ಮಂಜುನಾಥ್ ಚಾಂದ್
ಇಲ್ಲಿರುವ ಇಬ್ಬರು ಹುಡುಗರ ಹೆಸರು ಚಿರಂಜನ್ ಕುಮಾರ್ ಮತ್ತು ಕೌಸ್ತುಭ್ ಹೆಬ್ಳೀಕರ್. ಇಬ್ಬರೂ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು.
ಇವರ ಕಾಲೇಜಿನ ಪಾಸಲೆಯಲ್ಲಿರುವ ಏಳು ಬೃಹತ್ ಮರಗಳನ್ನು ತೆಗೆಯಬೇಕಾದ ಅನಿವಾರ್ಯ ಪ್ರಸಂಗ ಬಂದಾಗ ಈ ಹುಡುಗರು ಮಾಡಿದ ಯೋಚನೆ ಮರಗಳ ಸ್ಥಳಾಂತರ. ಏಳೂ ಮರಗಳನ್ನು ಅತ್ಯಂತ ಜೋಪಾನದಿಂದ ಬುಡದ ಮಣ್ಣು, ಬೇರಿನ ಸಮೇತ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ. ಮುಂದೆ ಅಷ್ಟೂ ಮರಗಳನ್ನು ಕ್ರೇನ್ ಮೂಲಕವೇ ಹತ್ತು ಕಿ.ಮೀ. ಹೆಚ್ಚು ದೂರದ ಬನಶಂಕರಿ ಆರನೇ ಹಂತದ ಬಿಡಿಎ ಬಡಾವಣೆಯ ಮೊದಲ ಬ್ಲಾಕ್ನಲ್ಲಿರುವ ಶಿಲ್ಪೋದ್ಯಾನಕ್ಕೆ ಸ್ಥಳಾಂತರಿಸಿದ್ದಾರೆ. ಇಲ್ಲಿಯೂ ಮರಗಳಿಗೆ ಲಗತ್ತಾದ ಅಗಲದ ಗುಂಡಿಗಳನ್ನು ತೋಡಿ ಮರಗಳ ಮರುಸ್ಥಾಪನೆ ಮಾಡುವಲ್ಲಿ ಸಫಲರಾಗಿದ್ದಾರೆ. ಇಬ್ಬರ ಮುಖದಲ್ಲಿ ಸಂತೃಪ್ತ ಭಾವ…
ಇದಾಗಿ ತಿಂಗಳು ಕಳೆದಿದೆ.
ಮರ ನೆಟ್ಟರೆ ಸಾಕೇ? ನೀರು ಹಾಕಿ ಪೋಷಿಸಬೇಕಲ್ಲ? ಈ ಹುಡುಗರು ಬಸವನಗುಡಿಯಿಂದ ವಾರಕ್ಕೆ ಎರಡು ಮೂರು ಬಾರಿ ಬೆಳಗಾತವೇ ಬಂದು ನೀರುಣಿಸುತ್ತಾರೆ. ಮಕ್ಕಳಿಗಿಂತ ಪ್ರೀತಿಯಿಂದ ಕಾಣುತ್ತಾರೆ.
ಈಗ ಈ ಮರಗಳು ಭೂಮ್ತಾಯಿ ಮಡಿಲಿಗೆ ಬೇರುಗಳನ್ನು ಇಳಿಸುತ್ತಿವೆ. ಎರಡು ಗಸಗಸೆ ಮರಗಳು ಆಗಲೇ ಚಿಗುರೊಡೆದಿವೆ. ಮಕ್ಕಳಿಬ್ಬರ ಕಣ್ಣಲ್ಲಿ ಎಂಥ ಖುಷಿ ಅಂತೀರಿ?
ನಮ್ಮ ಈ ಯುವ ತಲೆಮಾರು ಹಾದಿ ತಪ್ಪುತ್ತಿವೆ ಎಂಬುದು ಸುಳ್ಳೇ ಸುಳ್ಳು. ಇವರೇ ನಮ್ಮ ನಿಜದ ಕಣ್ಮಣಿಗಳು. ಈ ಏಳೂ ಮರಗಳು ನಮ್ಮ ಬಡಾವಣೆಯ ಜೀವದುಸಿರು. ಅವನ್ನು ನೀರುಣಿಸಿ ಬೆಳೆಸಲು ನಮ್ಮ ಬಡಾವಣೆಯ ನಿವಾಸಿಗಳೂ ಈಗ ಸಂಕಲ್ಪ ತೊಟ್ಟಿದ್ದೇವೆ…
ಇಷ್ಟಕ್ಕೆಲ್ಲ ಈ ಹುಡುಗರು ಖರ್ಚು ಮಾಡಿದ ದುಡ್ಡು ಎಷ್ಟಂತೀರಿ?
ಒಂದು ಲಕ್ಷಕ್ಕೂ ಅಧಿಕ…!!
ಈ ಹುಡುಗರು ನಿಜಕ್ಕೂ ಅಭಿನಂದನಾರ್ಹರಲ್ಲವೇ?
ಸಾರ್ಥಕವಾದ ಕೆಲಸ, ಇತರರಿಗೆ ಮಾದರಿಯಾಗಲಿ.
ಸ್ತುತ್ಯರ್ಹ! ಇತರರೂ ಅನುಸರಿಸುವಂತಾಗಲಿ!