ಡಿಸೆಂಬರ್ 29 ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಹೆಸರಾಂತ ಸಾಹಿತಿ ಎ.ಕೆ.ರಾಮಾನುಜನ್ ಅವರ ಕಥೆಯನ್ನಾಧರಿಸಿದ ‘ಅಣ್ಣಯ್ಯನ ಮಾನವಶಾಸ್ತ್ರ’ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಡಬಲ್ ಬಿಲ್ ಮಾದರಿಯ ನಾಟಕ ಪ್ರದರ್ಶನ ಇದಾಗಿದ್ದು, ಪ್ರಥಮಾರ್ಧದಲ್ಲಿ ಅಣ್ಣಯ್ಯನ ಮಾನವ ಶಾಸ್ತ್ರ ಹಾಗೂ ದ್ವಿತಿಯಾರ್ಧದಲ್ಲಿ ಮಾಯಾಮೃಗ ನಾಟಕ ಪ್ರದರ್ಶಿಸಲಾಗುತ್ತದೆ. ಬಿ.ಪಿ.ಅರುಣ್ ರಂಗರೂಪ ಮಾಡಿರುವ ಈ ನಾಟಕಗಳನ್ನು ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ನಿರ್ದೇಶಿಸಿದ್ದಾರೆ.
‘ಅಣ್ಣಯ್ಯನ ಮಾನವ ಶಾಸ್ತ್ರ’
ಕನ್ನಡದ ಸಣ್ಣ ಕಥೆಗಳಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಎ.ಕೆ.ರಾಮಾನುಜನ್ ಅವರ ‘ಅಣ್ಣಯ್ಯನ ಮಾನವ ಶಾಸ್ತ್ರ’. ಬುದ್ಧಿ ವಿದೇಶಿಯಾಗಿ, ಮನಸ್ಸು ಸ್ವದೇಶಿಯಾಗಿ ನಿರ್ಮಿಸುವ ದ್ವಂದ್ವವನ್ನು, ಪರಂಪರಾಗತವಾಗಿ ಬಂದ ಸಂಪ್ರದಾಯದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾ ಸಾಗುತ್ತದೆ. ದೂರದ ಚಿಕಾಗೋದಲ್ಲಿ ಕುಳಿತು, ತನ್ನ ದೇಶದ ಸಂಪ್ರದಾಯದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಹೊರಟ ಅಣ್ಣಯ್ಯ, ತನಗರಿವಿಲ್ಲದೆ, ತನ್ನ ಬದುಕಿನ ವೈಯಕ್ತಿಕ ಬದುಕಿನ ದುರಂತಗಳಿಗೆ ಮುಖಾಮುಖಿಯಾಗುತ್ತಾನೆ. ಈ ಕಥೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯ ತನ್ನನ್ನುತಾನು ಹೇಗೆ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ ಒಡ್ಡಿಕೊಳ್ಳಲೇಬೇಕಾದ ಅನಿವಾರ್ಯತೆಯ ಪರಿಸ್ಥಿತಿಯು ಹೆಚ್ಚು ಮಹತ್ವಪೂರ್ಣವೆನಿಸುತ್ತದೆ.
‘ಮಾಯಾಮೃಗ‘
ಕನ್ನಡ ಸಾಹಿತ್ಯದಲ್ಲಿ ತನ್ನ ವಸ್ತುವಿನಿಂದಾಗಿ ಮಾತ್ರವಲ್ಲದೆ, ಅದರ ಅಭಿವ್ಯಕ್ತಿಯ ರೀತಿಯಿಂದಲೂ ವಿಶಿಷ್ಟವಾದ ಸ್ಥಾನ ಪಡೆದಿರುವಕಥೆ ಮಾಯಾಮೃಗ. ಸಾವಿನ ನಿಗೂಢತೆಯನ್ನು ಅಮೂರ್ತ ದೃಷ್ಟಿಕೋನದಿಂದ ನೋಡುವ ಯತ್ನ ‘ಮಾಯಾಮೃಗ’, ಮನುಷ್ಯನ ಮನಸ್ಸಿನ ಅಪಾರ ಸಾಧ್ಯತೆಗಳನ್ನೂ, ನಂಭಿಕೆಗಳನ್ನೂ ಚೋದ್ಯ ಮಾಡುತ್ತಲೇ ವಿಶ್ವದ ನಿಗೂಢತೆಯನ್ನು ಭೇದಿಸಲಾಗದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಮೂಢ ನಂಬಿಕೆಗಳನ್ನು ಧಿಕ್ಕರಿಸಿ ವೈಜ್ಞಾನಿಕ ದೃಷ್ಟಿಕೋನವನ್ನು ಸಮರ್ಥಿಸಲು ಹೊರಡುವ ಷಾ ಮತ್ತು ಚಂದ್ರು, ತಮ್ಮ ದ್ವಂದ್ವಗಳಲ್ಲೇ ಹಾಸ್ಯಾಸ್ಪದ ರೀತಿಗಳಲ್ಲಿ ಸಿಲುಕಿ, ತಮಗರಿವಿಲ್ಲದೆ ತಮ್ಮದೇ ಆಟದ ದಾಳಗಳಾಗುತ್ತಾರೆ.
ರಂಗವಿನ್ಯಾಸ- ಹೆಚ್.ಕೆ.ದ್ವಾರಕಾನಾಥ್, ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರ ವಿನ್ಯಾಸ-ನಂದಿನಿ ಕೆ.ಆರ್. ರಂಗಪರಿಕರ-ಸಂತೋಷ್ ಕುಮಾರ್ ಕುಸನೂರ್ ಮತ್ತು ಶ್ರೀಕಾಂತ್, ಪ್ರಸಾದನ-ಸರಿತಾ ರಾಜೇಶ್ ಮತ್ತು ರಾಘವೇಂದ್ರ ಬೂದನೂರು, ನಿರ್ವಹಣೆ-ಬಿ.ರಾಜೇಶ್ ಸಂಗೀತ ಮತ್ತು ನಿರ್ದೇಶನ-ಪ್ರಶಾಂತ್ ಹಿರೇಮಠ.
0 ಪ್ರತಿಕ್ರಿಯೆಗಳು