ಸೌಮ್ಯ ದಯಾನಂದ
ಅದು
ಎರಡನೆಯ ಬಸಿರು..!
ಡಾಕ್ಟರ್
ಹೊಟ್ಟೆಯ ಮೇಲೆ
ಸ್ಕ್ಯಾನಿಂಗ್ ಯಂತ್ರವನ್ನು
ಹೊರಳಿಸುವಾಗ
ನನ್ನ ಕಣ್ಣುಗಳು
ಕಂಪ್ಯೂಟರ್ ಪರದೆಯ ಮೇಲೆ
ಹೊರಳಾಡುತ್ತಿದ್ದವು..!
ಗಂಡೆಂಬ ಗುರುತು
ಎಲ್ಲಿಯೂ ಸಿಗಲಿಲ್ಲ..!
ಅಥವಾ
ನನಗೇ ತಿಳಿಯಲಿಲ್ಲ..!
ಲೇಬರ್ ವಾರ್ಡಿನಲ್ಲಿ
ಮತ್ತೊಮ್ಮೆ
ನನ್ನದು ಅದೇ ಪ್ರಶ್ನೆ
“ಯಾಕೆ..ಕೇಳಿಸ್ಲಿಲ್ವಾ..?!
ಎಷ್ಟ್ಸಾರಿ ಹೇಳ್ಬೇಕು..?!”
ಡಾಕ್ಟರ್ ಬೈದರು…!
ನನ್ನ ನಿರಾಸೆಗೆ
ಅಮ್ಮ ಹೆದರಿದಳು!
ಕಡೆಗೂ
ನನ್ನ ರಮಿಸಿದಳು
ಮುದ್ದಾದ ಮಗು..
ಸಮಾಧಾನಿ..
ಒಳ್ಳೇ ನಕ್ಷತ್ರ..!
ವರ್ಷಗಳು ಉರುಳಿದವು..
ನಿರಾಸೆಯ
ನೆನಪೂ ಉಳಿದಿಲ್ಲ…
ಒತ್ತಡದ ಕೆಲಸ…
ಪದೇ ಪದೇ ಕರೆ
“ಅಮ್ಮಾ ಬೇಗ ಬಾ…”
ಮಳೆ…
ಮಳೆಯಂಥಾ ಮಳೆ!
ತೊಯ್ದು ತೊಪ್ಪೆ
ಮೈಲುಗಳ ದಾರಿ
ಮೈನಡುಗಿಸುವ ಚಳಿ..
ಬಿಸಿ ನೀರಿನ ಸ್ವಾಗತ
ಆಗಷ್ಟೇ
ಇಸ್ತ್ರಿ ಮಾಡಿದ ಬಟ್ಟೆ,
ಅಗ್ಗಿಷ್ಟಿಕೆ,
ಬಿಸಿನೀರುಚೀಲದ ಸೇವೆ
ಬಿಸಿ ಬಿಸಿ ದೋಸೆ
ಬೆಚ್ಚನೆಯ ಹೊದಿಕೆ…
ಹೊದಿಕೆಯೊಳಗೆ
ತೆರೆದುಕೊಂಡ ನೆನಪು
ಪಶ್ಚಾತ್ತಾಪದ ಬೇಗುದಿ!
ಇವಳಿಗಾ ನಾನು
ಬಿಸಿ ಕಂಬನಿಯ
ಸ್ವಾಗತ ನೀಡಿದ್ದು..!
ಕಣ್ಣುಗಳು
ಮಸುಕು ಮಸುಕು..
ಅಮ್ಮನ ನೆನಪು…
ಇಂದು ಇವಳೇ
ಅಮ್ಮನಾಗಿಬಿಟ್ಟಳು…
ಇವಳ ಮುಖವನ್ನು
ಹೇಗೆ ನೋಡಲಿ…
ಮುಸುಕಿನಲ್ಲೇ
ಮುದುಡಿಹೋದೆ…
ಹೊದಿಕೆಯಲ್ಲೇ
ಹೆಣವಾಗಬಾರದೇ..!
ಕಿವಿಯಲ್ಲಿ
ಕರೆಯ ರಿಂಗಣ…
“ಅಮ್ಮಾ ಬೇಗ ಬಾ…!”
0 ಪ್ರತಿಕ್ರಿಯೆಗಳು