ಕು ಸ ಮಧುಸೂದನ ರಂಗೇನಹಳ್ಳಿ
ಕವಿ ಕೂತಿದ್ದಾನೆ ಬಿಳಿಬಿಳಿ ದಿರಿಸಿನಲ್ಲಿ
ಬಣ್ಣಬಣ್ಣದ ಕವಿತೆಗಳು ವಿಮರ್ಶಕರ
ತೊಡೆಗಳೇರಿ ಮುದ್ದಿಸಿಕೊಳ್ಳುತಿವೆ
ಹುಟ್ಟಿಸಿದವನಿಗೂ ಅರ್ಥವಾಗದವುಗಳವನ
ಗುಣಗಾನದ ಜೋಗುಳದಲ್ಲಿ ನಿದ್ರೆಗೆ ಜಾರಿವೆ.
ಬಿಚ್ಚಿ ಹರವಿದ ನಿನ್ನ ಕೂದಲಿನ
ಒಳಗಿರಬಹುದಾದ ಕವಿತೆಗಳ
ಹೆಕ್ಕಿ ತೆಗೆಯುವುದು
ಕವಿಯೊಬ್ಬನ ಕೆಲಸವೆಂದೇಕೆ
ಬೀಗುವೆ.
ಓದುಗರು ಹಗುರವಾದ ಕವಿತೆ ಕೇಳುತ್ತಿದ್ದಾರೆ
ಪಂಡಿತರು ತೂಕದ ಕವಿತೆ ಕೇಳುತ್ತಿದ್ದಾರೆ
ವಿಮರ್ಶಕರು ಸೂಕ್ಷ್ಮತೆಯ ಕವಿತೆ ಕೇಳುತ್ತಿದ್ದಾರೆ
ಯಾವುದೂ ಅರ್ಥವಾಗದೆ
ಕವಿತೆಯ ಸಹವಾಸ ಬಿಟ್ಟಿದ್ದೇನೆ.
ಯಾವುದಾದರೂ ಕವಿತೆಯಾಗಬಹುದು
ಖಾಲಿ ಮಡಕೆ
ನೀರು ತುಂಬಿದ ಕೊಡ
ತಳ ಒಡೆದ ದೋಣಿ
ಕಾಲು ಮುರಿದ ಏಣಿ
ಅರ್ದ ಸೇದಿದ ಸಿಗರೇಟು!
ಓದೋಕೆ ಓದುಗರು ಬೇಕಷ್ಟೆ!
0 ಪ್ರತಿಕ್ರಿಯೆಗಳು