ಎರಡು ಕವನಗಳು
ಜಯಶ್ರೀ ಬಿ.ಕದ್ರಿ
ಕೇಳಿಸುವುದೇ ಇಲ್ಲ
ತಂತಿ ಮುರಿಯುವ ಸದ್ದು
ಬದುಕು ಮೆಲ್ಲನೆ ಬವಳಿ
ಕಾಡಿಸುವ ಹೊತ್ತು
ಉಸಿರು ಬೆರೆಯುವ ಸದ್ದು
ಜೀವ ಕರಗುವ ಹೊತ್ತು
ಎದೆಯ ಬಡಿತಕ್ಕೆ
ಬೆಚ್ಚಿ ಬೀಳುವ ಹೊತ್ತು
ಕೇಳಿಸುವುದೇ ಇಲ್ಲ
ಒಳಗೆ ಉರಿಯುವ ಸದ್ದು
ತನುವ ಮೀರಿದ ಮನವ
ಇರಿವ ಮೌನದ ಸದ್ದು
ನಾಡ ಕಾಡುವ ಸದ್ದು
ಭೂಮಿಯೊಡಲಿನ ಸದ್ದು
ಆತ್ಮದನುರಣನಕೆ
ಕಂಪಿಸುವ ಸದ್ದು
ಅಡಿಗೆ
ಅಡಿಗೆ ಕಲಿಸುತ್ತಾಳೆ
ಟಿವಿಯಲ್ಲಿನ ಚೆಲುವೆ
ಇದೋ ಇಲ್ಲಿ
ಹಿಟ್ಟನ್ನು ಚೆನ್ನಾಗಿ ನಾದಿ
ರುಚಿಗೆ ಉಪ್ಪು ಮಸಾಲೆ ಎಲ್ಲ
ಕಾದ ಎಣ್ಣೆಯಲಿ ಕರಿಯಬೇಕು
ಹಾಲನ್ನು ಕುದಿ ಕುದಿಸಿ
ಮತ್ತೆ ಸಕ್ಕರೆ ಹಣ್ಣು
ಇದೇ ಪಂಚಾಮೃತ
ಮಕ್ಕಳಿಗಿದು ಇಷ್ಟ.
ನಿಮಗೆ ಬಿಡುವಿರದಲ್ಲಿ
ನಿಮಗೆ ಸುಸ್ತಾದಲ್ಲಿ
ಇದೋ ದಿಢೀರ್ ಅಡಿಗೆ
ಚಟ್ಪಟ್ ಚಾಟ್
ಆರೋಗ್ಯದಡಿಗೆ
ನಿಮ್ಮ ಗಂಡನ ನಗುವು
ನಿಮ್ಮ ಮಕ್ಕಳ ಗೆಲುವು
ಎಚ್ಚರಿಕೆ ಸೀದು ಹೋದೀತು
ಮೊಸರು ಹುಳಿಯಾದೀತು
ಆಸ್ಪೋಟದಾಗಳಿಗೆ
ಎಣ್ಣೆ ಸಿಡಿದೀತು
ಬೆಂದ ಇಡ್ಲಿಯ ಘಮಲು
ಬಡಿದ ರೊಟ್ಟಿಯ ತೆಳುವು
ಫಳಪಳಿಪ ಕಿಚನ್ನು
ನಿಮಗೆ ಬೇಕೇನಿನ್ನು
ನೀವು ಆದರ್ಶ ಗೃಹಿಣಿ.
modala kavite istavaaytu jayashree madam-smitha
chennagide ma’m