ಎಸ್ ಜಿ ಸಿದ್ದರಾಮಯ್ಯ
ಇಂದು ಬೆಳಗು ಜಾವ ನಾಲ್ಕು ಐದು ಗುರುವೆ
ಇದ್ದಕ್ಕಿದ್ದಂತೆ ಹೊಲದ ಬದಿಯ ಕೆರೆಯ ಬಳಿ
ಭೇಟಿಯಾದಿರಿ.
ನೀವು ಬಂದಾಗ ಆಗಿನ್ನ ಮಳೆ ನಿಂತಿತ್ತು.
ಧರೆಯೆಲ್ಲ ಹೊಳೆಹೊಳೆಯುತಿತ್ತು.
ಸೂರ್ಯನ ತನಿಕಿರಣ ರಾಜಿಯು
ಮೈಗೆ ನಚ್ಚನೆ ಹಿತಕಾರಿಯಾಗಿತ್ತು.
ಅಲ್ಲಿ ಯಾರೂ ಇರಲಿಲ್ಲ : ಇದ್ದವರು ಮೂವರೆ
ನಮ್ಮಿಬ್ಬರ ನಡುವೆ ಇನ್ನೊಬ್ಬ ಅಪರಿಚಿತ.
ಲಗುಬಗೆಯಲಿ ಕಟ್ಟಿಕೊಂಡಿರಿ
ಕಟ್ಟಿದ ಪಂಚೆಯ ಮೇಲೆತ್ತಿ.
ನೋಡಿದರೆ ಅಲ್ಲಿ ಕೆರೆದಂಡೆಯಲ್ಲಿ
ಅರಳಿ ನಿಂತಿದ್ದ ಅಣಬೆಗಳು!.
ಬದಿಯಲ್ಲಿ ಕೆರೆಯ ಒಳಗೆ ಚಾಚಿದ
ಮಣ್ಣದಿಬ್ಬದ ಮೇಲೆ
ಕಣ್ಣಿಗೆ ಕಂಗೊಳಿಸುವ ಅಣಬೆಗಳು!
ಇತ್ತ ನೀವು ಕೀಳತೊಡಗಿದಂತೆ ಏರಿಮೇಲಿನ
ಸಾಲು ಅಣಬೆಗಳ
ಅತ್ತ ನಾನು ಮಣ್ಣದಿಬ್ಬದ ಎಡೆಗೆ ಹರಿದೆ.
ತಡೆದಿರಿ ನನ್ನ “ಮೊಸಳೆಗಳಿವೆ ನಿಲ್ಲು” ಎಂದಿರಿ.
ಕೇಳುವ ವಯಸ್ಸಲ್ಲ
ಹುಚ್ಚು ಹುಮ್ಮಸ್ಸಿನಲ್ಲಿ ಮುನ್ನುಗ್ಗಿದೆ.
ಅದೆ ಆಗಲೆ ನಿಮ್ಮ ಮಾತಿನ ಮೂರ್ತರೂಪಾಗಿ
ನೀರಸೀಳುತ ಹರಿಹಾಯ್ದಿತು ಮೊಸಳೆ.
ಇನ್ನೇನು ಬಾಯಿ ಹಾಕಬೇಕೆಂಬಷ್ಟರಲ್ಲಿ
ಅದಾವ ಬಲ ಪ್ರಯೋಗಿಸಿದಿರೋ
ಎಳೆದುಬಿಟ್ಟಿರಿ ಹಿಂದಕ್ಕೆ.
ಒಂದಲ್ಲ ಎರಡಲ್ಲ ಬರೋಬ್ಬರಿ
ಹತ್ತು ಹೆಜ್ಜೆ ಹಿಂದಕ್ಕೆ.
ಹಿಡಿದ ಕೊರಳಪಟ್ಟಿ ಹಿಡಿದಂತೆ ನಿಂತಿರಿ
” ದೊಡ್ಡವರ ಮಾತೆಂದರೆ ಕಿಮ್ಮತ್ತಿಲ್ಲ “
ಆ ದನಿ ಜೋರಿಗೆ ಎಚ್ಚರಾಯಿತು ಗುರುವೇ
ಗುರುಪಾದವೇ , ಬಚ್ಚಬರಿಯ ಕತ್ತಲಿನಲ್ಲಿ
ಕರಗಿದ ಕನಸು. ತೆರೆದ ಕಣ್ಣುಗಳೆದುರು
ಮೊರೆ ಮೊರೆದು ಮರಳಿ ಮರಳಿ ಅದೇ.
ಅದು ಅನುಭವ : ಅನುಭವ ಅಲ್ಲದ ಅನುಭವ
ಎನ್ನಲೆ? ಮನಸ್ಸು ಒಪ್ಪುತ್ತಿಲ್ಲ.
ಕಂಡದ್ದು ಸುಳ್ಳೆ? ಕರೆದದ್ದು ಸುಳ್ಳೇ?
ನೀವು ಎಳೆದ ಕೊರಳ ಬಿರುಸಿಗೆ
ಮೊಸಳೆ ಕಂಡು ಕಂಗಾಲಾದ ಬೀಸಿಗೆ
ಎದೆಯಾರದ ಉಸಿರು ಏದುಸಿರು!
ಈಗಲೂ ಈ ಕ್ಷಣ ಹಸಿರಾಗಿದೆ ಉಸಿರಾಗಿದೆ.
ರೂಪಕಗಳು ನಿಜದ ಗಮನಿಕೆಗಳು
ಇದ್ದೂ ಇರದ ಭಾವಾನುಭೂತಿಗಳು.
0 ಪ್ರತಿಕ್ರಿಯೆಗಳು