ಕಾವೇರಿ, ಕೊಡಗಿನ ರಾಜರು ಮೈಸೂರು ಅರಸರು, ಟಿಪ್ಪು.. ಕುತೂಹಲದ ಓದು…
ಕುಂದೂರು ಉಮೇಶ ಭಟ್ಟ
ತುಂಗಭದ್ರ ಸೀಮೆ ಹೊನ್ನಾಳಿ ತಾಲೂಕು ಮೂಲದವನಾದರೂ ನನ್ನ ಬದುಕು ರೂಪಿಸಿದ್ದು ಕಾವೇರಿ ಸೀಮೆಯೇ… ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿನ ಕಾಯಕದೊಂದಿಗೆ ಬದುಕಿಗೆ ಬೆಸೆದದ್ದು ಕಾವೇರಿ. ಅಷ್ಟರ ಮಟ್ಟಿಗೆ ಕಾವೇರಿ ಪ್ರಭಾವ ತಲಕಾವೇರಿಯಿಂದ ಆರಂಭಗೊಂಡು ದೂರದ ತಮಿಳುನಾಡುವರೆಗಿದೆ. ಇದಕ್ಕೆ ಕಬಿನಿ ನದಿ ಮೂಲಕ ಕೇರಳದ ನಂಟು ಕೂಡ.
ಕಾವೇರಿ ಹಾಗೂ ಉಪನದಿಗಳು ಹರಿಯುವ ಹಲವು ಪ್ರದೇಶಗಳಲ್ಲಿ ಗೆಳೆಯರು, ಕುಟುಂಬದವರೊಂದಿಗೆ ಹತ್ತಾರು ಬಾರಿ ಸುತ್ತಾಡಿದ್ದೇನೆ. ನೀರು ಕಂಡ ಖುಷಿಯೇ ಬೇರೆ. ಸುತ್ತಮುತ್ತಲಿನ ಪರಿಸರ ಅರಿಯುವಪ್ರಯತ್ನವನ್ನೂ ಮಾಡಿರುವೆ. ನನ್ನ ಈ ಅನುಭವಕ್ಕೆ ಪುಷ್ಟಿ ನೀಡಿದ್ದು ‘ಕಾವೇರಿ ತೀರದ ಪಯಣ’ ಕೃತಿ. ಈ ಕೃತಿ ಕಾವೇರಿ ಹರುವು, ಅದು ಹುಟ್ಟು ಹಾಕಿರುವ ಸಂಸ್ಕೃತಿ, ಪ್ರಭಾವಳಿ ಎಷ್ಟು ದೊಡ್ಡದಿದೆ ಎನ್ನುವುದನ್ನು ತೆರೆದಿಡುತ್ತದೆ.
ಪತ್ರಕರ್ತ ಗೆಳೆಯ ವಿಕ್ರಂ ಕಾಂತಿಕೆರೆ ಕಳೆದ ತಿಂಗಳು ಮೈಸೂರಿನಲ್ಲಿ ಭೇಟಿಯಾದಾಗ ಈ ಪುಸ್ತಕ ಕೈಗಿತ್ತರು. ರಜೆಯಲ್ಲಿರುವ ಕಾರಣಕ್ಕೆ ಪೂರ್ಣ ಮನಸಿನಂದ ಪುಸ್ತಕದ ಒಳಹೊಕ್ಕೆ. ಕೇರಳ ಮೂಲದ ಪತ್ರಕರ್ತ ಒ.ಕೆ.ಜೋಣಿ ಅವರು ರಚಿಸಿರುವ ಕೃತಿಯನ್ನು ವಿಕ್ರಂ ಕನ್ನಡಕ್ಕೆ ತಂದಿದ್ದಾರೆ.
‘ಇತಿಹಾಸ ಪುಟಗಳನ್ನು ಇಣುಕಿ, ಸಂಸ್ಕೃತಿಯ ಒಳನೋಟ ಗಳ ಮೇಲೆ ಬೆಳಕು ಚೆಲ್ಲಿ, ಜನಜೀವನದ ಕುರಿತು ಆಳವಾದ ಅಧ್ಯಯನ ನಡೆಸಿ, ಮೇಲ್ನೋಟಕ್ಕೆ ಗಮನಕ್ಕೆ ಬಾರದೇ ಇರುವ ವಿಚಾರಗಳತ್ತ ಸೂಕ್ಷ್ಮದೃಷ್ಟಿ ಬೀರಿ ಪ್ರವಾಸ ಕಥನವನ್ನು ಅನುಭವ ದರ್ಶನವಾಗಿಸಿರುವ ಜೋಣಿ ಒಮ್ಮೆ ಪತ್ರಕರ್ತರಾಗಿ, ಮತ್ತೊಮ್ಮೆ ಅಧ್ಯಯನ ಕಾರರಾಗಿ, ಇನ್ನೊಮ್ಮೆ ಸಾಮಾಜಿಕ ಚಿಂತಕರಾಗಿ, ಮಗದೊಮ್ಮೆ ಭಕ್ತ, ಚಾರ್ವಾಕರಾಗಿ, ಪೂರ್ವಾಗ್ರಹ ಗಳನ್ಬು ದೂರ ಅಟ್ಟಿ, ಹೃದಯ ವೈಶಾಲ್ಯ ಮೆರೆಯುವ ಉದಾರಿಯಾಗಿ ಕಾವೇರಿ ಸೀಮೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ’ ಎಂದು ನೀಡುವ ಪ್ರವೇಶಿಕೆಯೇ ಕೃತಿಯ ಒಟ್ಟಂದ ಹೇಳುತ್ತದೆ.
ಕೊಡಗಿನ ಕಾವೇರಿ ಅಭಿಮಾನ, ಅಲ್ಲಿನ ರಾಜರ ಇತಿಹಾಸವನ್ಬು ಎಳೆಎಳೆಯಾಗಿ ಬಿಡಿಸಿಡುತ್ತಾ ಕಾವೇರಿ ಹಾಗೂ ಉಪನದಿಗಳಿಗುಂಟ ರೂಪಿತಗೊಂಡಿರುವ ಇತಿಹಾಸ, ಸಂಸ್ಕೃತಿ, ವರ್ತಮಾನವನ್ಬು ಜೋಣಿ ತೆರೆದಿಡುತ್ತಾರೆ. ಮೈಸೂರು ಅರಸರ ಕುರಿತ ಕಥಾನಕಗಳು, ಹೈದರಾಲಿ, ಟಿಪ್ಪು ಕುರಿತಾದ ಅಪನಂಬಿಕೆಗಳನ್ನು ಸ್ಪಷ್ಟ ದಾಖಲೆಗಳೊಂದಿಗೆ ಹೇಳುತ್ತಾ ಹೋಗುತ್ತಾರೆ.
ಒಬ್ಬ ಲೇಖಕ ವಿಷಯವನ್ಬು ಗ್ರಹಿಸುವ ಜತೆಗೆ ಅದನ್ನು ಅಕ್ಷರ ರೂಪಕ್ಕೆ ತರುವ ಮೂಲಕ ಇತಿಹಾಸ ಹಾಗೂ ವರ್ತಮಾನವನ್ಬು ಮುಖಾಮುಖಿ ಯಾಗಿಸುವ ಕ್ರಿಯೆಯನ್ನು ಚೆನ್ನಾಗಿಯೇ ನಿಭಾಯಿಸಲಾಗಿದೆ. ೩೫ ಲೇಖನಗಳು ಕಾವೇರಿ ಹಾಗೂ ಅದರ ಸೀಮೆಯ ವೈವಿಧ್ಯತೆಯನ್ನು ಹೇಳುತ್ತವೆ. ಮೂಲ ಮಲೆಯಾಳ ಕೃತಿಯನ್ಬು ವಿಕ್ರಂ ಸ್ಥಳೀಯತೆಗೆ, ವಿಷಯ ಸ್ಪಷ್ಟತೆಯೊಂದಿಗೆ ಅನುವಾದಿಸಿದ್ದು, ಇಡೀ ಓದು ಕುತೂಹಲ ನೀಡುವ ಜತೆಗೆ ಕಾವೇರಿ ತೀರದಲ್ಲಿ ಪ್ರಯಾಣಿಸಿದ ಅನುಭವ ನೀಡುತ್ತದೆ.
ಕಾವೇರಿ, ಕೊಡಗು, ಉಪನದಿಗಳು, ಸಂಸ್ಥಾನಗಳು, ಒಟ್ಟಾರೆ ಇತಿಹಾಸ ತಿಳಿಯಲು,ಸ್ಪಷ್ಟತೆ ಪಡೆಯಲು ಕಾವೇರಿ ತೀರ ಕೃತಿ ಓದುತ್ತಾ ಪಯಣಿಸಿ. ಓದಿನ ನತರ ಮತ್ತೆ ಕಾವೇರಿ ತೀರದಲ್ಲಿ ಪಯಣಿಸಿ ನೋಡಿ…
ಕನ್ನಡಕ್ಕೆ ವಿಶಿಷ್ಟ ಕೃತಿ ತಂದ ವಿಕ್ರಂಗೂ ಅಭಿನಂದನೆ ಹೇಳೋಣ….
0 ಪ್ರತಿಕ್ರಿಯೆಗಳು