ರಾಜು
ಚೈತ್ರದಾಗಮನ ವಸಂತಗಾನ
ತರಗೆಲೆಗಳೆಲ್ಲ ಉದುರಿ
ಹೊಸ ಚಿಗುರು ಪಡೆದು
ಹೂ ಬಿಟ್ಟಿದೆ ಮಾಮರ!
ಅಲ್ಲೊಂದು ಯಾವುದೋ ಹಕ್ಕಿ ಅಳುವ ಶಬ್ದ
ಕುತುಹಲ ಹೆಚ್ಚಾಯಿತು!
ಮಾಮರದ ಹತ್ತಿರ ಹೋದೆ
ಓ! ಅದೇ ಚೈತ್ರದಾಗಮನ ಸೂಚಿಸಿ
ವಸಂತಗಾನ ಹಾಡುವ ಕೋಗಿಲೆ!
ಬಣ್ಣದಿಂದ ಕಪ್ಪಾದರೂ
ಕಂಠದಿಂದ ಸುಂದರ ಸೃಷ್ಠಿ
ಪ್ರತಿ ವಸಂತದಾಗಮನಕ್ಕೆ ಕಾದು
ಸಂಭ್ರಮಿಸುವ ಪುಟ್ಟ ಜೀವ!
ಸೃಷ್ಠಿಯ ಸುಂದರ ಜೀವಿ
ಮಧುರ ಕಂಠದ ಮಾಯಾವಿ
ಇಂದೇಕೊ ಅಳುತ್ತಲಿದೆ
ಮನಸ್ಸು ಚಡಪಡಿಸಿತು!
ಕುತೂಹಲ ಹೆಚ್ಚಾಗಿ ಕೇಳಿಯೇ ಬಿಟ್ಟೆ,
ಓ!ಸುಮಧುರ ಕಂಠದ ಪೋರಿ
ನವ ಪಲ್ಲವದ ರಸ ಹೀರಿ
ವಸಂತಗಾನದ ಪಲ್ಲವಿ ಹಾಡುವ
ಕೂಹೂ! ಕೂಹೂ! ಕೋಗಿಲೆ ನೀನಲ್ಲವೆ!?
ನವ ಪಲ್ಲವದ ಪಲ್ಲಕ್ಕಿಯಲ್ಲಿ ಕುಳಿತು
ಏಕೆ ಈ ರೋಧನ!?
ಪಟ ಪಟ ರೆಕ್ಕೆ ಬಡಿದು…
ಮತ್ತೇನೋ ಹೇಳ ಹೊರಟ ನನಗೆ
ತಡೆದು ಹೇಳಿತು….!
ಕಾನನ ಕಡಿದು, ಬೆಟ್ಟ ಅಗೆದು
ಕಾಂಕ್ರೀಟ್ ನಾಡು ಬೆಳೆದಿದೆ
ನರನ ದೂರದಾಸೆಗೆ! ಅಲ್ಲಲ್ಲ… ದುರಾಸೆಗೆ
ಮಲಿನವಾಗಿದೆ ಭೂರಮೆಯ ಒಡಲು
ಪಕ್ಷಿ ಪ್ರಾಣಿಗಳು ಹರಿಸುತ್ತಿವೆ ಕಣ್ಣೀರ ಕಡಲು
ನವ ಪಲ್ಲವದ ರಸವೀಗ ವಿಷದ ಬಟ್ಟಲು!!
ವಿಷದ ರಸ ಹೀರಿ ಕೆಟ್ಟು ಹೋಗಿದೆ ಕಂಠ
ಕೂಹೂ! ಕೂಹೂ! ಮಧುರ ಧ್ವನಿ ಈಗ
ಅಳುವಂತೆ ಕೇಳಿಸುತಿದೆ
ಕೇಳುವರಾರೀಗ ನನ್ನ ರೋಧನ!
ನರನ ದುರಾಸೆಗೆ ಬಲಿ ನನ್ನೀ ಜೀವನ!! ಎಂದಿತು.
ನಿನ್ನ ಆಸಗೆ,ದುರಾಸೆಗೆ
ಸೃಷ್ಠಿಯ ಜೀವ ಸಂಕೂಲವೀಗ ಅಳಿವಿನಂಚಿನಲ್ಲಿ
ನಿನ್ನ ಮೂಲ, ನಿರ್ಮೂಲ ಸನ್ನಿಹಿತ ನೆನಪಿರಲಿ
ಎಲೆ! ಮಾನವ ನಿನಗೆ ಧಿಕ್ಕಾರವಿರಲಿ…!!
0 ಪ್ರತಿಕ್ರಿಯೆಗಳು