ಮನೋಹರ ನಾಯಕ್ / ಮುಂಬೈ
ತೀರಿ ಹೋದವರ ಸಂತಾಪ-ಸೂಚಕದ ಎರಡು ನಿಮಿಷದ ಮೌನಗಳನ್ನೆಷ್ಟೋ ನೋಡಿಹೆನು..
ಯಾರೂ ಸಾಯದಿರಲಿ ಅನ್ನೋ ಅತಂಕ-ಸೂತಕದ ಸ್ಮಶಾನಮೌನ ಮಾತ್ರ ಇದೇ ಮೊದಲು ನೋಡಿದ್ದು.
‘ತೆರೆದಷ್ಟು ತೆರೆದುಕೊಳ್ಳುತ್ತದೆ ಹಾದಿ’ ಎಂದವರ ಉದ್ದಗಲ ಅಳೆದಿಹೆನು..
ಮುದುಡಿಕೊಂಡ ಬಾಲಗಳ ಗಾತ್ರ-ಗೋತ್ರ ಮಾತ್ರ ಇಂದೇ ಮೊದಲು ಕಂಡಿದ್ದು.
ಉಸಿರಾಡೋಕ್ಕೂ ಪುರುಸೊತ್ತಿಲ್ಲ ಅಂತಿದ್ದವರು..
ಉಸಿರಾಟ ಬಿಟ್ಟರೆ ಬೇರೆ ಸೊತ್ತಿಲ್ಲ ಅಂತಿದ್ದಾರೆ.
ಎಲವೆಲವೋ, ಬಲ್ಲಿರೇನಯ್ಯ ನಾನ್ಯಾರೆಂದು ಅಂದವರು..
ಅಯ್ಯಯ್ಯೋ, ಬಿಲವೆಲ್ಲಿದೆ ಅಯ್ಯ ಅಂತಿದ್ದಾರೆ.
ಬತ್ತಲೆ ಮನಗಳೆಲ್ಲ ಕತ್ತಲೆಮನೆ ಸೇರಿವೆ..
ಬಾಳು ‘ಕೈಕಟ್ಟಿ ಬಾಯ್ಮುಚ್ಚಿ’ ಕೂತಿದೆ..
ಒಲೆ ಮುಂದೆ ಸಂಕೋಲೆಗಳು ಕಾಯುತಿವೆ..
ಬೇಳೆ ಬೇಯುತ್ತಿಲ್ಲ, ಬದುಕಿಗೆ ಬೆಲೆಯಿಲ್ಲ.
ಕುರುಡು ಕಾಂಚಾಣವ ಕಾಡಿ ಬೇಡುವವರಿಲ್ಲ..
‘ಭಾಗ್ಯದ ಲಕ್ಷ್ಮೀ..’ಯ ಹಾಡಿ ಹೊಗಳುವವರಿಲ್ಲ.
ನೋಡಿದಲ್ಲೆಲ್ಲ ಕಲಿ!
ಎಲ್ಲಿ.. ಕಲ್ಕಿ ಎಲ್ಲಿ?
Original Hindi Writer: Unknown
ಚೆನ್ನಾಗಿದೆ ಅನುವಾದ.