ನಂಟು
ದೀಪ್ತಿ ಭದ್ರಾವತಿ
ನಿರ್ಧರಿಸಿದೆ ಅದೊಂದು ದಿನ
ಏನನ್ನೂ ಬರೆಯಬಾರದೆಂದು
ನನ್ನ ಪದಗಳಿಗೂ ಅಪರಿಚಿತ
ಕಾಗದಕ್ಕೂ ನಂಟು
ಇರಲೇಬಾರದೆಂದು
ಏನು ಹಕ್ಕುಂಟು ನನಗೆ
ನೂರೆಂಟು ನೋವುಗಳ
ಹರ ಹರವಿ ಅನಾಮಿಕರ
ಎದುರಿಗಿಡಲು
ಸಂತಸದ ಅವರ ಕ್ಷಣಗಳ ಮೇಲೆ
ನನ್ನದೆನ್ನುವ ಡಾಂಬರಿನ
ಮಸಿ ಸುರಿಯಲು
ಖಾಸಗಿ ಮಾತುಗಳೇಕೆ
ಮಾರುಕಟ್ಟೆಯಲಿ ಬಿಕರಿಯಾಗಬೇಕು?
ಕೊಂಡವರು ಆಳ,ಅಳತೆ.ಅಗಲ,ಉದ್ದ
ನೋಡಿ ನೋಡಿ ಲಂಗ ತೊಡಿಸಬೇಕೆ?
ಬೇಡ ಇನ್ನೆಂದು ಬೇಡ
ಕಾಣದ ಹೊಯ್ಗೆಯಲಿ
ಕುಸುರಿ ಕೆತ್ತುವ ಕೆಲಸ
ನನ್ನ ಹೆಜ್ಜೆಗಳ ಕೆಸರ
ಜಗಕೆಲ್ಲ ಹಚ್ಚುವ ಉಮೇದು..
ಎದೆಯ ಸುದ್ದಿಗಳ ನನ್ನವರ
ಮುಂದೆ ಹರಿಯಬಿಡುತ್ತೇನೆ
ಅವರು ನಕ್ಕ, ಅತ್ತ ಗಳಿಗೆಗೆ
ನಾನು ನೇರ ಸಾಕ್ಷಿಯಾಗುತ್ತೇನೆ
ಹೀಗೆಯೇ ನಂಬಿದೆ, ನಂಬುತ್ತಲೇ ಕೂತೆ
ಕೂತದ್ದು, ಕೊರೆದದ್ದು ಜಾಸ್ತಿಯಾಯಿತೇನೋ
ನನ್ನವರೆಂದರು
ಸುಮ್ಮನೆ ಅನಾವಶ್ಯಕ ಮಾತೇಕೆ
ಆಡುತ್ತ ತಿರುಗುತ್ತಿ
ಬರೆಯಬಾರದೆ ಒಂದಿಷ್ಟು ಕತೆ, ಕವಿತೆ
ಏನನ್ನಾದರೂ…
dhanyavada “avadhi”