ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…

ಗೀತಾ ಹೆಗ್ಡೆ ಕಲ್ಮನೆ

ಕದಡಬೇಡ ಮನವೆ
ಹುಳಿ ಹಿಂಡಿ ತೂತು ಮಡಿಕೆಯಂತೆ
ಒಡೆದು ಹೋಗುವುದು
ಆಪ್ತೇಷ್ಟರು ಎಂದುಕೊಂಡ ಭಾವನೆ
ಭುಗಿಲೆದ್ದ ಧರೆ ಉರಿಯುವಂತೆ
ಶಾಖ ತಡೆದುಕೊಳ್ಳಲಾಗದೆ
ಲಾವಾರಸ ಉಕ್ಕುಕ್ಕಿ ಹರಿದು
ನಖಶಿಖಾಂತ ಬೆಣ್ಣೆ ಸವರುವ ಮಾತುಗಳು
ಕೇಳಿದರೂ ಸಮಾಧಾನಗೊಳ್ಳದ ಮನಸು
ಸದಾ ಚಿಂತೆಯ ಸಂತೆಯಂತಾಗುವುದು.

ಇರಬಹುದು ಅವರಿವರು ಅಂದ ಮಾತು
ಕಿವಿಗೆ ಬಿದ್ದರೆ ಕಾದ ಸೀಸದಿಂದ
ಎರಕ ಹೊಯ್ದಂತೆ ನಂಬಿಕೆಯೇ ಬುಡಮೇಲು
ಬೇಡಾ ಬೇಡಾ ಯಾವ ಮಾತು
ಹೀಗೆಯೇ ನಂಬಿಕೊಂಡವರ
ನಂಬಿಕೊಂಡಂತೆ ಇದ್ದುಬಿಡುವುದು ಲೇಸು.

ಆಗಲೋ ಈಗಲೋ
ಹೋಗುವ ಜೀವಕ್ಕೆ ಇನ್ನೆಂತಹ
ನಿರೀಕ್ಷೆ ಇದ್ದೀತು ಹೇಳು?
ಒಂದಿಷ್ಟು ಪ್ರೋತ್ಸಾಹ, ಕರುಣೆ, ಆತ್ಮೀಯ ಮಾತು
ಪಡೆದಿದ್ದು ಬದಿಗೊತ್ತಲಾದೀತೆ?
ಯಾವ ಜನ್ಮದ ಋಣಾನುಬಂಧವೋ ಏನೋ
ಇದುವರೆಗೂ ದಕ್ಕಿದ್ದು ದಿಟ ತಾನೆ..
ಮತ್ಯಾಕೆ ಇಲ್ಲದ ಗೊಡವೆ?

ಮನವೆ ನಿನ್ನೆಚ್ಚರಿಕೆಯಲಿ ನೀನಿರು
ಅಂದವರ ಬಾಯಿಗೆ ಬೀಗ ಹಾಕಲಾಗದು
ಬೇಕು ಅವರು, ಇವರು, ಎಲ್ಲರೂ
ವಸುದೈವ ಕುಟುಂಬಕಂ ಈ ಜಗದೆಲ್ಲ ಜನರು
ಒಂದಾಗಿ ನಡೆದರೇನೇ ಕ್ಷೇಮ
ಮುಖ್ಯವಾಗಿ ಬೇಕು ಬದುಕಿಗೆ
ನಂಬಿಕೆ, ಪ್ರೀತಿ, ವಿಶ್ವಾಸ, ಒಗ್ಗಟ್ಟು
ನೆಮ್ಮದಿಗಿದು ಬುನಾದಿ.

ಕಡಲಾಚೆಯ ಕನವರಿಕೆ
ನಿತ್ಯ ನೂತನ ನಿರಂತರ ಬಿಡಲಾದೀತೆ?
ಮಾರ್ಗದರ್ಶಕರಾಗಿಯೋ ಇಲ್ಲಾ
ಹಿತೈಷಿಗಳಾಗಿಯೋ ಇರಲೇ ಬೇಕಲ್ಲವೇ?
ಹದವಾಗಿ ಬೆಳೆದ ಪೈರಿಗೆ ನೆಲೆಕಾಣಿಸಲು
ಊರತುಂಬ ಡಂಗುರ ಸಾರಲಾಗದಿದ್ದರೂ
ಕೊನೆಗೆ ಹುಟ್ಟೂರಲ್ಲಾದರೂ ಗುರುತಿಸಿಕೊಳ್ಳಲು
ಹೆಗಲಾಗಿ ಬಂದವರು ಇರಲಿ ಬಿಡು
ನಡುಮನೆಯ ಬಾಗಿಲಿಗೆ
ಅಗುಳಿ ಇದ್ದಂತೆ!

‍ಲೇಖಕರು Admin

September 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: