಯಿಂದ ಮಹಾ ಪರಿವ್ರಾಜಕನಾಗಿ, ಚರಿತ್ರೆಕಾರನಾಗಿ ಇವತ್ತು ನಮ್ಮ ಮುಂದಿದ್ದಾನೆ. ಆ ಕಾಲಘಟ್ಟದ ಸಾಮಾಜಿಕ, ಧಾರ್ಮಿಕ ವಾತವರಣ, ಬುದ್ಧದಮ್ಮದ ನೆಲೆಗಳು, ಗ್ರಂಥಗಳು, ರಾಜರ ಆಡಳಿತಗಳು ಇತ್ಯಾದಿಗಳೆಲ್ಲವನ್ನು ತಿಳಿಯಲು ತ್ಸಾಂಗ್ನ ಸುತ್ತಾಟದ ‘ಸಿ-ಯು-ಕಿ’ ಬಹುಮುಖ್ಯ ಆಕರ ಕೃತಿ. ಈ ಕೃತಿ ಒಂದು ಬಗೆಯಾದರೆ ಅದಕ್ಕಾಗಿ ಅವನು ಸುತ್ತಾಡಿದ, ಗಡಿರೇಖೆಗಳನ್ನು ದಾಟಿದ, ವಿವಿಧ ಪರಿಸರವನ್ನು ಎದುರಿಸಿದ ಘಟನೆಗಳೆಲ್ಲ ತೀವ್ರವಾಗಿ ಕಾಡುವಂತಹವು. ಭಾರತಕ್ಕೆ ಬಂದ ಹದಿನಾರು ವರ್ಷಗಳ ನಂತರ ತನ್ನ ತವರೂರಿಗೆ ಹಿಂತಿರುಗುತ್ತಾನೆ. ಚೀನಾದಲ್ಲಿ ಬೌದ್ಧಧಮ್ಮದ ಪ್ರಚುರಕ್ಕೆ; ಅಧ್ಯಯನಕ್ಕೆ ತೊಡಗುತ್ತಾನೆ. ನನಗೆ ತ್ಸಾಂಗ್ನ ಈ ಬಗೆಯ ಸುತ್ತಾಟ ತೀವ್ರ ಆಸಕ್ತಿ ಕೆರಳಿಸಿತು.
ಭಾರತದ ತುಂಬೆಲ್ಲಾ ಈ ರೀತಿ ಸುತ್ತಾಡಿದವರು ಮೊದಲಿಗೆ ಬುದ್ಧಗುರುವೇ ಅನಿಸುತ್ತದೆ. ಇತರರು ವ್ಯಾಪಾರಕ್ಕೆ, ರಾಜ್ಯ ವಿಸ್ತರಣೆಗೆ ವೈಯಕ್ತಿಕ ಲಾಭಕ್ಕಾಗಿ ಸುತ್ತಾಡಿದ್ದಾರೆ. ಕೊಲಂಬಸ್ ಹೊಸ ನೆಲಗಳನ್ನು ಹುಡುಕಿಕೊಂಡು ಸಮುದ್ರಯಾನ ಮಾಡಿದ್ದಾನೆ. ಪ್ರವಾಸಿಗರು ಪ್ರದೇಶ, ಸ್ಥಳ ನೋಡಲು ಓಡಾಡಿದ್ದಾರೆ. ಆದರೆ ಲೋಕಲ್ಯಾಣಕ್ಕಾಗಿ ನೆಲಗಡಿಗಳ ಹಂಗಿಲ್ಲದೆ ಅಲೆದು ಶಾಂತಿ-ಪ್ರೀತಿಯನ್ನು ಹಂಚಿದ್ದು ದಮ್ಮಗುರು.
ಆಧುನಿಕ ಭಾರತದಲ್ಲಿ ಹೀಗೆ ಸುತ್ತಾಡಿದವರು ಬಹುಶಃ ಬ್ರಿಟಿಷರೆ ಇರಬೇಕು. ತಮ್ಮ ಸಾಮ್ರಾಜ್ಯ ವಿಸ್ತರಣೆ, ವಸಾಹತು ಸ್ಥಾಪನೆ, ಜನರ ಮನಸ್ಸುಗಳನ್ನು ಅರಿಯಲು, ತಮ್ಮ ಆಡಳಿತವನ್ನು ಗಟ್ಟಿಗೊಳಿಸಲು, ತಮ್ಮ ಧರ್ಮ ಪ್ರಚಾರ ಮಾಡಲು.. ಹೀಗೆ ಬಹುಕಾರಣಗಳಿಗಾಗಿ ಅನೇಕ ಅಧಿಕಾರಿ, ಪಾದ್ರಿಗಳನ್ನು ಬಿಟ್ಟು ಸುತ್ತಾಡಿಸಿದ್ದಾರೆ. ಇದರ ಪರಿಣಾಮ ನಮ್ಮ ನೆಲದ ತಾಳೆಗರಿಗಳು, ಕಲ್ಬರಹಗಳು, ಶಾಸನಗಳು, ತಾಡೋಲೆಗಳು, ತಾಮ್ರಶಾಸನಗಳು, ಲಾವಣಿಗಳು, ಆಚರಣೆ, ಸಾಮಾಜಿಕ ಸಂಗತಿಗಳು, ಪ್ರಮುಖ ಪ್ರದೇಶಗಳು ಅವರ ಬರಹದಲ್ಲಿ ದಾಖಲಾಗಿವೆ.
ಕರ್ನಾಟಕದಲ್ಲಿ ಟೀಪು ಮಡಿದ ನಂತರ ಟೀಪು ಆಡಳಿತ ಮಾಡುತ್ತಿದ್ದ ಪ್ರದೇಶಗಳಲ್ಲಿನ ಜನರು ಈ ಯುದ್ಧಕ್ಕೆ, ಟೀಪುವಿನ ಮರಣಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬ ಮಾಹಿತಿಗಾಗಿ ಬುಕಾನನ್ ಮಲಬಾರ್ ನಿಂದ ಮೈಸೂರು ಪ್ರವಾಸ ಮಾಡುತ್ತಾನೆ. ಇದೊಂದು ರಾಜತಾಂತ್ರಿಕವಾದ ಸುತ್ತಾಟ. ಈ ಕೃತಿಯ ಸಾಕಷ್ಟು ಮಾಹಿತಿಗಳು ನಮ್ಮ ಅಧ್ಯಯನಕ್ಕೆ ಆಕರವಾಗಿವೆ. ಹೀಗೆ ಸುತ್ತಾಟದ ವ್ಯಕ್ತಿಗಳನ್ನು ಗಮನಿಸಿದರೆ ಅದೇ ಬೃಹತ್ ಕಥನವಾಗುತ್ತದೆ.
ಆದರೆ ರಾಜತಾಂತ್ರಿಕವಾದ ಇನ್ಯಾವುದೇ ಉದ್ದೇಶಗಳಿಲ್ಲದೆ ತಮ್ಮ ಹೊಟ್ಟೆಹೊರೆಯಲು ಸುತ್ತಾಡಿದ ಅಸಂಖ್ಯಾತ ಜನ, ಸಮುದಾಯಗಳು ಊರೂರು ಅಲೆದಿವೆ. ನಾಡೆಲ್ಲೆಲ್ಲಾ ಸೂರಿಗಾಗಿ ಪರದಾಡಿವೆ. ಮೊನ್ನೆ ಮೊನ್ನೆ ಕೊರೊನಾದಲ್ಲಿ ಬರಿಗಾಲಲ್ಲೇ ನಡೆದು ತಮ್ಮ ನೆಲ ಸೇರಿದವರೂ ಕಣ್ಣಮುಂದಿದ್ದಾರೆ. ಹೀಗೆ ಚರಿತ್ರೆಯಲ್ಲಿ ದಾಖಲೆಯಾಗದ ಅಸಂಖ್ಯ ಜನರ ನೆಲದ ಹುಡುಕಾಟದ ರೂಪವೇ ಈ ಬರಹ. ಇರ್ಯಾರು ಚರಿತ್ರೆಯಲ್ಲಿ ಮಹತ್ತನ್ನು ಸಾಧಿಸಿದವರಲ್ಲ. ದಾಖಲಾದವರು ಅಲ್ಲ. ಆದರೆ ಇರುವಷ್ಟು ಕಾಲ ಜೀವನಪ್ರೀತಿ ಹಂಚಿದವರು. ಎಲ್ಲಿಯೂ ಸಾಕ್ಷಿಯಾಗದೇ ಲೋಕವನ್ನು ಉಳಿಸಿ ಬದಿಗೆ ಸರಿದವರು. ಈ ನನ್ನ ಚೊಚ್ಚಲ ಕಾದಂಬರಿ ಈ ರೀತಿಯ ಹೆಸರಿಲ್ಲದವರ ಸುತ್ತಾಟದ ಕಾದಂಬರಿ.
ನೀಗೊನಿ ಇನ್ನೂರು-ಇನ್ನೂರ ಇಪ್ಪತ್ತು ವರ್ಷಗಳ ಹಿಂದಿನ ವಸ್ತುವನ್ನು ಆಧರಿಸಿರುವಂತಹದ್ದು. ಇಲ್ಲಿನ ಭಾಷೆ ಸಾಧ್ಯವಾದಷ್ಟು ಆ ಕಾಲದ್ದೇ. ಭಾಷಾ ಪ್ರಯೋಗಕ್ಕಾಗಿ ಇಲ್ಲಿ ಬಳಸಿದ್ದಲ್ಲ. ಭಾಷೆಯೇ ತನಗೆ ತಾನೆ ಕಟ್ಟಿಕೊಂಡಿರುವ೦ತಹದ್ದು. ಒಂದು ಕಾಲದ ವಿದ್ಯಾಮಾನವನ್ನು ಅದೇ ಭಾಷೆ ಇಲ್ಲಿ ಹೇಳುತ್ತಿದೆ. ಇದಕ್ಕಾಗಿ ಸಾಕಷ್ಟು ನೆಲವನ್ನು ಸುತ್ತಾಡಿದ್ದಿದ್ದೆ. ಅನೇಕ ಹಿರಿಯರನ್ನು ಮಾತನಾಡಿಸಿದ್ದೂ ಇದೆ. ಆಚರಣೆಗಳನ್ನು ಹುಡುಕಿ ಹೋಗಿದ್ದು. ಪ್ರದೇಶಗಳನ್ನು ಸುತ್ತಾಡಿದ್ದು. ಅದಕ್ಕೆ ಸಂಬ೦ಧಿಸಿದ್ದ ಲಿಖಿತ ಕೃತಿಗಳ ನೆರವನ್ನು ಪಡೆದದ್ದು ಈ ಕಥನದ ಜೊತೆಗಿವೆ. ಅಲ್ಲದೆ ಹಳ್ಳಿಗಾಡಿನ ಸಾಕಷ್ಟು ಹಿರಿಯರನ್ನು ಭೇಟಿ ಮಾಡಿ ಭಾಷೆ ಮತ್ತು ಪ್ರದೇಶದ ಸತ್ವವನ್ನು ಹಿಡಿಯಲು ಈ ಕಥನದಲ್ಲಿ ಯತ್ನಿಸಿರುವೆ.
‘ನೀಗೊನಿ’ ವಸಾಹತು ಕಾಲದಲ್ಲಿ ಮೂರನೇ ಜಗತ್ತಿನ ದೇಶದಲ್ಲಿ ಎಲ್ಲಿಯಾದರೂ ಇರಬಹುದಾದ ಕಾಲ್ಪನಿಕ ಪ್ರದೇಶ. ಇನ್ನೂರು ವರ್ಷಗಳ ಹಿಂದೆ ನಡೆದಿರಬಹುದಾದ ಘಟನೆಗಳನ್ನಿಟ್ಟುಕೊಂಡು ಕಟ್ಟಿರುವ ಕಾದಂಬರಿ. ರಾಜವ್ಯವಸ್ಥೆ ಕಳೆದುಕೊಂಡು ಬ್ರಿಟಷ್ ವ್ಯವಸ್ಥೆ ಆಡಳಿತದಲ್ಲಿ ಕಾಲೂರುತ್ತಿದ್ದ ಹೊತ್ತಿನಲ್ಲಿ ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಮೈದುಂಬಿಕೊAಡಿದೆ. ಅದರಲ್ಲೂ ಹೇಳಹೆಸರಿಲ್ಲದ ಸಮುದಾಯಗಳು, ಅಲೆಮಾರಿಗಳು, ವಸತಿರಹಿತರು ತಮ್ಮ ನೆಲೆಗಾಗಿ ಪರದಾಡಿದ ಬದುಕು ಇಲ್ಲಿದೆ.
ಜೊತೆಗÉ ಆ ಹೊತ್ತಿನಲ್ಲಿ ನಡೆದ ಧಾರ್ಮಿಕ ಸ್ಥಿತ್ಯಂತರಗಳು, ಸಾಮಾಜಿಕ ಸಂಕಟಗಳು, ಅಭಿವೃದ್ಧಿ ಕೆಲಸಗಳು. ಕೆರೆ ಕುಂಟೆ, ರಸ್ಥೆಗಳ ನಿರ್ಮಾಣ, ಆಧುನಿಕತೆಯ ಆಗಮನ… ಊರುಗಳನ್ನೇ ಇಲ್ಲವಾಗಿಸುವ ಕಾಲರಾ, ಇನ್ಪ್ಲುಯೆಂಜಾ ಸಾಂಕ್ರಾಮಿಕಗಳು ಬಂದಾಗ ಆ ಊರುಗಳನ್ನು ಪೊರÉದ ಅಜ್ಞಾತ ಮುನಿಗಳು, ನಾಟಿವೈದ್ಯಲೋಕ, ರಾಜಕೀಯ ವಿದ್ಯಮಾನ ಇವೆಲ್ಲ ‘ನೀಗೊನಿ’ಯಲ್ಲಿ ಜೀವ ಪಡೆದು ಓಡಾಡಿವೆ.
ಅನೇಕ ಸಾಂಸ್ಕೃತಿಕ ಸಂಭವಗಳು, ವಿದ್ಯಾಮಾನಗಳೇ ಇಲ್ಲಿ ಕೂತು ಕಥನ ಹೇಳುವಂತೆ ಈ ನೀಗೊನಿ ನಿರೂಪಿತಗೊಂಡಿದೆ. ಕನ್ನಡದ ಒಳಭಾಷೆಯನ್ನು ಹಿಡಿದುಕೊಂಡೇ ಇಡೀ ಕಥನ ಸಾಗಿದೆ. ಈ ಒಳನುಡಿಗಟ್ಟುಗಳು ಕಾದಂಬರಿಯನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿವೆ. ಭಾಷೆಯ ಪಸೆ ಮನಸ್ಸಲ್ಲಿ ಹಾಗೇ ಉಳಿದುಬಿಡುತ್ತದೆ. ಪಾತ್ರಗಳು ನಮ್ಮನ್ನು ಇನ್ನೂರೈವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ದು ಆ ಕಾಲದ ಸಾಂಸ್ಕೃತಿಕ ವೈಭವವನ್ನು ಕಣ್ಣ ಮುಂದಿರಿಸುತ್ತದೆ. ಮನಗಾಣಿಸುತ್ತದೆ






0 Comments