ಕಾಂತರಾಜು ಕನಕಪುರ
ಭಾರ…
ನೀ ತೊರೆದು ಹೋದ ಮೇಲೆ
ನಿನ್ನೆಗಳು ಹೀಗೆ ಎಂದೂ
ನನ್ನ ಕಾಡಿರಲಿಲ್ಲ
ಹೀಗೇ…
ಒಮ್ಮೊಮ್ಮೆ
ಸುಮ್ಮನೆ ಕುಳಿತಿರುವಾಗ
ಒತ್ತಿ ಬರುತ್ತಿದ್ದ ದುಃಖಕ್ಕೆ
ಕಣ್ಣುಗಳು ಮಂಜಾಗುತ್ತಿದ್ದವಷ್ಟೇ…
ಕಂಬನಿ ಹರಿದು ಎಂದೂ
ಕೆನ್ನೆಗಳು ಕರೆಗಟ್ಟಿರಲಿಲ್ಲ
ಮನದ ಕೊಳದಲ್ಲಿ
ದುಃಖ ಮಡುಗಟ್ಟಿದ್ದರೂ
ಸಂಯಮದ ಕಟ್ಟೆಯೊಡೆದು
ಕೋಡಿಯಾಗಿ ಜಾಹೀರಾಗಿರಲಿಲ್ಲ
ಹುಣ್ಣಿಮೆಯ ಆಗಸಕ್ಕೆ
ಮೋಡ ಮುಸುಕಿದ್ದರೂ
ಚಂದಿರ ಬರುವನೆಂಬ ಭರವಸೆಯ
ಒರತೆ ಎಂದಿಗೂ ಬತ್ತಿರಲಿಲ್ಲ…
ಕವಿತೆ ಶಿಶುವಿನ ಪ್ರಸವ
ಯಾವತ್ತಿಗೂ ಪ್ರಾಯಾಸ ಎನಿಸದೆ
ಹೀಗೆ ಅವಧಿ ಪೂರ್ವ ಗರ್ಭಪಾತದ
ಊಹೆಯೇ ನನಗೆ ಇರಲಿಲ್ಲ…
ನೀ ಕೊಂದ ಸಂಬಂಧದ
ನೆನಪುಗಳೆಂಬ ಹೆಣಗಳನು
ಬದುಕಿಡೀ…
ನಾ ಹೊರಬೇಕೆನುವ
ಕಲ್ಪನೆಯೇ ನನಗಿರಲಿಲ್ಲ…
ಚೆನ್ನಾಗಿದೆ