ಎಚ್ ಆರ್ ರಮೇಶ
—–
ದುರಂತ ಮತ್ತು ಕ್ರೌರ್ಯಗಳ ನಿರುಮ್ಮಳ ಕಥನ
ಗಂಗಪ್ಪ ತಳವಾರ್ ಅವರ ಕಾದಂಬರಿ ‘ಧಾವತಿ’ ಕಥನಕ್ಕಿಂತಲೂ ಕತೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಗಮನ ಸೆಳೆಯುತ್ತದೆ. ಆದರೆ ಕಥೆಯಷ್ಟೇ ಕಥನವೂ ಮುಖ್ಯವೆ. ಆದರೂ, ಕಥನವು ‘ವಾಸ್ತವಿಕತೆ’ಯ ಮೂಲಕ ಕತೆಯಲ್ಲಿ ಒತ್ತಾಯ ಪೂರ್ವಕವಾಗಿ ಒಳ ನುಸುಳಿ ತನ್ನ ಇರುವಿಕೆಯನ್ನು ಅಷ್ಟೋ ಇಷ್ಟೋ ತೋರಿಸುವಲ್ಲಿ ಯಶಸ್ಸನ್ನು ಕಂಡಂತಿದೆ. ಅಥವಾ, ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದೆ ಎಂದು ಕಾಣುತ್ತದೆ.
ಕತೆ ಸಾಲಿಡ್ಡಾಗಿರುವುದರಿಂದ ಈ ಕಾದಂಬರಿಯಲ್ಲಿ ಅದು ಬಹು ಸಾಂದ್ರವಾಗಿ ಬಂದಿದೆ. ಈ ಸಾಂದ್ರತೆಗೆ ಚೈತನ್ಯವನ್ನು ತುಂಬಿರುವುದು ಕತೆ ಜರುಗುವಲ್ಲಿನ ‘ಪ್ರಾದೇಶಿಕ ಭಾಶೆ’. ಮತ್ತೂ ಅದು, ಬಿಗಿಯಾಗಿ ಸಿದ್ಧಪಡಸಿದ ಗಾಳಿಪಟವನ್ನು ಆಕಾಶದಲ್ಲಿ ಬ್ಯಾಲೆನ್ಸ್ ನಲ್ಲಿ ನಿಶ್ಚಲವಾಗಿ ಹಾರಾಡಿಸುವ ಪಟದಂತಿರುವ ನಿರೂಪಣೆ ಸೆಳೆದುಕೊಂಡಿರುವುದು ವಾವ್ ಎನಿಸುತ್ತದೆ.
ಕತೆಯ ಭಿತ್ತಿ ಸರಳವಾಗಿದ್ದರೂ ಅದಕ್ಕೆ ಬಹುಸ್ತರೀಯವಾದ ಸಂಕೀರ್ಣತೆ ಇದೆ. ಮಿಷೆಲ್ ಫುಕೋ ಹೇಳುವಂತೆ ಅಧಿಕಾರ/ಪವರ್ ಎಲ್ಲ ಹಿಂಸೆ ಶೋಷಣೆಗಳ ಮೂಲ. ಎಲ್ಲ ಬಗೆಯ ಪವರ್, ಜ್ಞಾನ ಶಾಖೆಗಳನ್ನೂ ಒಳಗೊಂಡಂತೆ, ಮನುಷ್ಯನ ಚೈತನ್ಯವನ್ನು ಧಮನ ಮಾಡುವುದರ ಬಗ್ಗೆಯೇ ಯೋಚಿಸುವುದು. ಅದು ಭೌತಿಕವಾದ ಹತ್ತಿಕ್ಕುವಿಕೆ ಇರಬಹುದು ಅಥವಾ ಮಾನಸಿಕವಾದ ಹತ್ತಿಕ್ಕುವಿಕೆಯಾಗಿರಬಹುದು. ಇದರ ವಿರಾಟ್ ಸ್ವರೂಪ ಎಂತಹದ್ದೆಂದರೆ ಮನುಷ್ಯ ಸಂಬಂಧಗಳನ್ನು ಛಿದ್ರಗೊಳಿಸುವುದಷ್ಷೇ ಅಲ್ಲದೇ ಸಾಮಾಜಿಕ ಅಸಮಾನತೆಗಳಿಗೂ ಕಾರಣವಾಗುವುದು.
ಈ ಹಿನ್ನೆಲೆಯಲ್ಲಿ ಕಾದಂಬರಿಯ ಕಥಾನಾಯಕಿ ಚಂದ್ರಿ ಸೋ ಕಾಲ್ಡ್ ಉತ್ತಮ ಕುಲದಲ್ಲಿ ಹುಟ್ಟಿದ್ದಿದ್ದರೆ ಖಂಡಿತ ಅವಳಿಗೆ ಧಾರುಣವಾದ, ದುರಂತ ಮಯವಾದ ಬದುಕು ಸಿಗುತ್ತಿರಲಿಲ್ಲ. ಅವಳ ಆ ವಲ್ನರಬಲ್ ಎನ್ನಬಹುದಾದ ದೇನೇಸಿ ಸ್ಥಿತಿಗೆ ಪುರುಷನ ದಬ್ಬಾಳಿಕೆ ಮತ್ತು ಅಧಿಕಾರ ಕೇಂದ್ರಿತ ಸಮುದಾಯಗಳು ನೇರ ಹೊಣೆ. ಅವಳಿಗೆ, ತನ್ನ ಬದುಕಿಗೆ ಬೇಕಾದಂತಹ ಒಂದು ನೈತಿಕ ಸ್ಥೈರ್ಯ ಯಾವ ಮೂಲೆಯಿಂದಲೂ ದೊರಕದಿರುವುದು ಭಾರತೀಯ ಸಂದರ್ಭದಲ್ಲಿ ಬಹು ದೊಡ್ಡ ದುರಂತ. ತಳ ಸಮುದಾಯವೊಂದು ಅನುಭವಿಸುವ ಸಾಮಾಜಿಕ ಅಸಮಾನತೆ. ಅದರಿಂದಾಗಿಯೇ ಆ ದಲಿತ ಸಮುದಾಯ ವಲ್ನರಬಲ್ ಆಗಿ ಶೋಷಣೆಗೆ ಒಳಪಟ್ಟು, ತನ್ನ ಸಮುದಾಯ ಅನುಭವಿಸುವ ಎಲ್ಲ ಬಗೆಯ ಧಾರುಣತೆ, ಮತ್ತು
ಕಾಮ ಈ ಕೃತಿಯ ಮುಖ್ಯ ಅಂಶವಾಗಿದ್ದರೂ ಬಡತನ ಇಡೀ ಕಾದಂಬರಿಯ ಉದ್ದಕ್ಕೂ ಹಬ್ಬಿದೆ. ಮನುಷ್ಯ ಸಹಜ ವಾಂಛೆಗಳು ಎಲ್ಲರಲ್ಲೂ ಇರುವಂತವೇ. ಕಥಾನಾಯಕಿ ಚಂದ್ರಿಯೂ ಸಹ ಅದಕ್ಕೆ ಹೊರತಲ್ಲ. ಮತ್ತೂ ಅವಳ ಅಮ್ಮನ ಬದುಕೂ ಸಹ. ಇಲ್ಲಿ ಅನೈತಿಕ ಸಂಬಂಧ ಎನ್ನುವುದು ಯಾವ ರಿಲಿಜಿಯಸ್ ಮೊರಾಲಿಟಿಯ ಪರಿಭಾಷೆಗೆ ಸಿಗುವುದಿಲ್ಲ. ಇದನ್ನು ಎದೆ ಝಲ್ಲೆನ್ನಿಸುವ ರೀತಿಯಲ್ಲಿ ಚಂದ್ರಿ ಮತ್ತು ಅವಳ ಅಮ್ಮ ನ ಮೂಲಕ ವ್ಯಕ್ತ ಪಡಿಸಿರುವುದನ್ನು ಕಾಣಬಹುದು. ಅವರನ್ನು ತಪ್ಪು ಒಪ್ಪಿಕೊಳ್ಳುವ ಕಟಕಟೆಯಲ್ಲಿ ನಿಲ್ಲಿಸಲಾಗದು. ಯಾಕಂದರೆ ಅವರಿಬ್ಫರಿಗೂ, ಅತಿ ಮುಖ್ಯವಾಗಿ ಚಂದ್ರಿಗೆ, ಹಸನಾದ ಬದುಕನ್ನು ಬದುಕಲು ಹಂಬಲ. ಅದಕ್ಕೆ ಶ್ರಮ ಪಡುವಳು ಕೂಡ. ಆದರೆ ಅದು ಯಶಸ್ವಿಯಾಗುವುದನ್ನು ಮನುಷ್ಯನ ಮತ್ತು ಏಣಿ ಶ್ರೇಣಿ ಸಮಾಜದ ಕ್ರೌರ್ಯ, ವ್ಯವಸ್ಥಿತವಾದ ಹುನ್ನಾರಗಳು ತಪ್ಪಿಸುತ್ತವೆ. ಇದು ಈಗಾಗಲೇ ಪ್ರಸ್ತಾಪಿಸಿರುವಂತೆ, ಒಂದು ಸಮುದಾಯ ಅನುಭವಿಸುವ ಧಾರುಣವಾದ ದುರಂತ. ಫೆಮಿನಿಸ್ಟ್ ಗಳು ಚಂದ್ರಿಯನ್ನು ಅವರ ಅಮ್ಮನನ್ನು ತಮ್ಮ ಪರಿಭಾಷೆಗಳಲ್ಲಿ ಸಮರ್ಥಿಸಲು ಪ್ರಯತ್ನಪಟ್ಟರೂ ಚಂದ್ರಿಯ ಅಪ್ಪನ ಸಂಕಟ, ದುರಂತವನ್ನು ಅರಿಯದೆ ಹೋಗುವ ಸಾಧ್ಯತೆ ಇದೆ. ಅವನೊಬ್ಬ ಇಡೀ ಕಾದಂಬರಿಯಲ್ಲಿ unsung hero!
ಕತೆಯ ಒಳಗಡೆನೇ ಚಂದ್ರಿ ಅವನ ಬಗ್ಗೆ ಎಂಪಥಿಯನ್ನು ತೋರಿಸುತ್ತಾಳೆ. ಆದರೆ ಅವಳು ಬದುಕುವುದು ದುರಂತದಲ್ಲಿಯೇ. ಅದು ಎದ್ದು ಹೊರಬರಲಾರದಂತಹ ಮಡು. ಅವಳನ್ನು ಪುರುಷ ಸಂಸ್ಕೃತಿಯ ಕ್ರೌರ್ಯ ಹರಿದು ಮುಕ್ಕುತ್ತದೆ. ಅಪ್ಪನ ಬಗೆಗೆ ಆಂತರ್ಯದಲಿ ಬಹುವಾಗಿ ಕಾಳಜಿ, ಪ್ರೀತಿ, ವಾತ್ಸಲ್ಯಗಳನ್ನು ಇಟ್ಟುಕೊಂಡ ಅವಳು ಪುರುಷ ಕ್ರೌರ್ಯಕ್ಕೆ ಬಲಿಯಾಗಿ ಎಲ್ಲೆಯಿಲ್ಲದ ದುರಂತಕ್ಕೆ ಈಡಾಗುವುದು ಈ ಕಾದಂಬರಿಯಲ್ಲಿ ಕಂಡು ಬರುವ ಅತ್ಯಂತ ಪರಿಣಾಮಕಾರಿಯಾದ ವ್ಯಂಗ್ಯವೇ ಸರಿ.
ದೇಹದ ಬಯಕೆಗಳಷ್ಟೇ ಅಲ್ಲ, ಅವುಗಳನ್ನು ಮೀರಿ ಒಂದು ಹಸನಾದ ಬದುಕಿಗೆ ಎನ್ನುವ ಸರಳ ಸಂಗತಿ ಸತ್ಯ ಮಾನವ ಪ್ರಜ್ಞೆಗೆ ಸಹಜವಾಗಿ ಬಂದಾಗ ಎಲ್ಲ ಬಗೆಯ ಹಿಂಸೆ ಕೊನೆಯಾಗಬಹುದು. ಆದರೆ ಇದೊಂದು ಸುಂದರವಾದ ಆಶಯ ಅಷ್ಟೇ. ಕಬೀರರ ಒಂದು ಮಾತಿದೆ ಸುತ್ತೆಲ್ಲ ಹಬ್ಬಿರುವ ಕ್ರೌರ್ಯ ಕೊನೆಯಾಗ ಬೇಕಂದರೆ ನಮ್ಮೊಳಗಿನ ಕ್ರೌರ್ಯ ಕೊನೆಯಾಗಬೇಕು.
‘ಧಾವತಿ’ ಕಾದಂಬರಿಯ ಕಥನದಲ್ಲಿನ ವಾಸ್ತವಿಕತೆಯಿದ್ದರೂ, ‘ಕಾದಂಬರಿ’ಗೆ ಅತೀ ಮುಖ್ಯವಾಗಿ ಬೇಕಾಗಿದ್ದಂತಹ ಉತ್ಕೃಷ್ಟ ವಾದ imagination ಸಿಗದೆ, ಹಾಗೂ, ಒಂದು ವರ್ಗದ ದುರಂತಮಯವಾದ ಬದುಕಿನ ಪರಿಣಾಮಕಾರಿಯಾದಂತಹ ಚಿತ್ರಣದ ನಡುವೆಯೂ ಕಾದಂಬರಿಯು ತಾನು ಮುಟ್ಟಬಹುದಾದ ಎತ್ತರಗಳನ್ನು ಮುಟ್ಟಲು ಸಾಧ್ಯವಾಗಿದೆಯಾ ಎನ್ನುವ ಪ್ರಶ್ನೆ ಉಳಿಯುತ್ತದೆ ಕೊನೆಗೆ.
0 ಪ್ರತಿಕ್ರಿಯೆಗಳು