ಹೃದಯ ಶಿವ
ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ,
ಮಳೆಗಾಲದಲ್ಲಿ ಮಗಳು
ನೆಮ್ಮದಿಯಿಂದ ನಿದ್ರಿಸಬಹುದು.
ಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ
ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ,
ಒಡವೆಗಳ ಮಾತು ಬಿಡಿ,
ಪುಸ್ತಕಗಳಾದರೂ ಉಳಿದುಕೊಳ್ಳಲಿ
ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ
ಕಳ್ಳಕಾಕರಿಂದ ಪಾರಾಗಿ.
ಇಲ್ಲೊಂದು ಕಿಟಕಿ ಇದೆಯಲ್ಲ,
ಇದರ ಸರಳುಗಳ ನಡುವೆಯೇ ಕಾರ್ಖಾನೆಯುಗುಳುವ
ಗಬ್ಬು ವಾಸನೆ
ಕೋಣೆಗೆ ನುಗ್ಗುತ್ತಿದೆ ಇತ್ತೀಚೆಗೆ…
ಇಗೋ ಮುಚ್ಚಿಯೇ ಬಿಟ್ಟೆ,
ಈ ಕಿಟಕಿ ಇತ್ತೆಂಬುದಕ್ಕೆ ಸಾಕ್ಷ್ಯಗಳೇ ಇಲ್ಲ-
ಇನ್ನು ನಿರಾತಂಕ ವಿಶ್ರಾಂತಿ ಅಪ್ಪನಿಗೆ.
ಚಕ್ಕೆಗಳಾಗಿ ಉದುರಿಹೋಗುವ ಮುನ್ನ
ಈ ಗೋಡೆಗಳಿಗಿನ್ನಾದರೂ
ಸುಣ್ಣ ಹೊಡೆಸಿಬಿಡಬೇಕು, ಇಲ್ಲವೇ ಬಣ್ಣ-
ಹಬ್ಬ ಈಗಲೇ ಈ ಕ್ಷಣವೇ ಆಗ
ಈಗ ಮನೆಗೊಂದು ಕಳೆ,
ನೆಮ್ಮದಿ.
ಉಫ್ !
ರಿಮೋಟಿನೊಳಗಿನ ಜಿರಳೆ ಮರಿ ಕೊಡವಿ
ಟಿವಿ ಮುಂದೆ ಕೂತೆ,
ಹಾಡು ಪ್ರಾಸಾರವಾಗುತ್ತಿತ್ತು :
“ನೀ ಲೋಕದ ಕಾಳಜಿ ಮಾಡಬೇಕಂತಿ
ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ”
ಕವನ ಹೃದಯಕೆ ಮುಟ್ಟಿತು. ಖುಷಿ ಆಯ್ತು.
ಮಡಿಲು
ಸೂಪರ್ ಸರ್