-ರಮೇಶ್ ನೆಲ್ಲಿಸರ
ಅಚಾನಕ್ಕಾಗಿ ಗರ್ಭಾಂಕುರಗೊಂಡ
ಬೀಜ ,ರಕ್ತ ಮಾಂಸ ಮತ್ತೇನೋ ಜೀವವೆಂಬುದ ಪಡೆದು
ನಿಷಿದ್ಧ ಸೇಬನಷ್ಟೇ ತಿನ್ನಲು
ಹೊರಟಿ ನಿಂತಿದೆ.
ವಿಚಾರ ಪ್ರವಾಹದಿ ಸಿಕ್ಕಿ
ಮೆದುಳು ತುಂಬಿಕೊಳ್ಳುತ್ತಲೇ
ಮನಸು ಖಾಲಿಯಾಗಿ
ಕೊಂಬೆ ಬಲಿತ ಮರದ ಕಾಂಡ ಟೊಳ್ಳು
ಪಡೆದದ್ದೆಲ್ಲವೂ ಅಂತರ್ಧಾನವಾಗಿ
ಕಂಡದ್ದು ಒಣಬುರುಡೆ
ಜ್ಞಾನದ ಮರ ಹಬ್ಬಿ ಬೆಳೆದಂತೆ
ಬಿಟ್ಟ ಹೂವೂ ಪರಾಗ ನಡೆಸಿ
ಮತ್ತೆ ಮತ್ತೆ ಜ್ಞಾನದಾಹ .
ವಾಸನೆಯೊಂದಿಗೆ ಹೂವಿನ
ಭಾವನೆಯೂ ಸತ್ತು,
ಉದುರಿದರೂ ಸತ್ವರಹಿತ
ತ್ಯಾಜ್ಯ
ಬೆಳೆದು ನಿಂತ ಜೀವನ ಮರದ
ಹಣ್ಣು ಕೊಳೆತು ನಾರುತಿದೆ
ಉಪಯೋಗವಾಗದೆ ಬಿದ್ದಿದೆ
ನಿಷಿದ್ಧ ಸೇಬಿನ ಶಕ್ತಿ.
ನಾವೇ ನಮಗೆಸಗುತಿಹ
ಎರಡನೇಯ ಅವಿಧೆಯತೆ
ಸ್ವರ್ಗದ ಸೇಬಿನ ಹಿಂದೆ ಓಡೋಡಿ ಬಸವಳಿದು,
ಇರುವ ಹಣ್ಣನು ತಿನ್ನದೆ
ಎರಡೂ ಕಲಸುಮೇಲೋಗರವಾಗಿ
ಮತ್ತೆ ಕಳಚಿದೆ ಅಂತರಂಗದ ಸ್ವರ್ಗ …
ಕವಿತೆ ಚನ್ಮಾಗಿದೆ
nice poem…