ಗಂಧರ್ವ ರಾಯರಾವುತ
ಪುರಂದರನ ತಂಬೂರಿಗೆ ಕಟ್ಟಿ
ಉಳಿದ ಗೇಣುದ್ದ ತಂತಿ
ಶರೀಫನ ಸೋರೆ ಬುರುಡೆಗೆ….!
ಮಂದ್ರ ಸ್ಥಾಯಿಯಲ್ಲಿ ಅದೆಂಥಾ ಮಿಡಿತ.
ಬೆರಳು ಬೇರೆ……
ತಿರುಳು ಒಂದೇ…!
ಅವನ ಹಯಗ್ರೀವಕ್ಕೂ,
ಇವನ ಬಿರ್ಯಾನಿಗೂ,
ಪಾತ್ರೆ ಬೇರೆ….
ಉರಿ ಒಂದೇ….!
ನೀರು ಉಪ್ಪಾದರೇನು
ನೌಕೆ ಅಲ್ಲೇ ತೇಲಬೇಕು,
ಅನಿವಾರ್ಯ ಎಂದನಿವನು…
ಸೋರುತಿಹುದು ಮನೆಯಮಾಳಿಗೆ,
ಬಾಳು ಬಲವಂತ ಎಂದನವನು…
ತಲವಾರ್ -ತ್ರಿಶೂಲಗಳ
ಮುರಿದು -ಚಚ್ಚಿ -ಎರಕ ಹೊಯ್ದ
ನಂದಾದೀಪ ಇಷ್ಟೊತ್ತಿಗೆ ಹೊತ್ತಿಕೊಳ್ಳಬೇಕಿತ್ತು .
ನಿನಗೆಲ್ಲೊ ಹುಚ್ಚು….!
ಇಲ್ಲಿ, ಕುಲ ಕುಲ ಕುಲವೆಂಬೊ
ಹೊಡೆದಾಟ ನಿಂತಾಗ
ಅಲ್ಲಿ, ಜಿಹಾದಿಗಳ ಸಾಮೂಹಿಕ ಆತ್ಮಹತ್ಯೆ
ಎಂದು ಅಲ್ ಝಜಿರಾ ಬಿತ್ತರಿಸೀತೆ?.
ಮೆಕ್ಕಾದ ಹಾದಿಯಲ್ಲಿ ಹುಟ್ಟಬಲ್ಲವೇ
ಪಾರಿಜಾತದ ಗಿಡಗಳು.
ಪಂಡರಾಪುರದ ಸುತ್ತ
ಖರ್ಜೂರದ ಮರಗಳು.
ನನಗೇನೋ…..
ಅನುಮಾನ…..!!
0 ಪ್ರತಿಕ್ರಿಯೆಗಳು