ಕಥಾ ಸಂಕಲನ- ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು.
ಕತೆಗಾರ್ತಿ- ಶಾಂತಿ ಕೆ ಅಪ್ಪಣ್ಣ
ಉಸ್ಮಾನ್ ಚಿಮ್ಮಲಗಿ
ಒಟ್ಟು ಹದಿಮೂರು ಕತೆಗಳ ಈ ಕಥಾ ಸಂಕಲನ ವಿಭಿನ್ನ ಕಥಾ ವಸ್ತುಗಳಿಂದ ಓದುಗರ ಗಮನ ಸೆಳೆಯುತ್ತವೆ.
ಇಲ್ಲಿನ ಬಹಳಷ್ಟು ಕತೆಗಳು ಹೆಣ್ಣಿನ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತವೆ. ಪ್ರಚಲಿತ ಸಮಾಜದಲ್ಲಿ ಹೆಣ್ಣು ಅಂತರ್ ಜಾತಿ. ಅಂತರ್ ಧರ್ಮೀಯ ವಿವಾಹವಾದಾಗ ಅವಳಿಂದ ಕಳೆದುಹೋಗುವ ಸಂಬಂಧಗಳು ಮಗ್ಗುಲ ಮುಳ್ಳುಗಳಾದರೆ ಮಾಡಿಕೊಂಡವನೂ ಬಿಟ್ಟು ಹೋದಾಗ ಸಮಾಜದಿಂದ ಬಹಿಷ್ಕರಿಸಲ್ಪಟ್ಟು ಮಕ್ಕಳೊಂದಿಗೆ ಅನುಭವಿಸುವ ಯಾತನೆಗಳು ಚಿಂತಾಜನಕವಾಗಿವೆ.
ಹೆಣ್ಣು ಮತ್ತು ಹೆಣ್ಣಿನಿಂದ ಸಿಗುವ ಸುಖ ಮಾತ್ರ ಬೇಕು ಎನ್ನುವ ಪುರುಷರು ಮದುವೆ ಮತ್ತು ಅದರ ನಂತರದಲ್ಲಿ ಬರುವ ಸಮಸ್ಯೆಗಳು ಬೇಡ ಎನ್ನುವ ಮನಸ್ಥಿತಿಯಿಂದಾಗಿ ಹೆಣ್ಣು ಅನುಭವಿಸುವ ನೋವುಗಳು ಅನೇಕ. ಸಮಾಜದಲ್ಲಿ ನಡೆಯುವ ಎಲ್ಲ ಅಕ್ರಮ ಸಂಬಂಧಗಳಿಗೂ ಕೇಡುಗಳಿಗೂ ಹೆಣ್ಣನ್ನೇ ಗುರಿಯಾಗಿಸಿ ಶೋಷಿಸುವ ವ್ಯವಸ್ಧೆಯ ಬೇರುಗಳು ತುಂಬಾ ಆಳಕ್ಕೆ ಇಳಿದಿವೆ.
ಇಂತಹ ಕೆಲಸಗಳನ್ನು ಈ ಜಾತಿಯವರೇ ಮಾಡಬೇಕು ಎನ್ನುವ ಉಚ್ಚ ಸಮಾಜದವರು ತಾವೇ ಆ ಕೆಲಸ ಮಾಡಬೇಕಾಗಿ ಬಂದಾಗ ತೋರುವ ಪ್ರತಿರೋಧ ತಾವು ಮಾಡುವಾಗ ಅರಿಯದಿರುವುದು ವಿಪರ್ಯಾಸ. ಇಂದಿನ ಕಚ್ಚಾಟಗಳ ನಡುವೆಯೂ ಇನ್ನೂ ಗಟ್ಟಿಯಾಗಿ ಉಳಿದಿರುವ ಸೌಹಾರ್ಧ ಪರಂಪರೆಯನ್ನು ಇಲ್ಲಿನ ಕೆಲವು ಕತೆಗಳು ಉದಾಹರಿಸುತ್ತವೆ.
ಮಕ್ಕಳಿಗಾಗಿ ಎಲ್ಲವನ್ನು ಮಾಡಿಟ್ಟು ಮುಪ್ಪಾವಸ್ಥೆಯಲ್ಲಿ ಅವರಿಂದ ಅನುಭವಿಸುವ ವಯಸ್ಸಾದವರ ಯಾತನೆಗಳುˌ ಹಸಿವು ಕಲಿಸುವ ಪಾಠಗಳುˌ ಮಾಫಿಯಾ ಜಗತ್ತಿನಲ್ಲಿ ನಡೆಯುವ ಅಕ್ರಮ ಧಂಧೆಗಳುˌ ಅವು ಸೃಷ್ಠಿಸುವ ಅನಾಹುತಗಳುˌ ಪ್ರೀತಿಗಾಗಿ ಹುಡುಗಿಗಾಗಿ ಗೆಳೆಯನಿಗಾಗಿ ಏನನ್ನಾದರೂ ತ್ಯಾಗ ಮಾಡುವ ಅಮಾಯಕ ಹುಡುಗರುˌ ಏನೂ ಅರಿಯದವರು ಮಾಫಿಯಾ ವಿರುದ್ಧ ಹೋರಾಡಿ ಮಾಡಿಕೊಳ್ಳುವ ಅನಾಹುತಗಳು ಹೀಗೆ ಹಲವು ಕಥಾವಸ್ತುಗಳನ್ನು ಇಲ್ಲಿನ ಕತೆಗಳು ಒಳಗೊಂಡಿವೆ.
ಒಂದೇ ಸಮನೇ ಓದಿಸಿಕೊಂಡು ಹೋಗುವ ಇಲ್ಲಿಯ ಕತೆಗಳು ಮನಸ್ಸಿನಲ್ಲಿ ಹಲವಾರು ಯೋಚನೆಗಳನ್ನು ಹುಟ್ಟುಹಾಕುತ್ತವೆ. ನಮ್ಮನ್ನು ಕಾಡುತ್ತವೆ. ಓದಿದ ಮೇಲೆ ಯಾರಿಗಾದರೂ ಹೇಳಲೇಬೇಕು ಎಂಬಷ್ಟು ಖುಷಿ ಕೊಡುತ್ತವೆ. ಇದಿಷ್ಟು ನನಗೆ ನಿಲುಕಿದ್ದು ಮಿಕ್ಕಿದ್ದನ್ನು ನೀವೇ ಓದಿ.
0 ಪ್ರತಿಕ್ರಿಯೆಗಳು