ನರೇಂದ್ರ ಶಿವನಗೆರೆ
ಶನಿವಾರ ಸಂತೆಯ
ಬಿರುಬಿಸಿಲ ಮಧ್ಯಾಹ್ನದಲ್ಲಿ
ಬಿಸಿಬಿಸಿ ಹಬೆಯಾಡುವ ಡಿಂಸಂ ಮಾರುವ
ಚೈನೀಸ್ ಅಂಗಡಿಯ ಮುಂದೆ
ಕೆಂಪು ಛತ್ರಿ ಹರಡಿ
ಕುಳಿತ,
ಬಟ್ಟಲುಗಣ್ಣಿನ ಹುಡುಗಿ.
ತಾಗಿಯೆ, ನಿಂತ
ತೆರೆದ ಗಾಡಿಯ ಮೇಲೆ,
ಹಲಸಿನ ಹಣ್ಣು ಬಿಡಿಸುತ್ತ
ಕೂತ
ಒಂಟಿ ಕಾಲಿನ ಹುಡುಗ
ಹುಡುಗನ ಕಣ್ಣಲ್ಲಿ ಇನ್ನೂ,
ದೇಶ ಕಾಯ್ದ
ನೆನಪು!
ಇಬ್ಬರ,
ಸವಿ ಜೋಡಿಯ ಕುರುಹು
ಪಕ್ಕದ ಜೋಕಾಲಿಯಲ್ಲಿ
ಚಂದದ ಕೂಸು
ಸಮಭಾಜಕ ರೇಖೆಯ
ಸೂರ್ಯನ
ಬಿರುಬಿಸಿಲಿಗೆ,
ಬಗ್ಗದೆ ನಿಂತ ಅವಳು.
ಮುಂದೆ ಹರಡಿದ
ಬಿಸಿಲಿಗೆ, ಹೊಳೆವ
ಹೊಂಬಣ್ಣದ
ಹಲಸಿನ ಹಣ್ಣು.
ಹಿಂದೆ,
ಹಣ್ಣಿನ ಸೊಲೆ ಸೊಲೆಗೂ
ಮೆಲ್ಲನೆ
ಎಣ್ಣೆ ಪೂಸುತ್ತ
ನವಿರು, ನವಿರಾಗಿ
ಪ್ರೀತಿಯ, ತೊಳೆ ಬಿಡಿಸುತ್ತಾ
ಕೂತ
ಅವನು.
ಬೆಳ್ಳಂಬೆಳಿಗ್ಗೆ ಎದ್ದು
ತಿತಿವಂಗ್ಸಾ ಮಳೆಕಾಡಿನ
ಕಣಿವೆಗಳಲ್ಲಿ
ಪಟ್ಟೆಹೊಡೆದ
ಹೊಂಬಣ್ಣದ
ಹಲಸಿನ ಹಣ್ಣುಗಳನ್ನು
ವಾರವೆಲ್ಲಾ ಕಲೆಹಾಕಿ
ಶನಿವಾರದ ಸಂತೆಗೆ
ಅಣಿಯಾಗುವ ಇವರು!
ಸಂತೆಯಲ್ಲಿ
ದಾಂಪತ್ಯದ
ಕನಸ ಮಾರುವವರು!
ಬಿಡದೇ ದುಡಿವ
ಉಣ್ಣುವ ಕೈಗಳಿಗೆ
ಯಾವತ್ತೊ ಬಲವಿರಲಿ!
ಹಲಸಿನ ಘಮಲಿನ
ಅವರ ದಾಂಪತ್ಯ
ಪೇಟೆ ಬೀದಿಗೆಲ್ಲಾ
ಹರಡಲಿ.
ಇಂದು,
ಬುದ್ದ ಪೂರ್ಣಿಮೆ!
ಚೆಂದದ ಕವಿತೆ! ಕಾಡಿತು ಕವಿತೆ.
Istapattiddakke dhanyavaadagalu!
ಅದ್ಬುತ ಕಣ್ರೀ..
Dhanyavaadagalu medam!
ವಾಹ್ !! ಒಳ್ಳೆಯ ಕವಿತೆ