ತೇಜಾವತಿ ಎಚ್ ಡಿ
ಅಸೂಯೆ ದ್ವೇಷದ ಕಿಡಿಯೊಂದು
ಸಾವಿರ ಕುಡಿಗಳಿಗೆ ಜನ್ಮನೀಡಿದೆ
ಎಲ್ಲವಕ್ಕೂ ಬೆಳೆದು ಹೆಮ್ಮರವಾಗುವ ಹಂಬಲ
ಮುಖವಾಡದೊಳಗಿನ ಕರಾಳ ನರ್ತನಕ್ಕೆ
ತಾಯಿ ಬೇರು ಕೃಶವಾಗಿ
ಕುಸಿದು ಬೀಳುತ್ತಿರುವ ಸಾಮ್ರಾಜ್ಯವ ಕಂಡು
ಸಮೃದ್ಧವಾಗಿದ್ದ ರೆಂಬೆ ಕೊಂಬೆ ಹಕ್ಕಿ -ಗೂಡು
ಹಸಿರು ಹೂ ಹಣ್ಣುಗಳ ನೆನೆದು
ಭೂದೇವಿಗೆ ಮೊರೆಯಿಡುತ್ತಿದೆ
ಫಕೀರನ ಸತ್ಯ ಅಹಿಂಸೆಯ ಬೀಜ ಬಿತ್ತಿ
ಬುದ್ಧನ ಕಾರುಣ್ಯದ ಮಳೆ ಸುರಿದು
ಗತಿಸಿದ ಕುರು ಸಾಮ್ರಾಜ್ಯದ ಕುರುಹಿಲ್ಲದಂತೆ
ನಂದನವನವಾಗಲಿ ಈ ನಾಡು
ಮುರುಳಿಯ ಗಾನಕ್ಕೆ ತರುಲತೆಗಳು ತಲೆದೂಗಿ
ಹಕ್ಕಿಪಿಕ್ಕಿಗಳು ಉಲಿದು ಝರಿ ತೊರೆಗಳು ನರ್ತಿಸಲಿ
ಮಹತ್ತಿಗಾಗಿ ಸಂದ ಬಲಿದಾನಗಳು ಮುಕ್ತಿ ಕಂಡು ಹಾರವಾದ ಜಲ ಮೂಲಗಳು ಶುದ್ಧಗೊಂಡು
ಬಳಲಿದವರ ದಣಿವು ತಣಿದು
ಏರಿಗಳ ಮೇಲೆ ನಿಂತು
ಒಬ್ಬಂಟಿಯಾಗಿ ರೋಧಿಸುತ್ತಿರುವ
ವೀರಗಲ್ಲು ಮಹಾಸತಿಗಲ್ಲುಗಳ ಮೇಲೆ
ಚರಿತ್ರೆಯ ಬೆಳಕು ಹರಿದು
ಸ್ಪರ್ಶಿಸುವ ತೃಣಕಣಕ್ಕೂ
ಅಭಿಮಾನದ ಹೊಳೆ ಹರಿಯಲಿ
0 ಪ್ರತಿಕ್ರಿಯೆಗಳು