ಜಿ ಟಿ ನರೇಂದ್ರ ಕುಮಾರ್
ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ ವಿನೋಬಾ ಭಾವೆ, ಲೋಹಿಯಾ ಮುಂತಾದ ಮಹನೀಯರು ಭೇಟಿ ನೀಡಿದ್ದರು. ಶ್ರೀರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿಯಂತಹ ಕ್ಲಾಸಿಕ್ ಕೃತಿಗಳು ರಚನೆಯಾದ ಮನೆ. ಈ ಮನೆಯ ಮಾಲೀಕತ್ವವು ಕುವೆಂಪುರವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದಗೌಡರಲ್ಲಿದೆ.
ಸದರಿ ಮನೆಯನ್ನು ಸ್ಮಾರಕವನ್ನಾಗಿ ರೂಪಿಸಲು ಸರ್ಕಾರಕ್ಕೆ ಬಿಟ್ಟುಕೊಡಲು ಸೂಕ್ತ ಪರಿಹಾರದೊಂದಿಗೆ ಸಿದ್ದವಾಗಿರುವುದಾಗಿ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದರು (2017). ಆದರೆ ಅವರ ಅಪೇಕ್ಷೆ ನಮ್ಮನ್ನಾಳುವವರ ಇಚ್ಚಾಶಕ್ತಿಯ ಕೊರತೆಯೋ ಅಥವಾ ಮತ್ತಾವುದೋ ಕಾರಣದಿಂದ ಸಾಧ್ಯವಾಗಿಲ್ಲ.
ಮೈಸೂರಿನಲ್ಲಿ, ಭಾರತೀಯ ಇಂಗ್ಲಿಷ್ ಲೇಖಕ ಶ್ರೀ ಆರ್ ಕೆ ನಾರಾಯಣನ್ ರವರ ಮನೆಯನ್ನು ಖಾಸಗಿಯವರು ಖರೀದಿಸಿ, ಅದನ್ನು ನೆಲಸಮ ಮಾಡುತ್ತಿರುವಾಗ, ವಾಯುವಿಹಾರದಲ್ಲಿದ್ದ ಸಾರ್ವಜನಿಕರೊಬ್ಬರು ಅಂದಿನ ಮಂತ್ರಿ ಶ್ರೀ ಸುರೇಶ್ ಕುಮಾರ್ ರವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರಂತೆ. ತಕ್ಷಣವೇ ಸ್ಪಂದಿಸಿದ ಮಂತ್ರಿಗಳು ಅಂದಿನ ಜಿಲ್ಲಾಧಿಕಾರಿ ಕ್ಯಾ.ಮಣಿವಣ್ಣನ್ ರವರಿಗೆ ಮನೆ ಕೆಡವದಂತೆ ತಡೆಯಲು ಸೂಚಿಸಿ, ಖಾಸಗಿ ವ್ಯಕ್ತಿಯವರಿಂದ ಸರ್ಕಾರವೇ ಮರು ಖರೀದಿಸಿ ಲೇಖಕರ ಮನೆಯನ್ನು ಸ್ಮಾರಕವನ್ನಾಗಿ ರೂಪಿಸಿದ್ದನ್ನು ನಾವಿಲ್ಲಿ ನೋಡಬಹುದು.
ಇದಲ್ಲವೇ ಕಾರ್ಯದಕ್ಷತೆ ಮತ್ತು ನಮ್ಮನ್ನಾಳುವವರಿಗೆ ಸಾಹಿತಿಗಳ ಬಗ್ಗೆ ಇರಬೇಕಾದ ಗೌರವ. ಈಗ ಮೈಸೂರಿನ ಹೆರಿಟೇಜ್ ಕಟ್ಟಡವಾಗಿರುವ ಕುವೆಂಪುರವರ ಮನೆ ‘ಉದಯರವಿ’ಯನ್ನು ಸರ್ಕಾರ ಸೂಕ್ತ ಪರಿಹಾರ ನೀಡಿ ಸ್ಮಾರಕವನ್ನಾಗಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿ ಪ್ರಾರ್ಥನೆ.
0 ಪ್ರತಿಕ್ರಿಯೆಗಳು