– ಎಚ್ ಜಿ ಮಳಗಿ
ದಿ:22-08-2014ರಂದು ಸಂಜೆ ಮೂತ್ರಪಿಂಡ ವೈಫಲ್ಯ ಹಾಗೂ ಲಘು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ ಯು ಆರ್ ಅನಂತಮೂರ್ತಿಯವರು ಬೆಂಗಳೂರಿನಲ್ಲಿ ‘ನಿಧನ’ರಾದ ಸುದ್ದಿಯಿಂದ ಕನ್ನಡ ಸಾರಸ್ವತ ಲೋಕ ‘ನಿರ್ಧನ’ವಾದಂತಾಯಿತು. ಅವರು ಬಹುಮುಖ ಪ್ರತಿಭಾನ್ವಿತ ಬಹು ವಿವಾದಾತ್ಮಕ ವ್ಯಕ್ತಿತ್ವದವರು. ಅವರ ಕೃತಿಗಳಿಗಿಂತ ಹೆಚ್ಚು ಅವರು ನೀಡುವ ಹೇಳಿಕೆಗಳು ವಿವಾದಾತ್ಮಕವಾಗಿರುತ್ತಿದ್ದವು. ವಿವಾದಗಳನ್ನು ಅವರೇ ಸೃಷ್ಟಿಸಿಕೊಳ್ಳುತ್ತಿದ್ದರು. ಹಿಂದೂ ಧರ್ಮದ ವಿರುದ್ಧ ಅವರು ಯಾವಾಗಲೂ ಕಿಡಿಕಾಡುತ್ತಿದ್ದರು. ಅದು ವಿವಾದದ ಸ್ವರೂಪ ಪಡೆದು ರಾಜ್ಯಾದ್ಯಂತ ಪ್ರತಿಭಟನೆಯ ಕಾವು ಪಡೆದುಕೊಳ್ಳುತ್ತಿತ್ತು.
ಅದು ಮೋದಿಯವರ ವಿರುದ್ಧವೇ ಇರಲಿ ಅಥವಾ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆಯ ವಿವಾದವೇ ಇರಲಿ ಬ್ರಾಹ್ಮಣರು ಮಾಂಸಾಹಾರಿಗಳಾಗಿದ್ದರು ಎನ್ನುವ ವಿವಾದವೇ ಇರಲಿ ಅವರೆಂದೂ ತಾವು ನೀಡಿದ ಹೇಳಿಕೆಗಳನ್ನು ಯಾವುದೇ ಸಂದರ್ಭಗಳಲ್ಲಿಯೂ ಬದಲಿಸುತ್ತಿರಲಿಲ್ಲ. ಮಹಾ ಹಟವಾದಿಯಷ್ಟೇ ಅಲ್ಲ ಮಹಾ ಧೈರ್ಯವಂತ ಕೂಡಾ. ಆದರೆ ಇತರ ಧರ್ಮಗಳ ಬಗ್ಗೆ ಅವರು ಮೃದುಧೋರಣೆ ಹೊಂದಿದ್ದಾರೆಂದು ಅವರ ಮೇಲಿರುವ ಇನ್ನೊಂದು ಆರೋಪ. ಇತರ ಧರ್ಮಗಳಲ್ಲಿ ಬ್ಲಾಸ್ಫೇಮಿ ಅಥವಾ ದೈವನಿಂದನೆ ಮಹಾ ಅಪರಾಧ. ಅಂಥ ದೈವನಿಂದನೆಯನ್ನು ಹಿಂದೂಧರ್ಮ ಮಾತ್ರ ಅರಗಿಸಿಕೊಳ್ಳುತ್ತದೆ ಎನ್ನುವುದನ್ನು ಅವರು ಕೊನೆಯವರೆಗೂ ಅರಿತುಕೊಳ್ಳಲಿಲ್ಲವೆನಿಸುತ್ತದೆ. ವೈಯಕ್ತಿತವಾಗಿ ನಾನು ಅವರ ವಿವಾದಗಳನ್ನು ವಿರೋಧಿಸಿದ್ದವನು. ಆದರೆ ಪ್ರತಿಭೆಗೆ ಎಲ್ಲರೂ ಮನ್ನಣೆ ನೀಡಲೇ ಬೇಕು. ತುಂಬ ಮಡಿವಂತ ಸಮಾಜ ವ್ಯವಸ್ಥೆ ಇದ್ದಂತಹ ಅರ್ಧಶತಮಾನದ ಹಿಂದೆಯೇ ಅವರು ಸಂಸ್ಕಾರದಂತಹ ಕ್ರಾಂತಿಕಾರಿ ಸಾಹಿತ್ಯ ರಚನೆ ಮಾಡಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದು ಈಗ ಇತಿಹಾಸ.
ಅವರ ಆತ್ಮ ಚರಿತ್ರೆ ‘ಸುರಗಿ’ಯಲ್ಲಿ ಆ ಕಾಲದ ಡಾಂಭಿಕ ಸಮಾಜದ ಚಿತ್ರಣವನ್ನು ಓದಿದವರಿಗೆ ಅನಂತಮೂರ್ತಿಯವರ ವಿಚಾರಗಳ ಅರಿವಾಗುತ್ತದೆ. ಆದರೆ ಜಡಗಟ್ಟಿದ್ದ, ಮೂಢನಂಬಿಕೆಗಳ ವೈಭವೀಕರಣವಾಗುತ್ತಿದ್ದ ಸಮಾಜದಲ್ಲಿ ಅವರ ವಿಚಾರಗಳು ಬದಲಾವಣೆಯ ಗಾಳಿಯನ್ನು ಬೀಸಿತು. ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದು ಅವರನ್ನು ಅಲಂಕರಿಸಿ ತಾವೂ ಅಲಂಕರಿಸಿಕೊಂಡವು. ಏನೇ ಆದರೂ ಅವರು ಎಷ್ಟೇ ನಾಸ್ತಿಕ ಮನೋಭಾವದವರಾಗಿದ್ದರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಸುಳ್ಳಲ್ಲ. ಅವರು ನಂಬದ ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲೆಂದು ದೇವರನ್ನು ನಂಬುವ ನಾನು ಬೇಡಿಕೊಳ್ಳುತ್ತೇನೆ.
0 ಪ್ರತಿಕ್ರಿಯೆಗಳು