ಉದಯ ಗಾಂವಕರ್
ಮೊನ್ನೆ,
ಇದ್ದಕ್ಕಿದ್ದಂತೆ ಒಂದು ಕವಿತೆ ತೀರಿಕೊಂಡಿತು.
ಸತ್ತಿತು, ಜೀವ ತೆತ್ತಿತು, ಅಸು ನೀಗಿತು
ಇತ್ಯಾದಿ ಯಾವುದು ಸೂಕ್ತ ಪದ
ಎಂದು ತಲೆಕೆಡಿಸಿಕೊಳ್ಳುತ್ತಿರುವಾಗಲೆ
ಯಾರೋ ಹೇಳಿದರು-
ಅದು ಆತ್ಮಹತ್ಯೆಯೆಂದು.
ಕಾರಣ ಏನಿರಬಹುದೆಂದು
ಯೋಚಿಸಬೇಕಿತ್ತು ನಾನು;
ಆದರೆ, ಅಷ್ಟರಲ್ಲೆ
ಕವಿತೆಯ ಆತ್ಮ ಎಲ್ಲಿರುತ್ತದೆ
ಎಂಬ ಪ್ರಶ್ನೆ ಅಚಾನಕ್ಕಾಗಿ ಎದುರಾಯ್ತು.
ಕವಿಯ ಆತ್ಮವೇ
ಕವಿತೆಯ ಆತ್ಮವಲ್ಲವೇ?
ಅಥವಾ
ಕವಿತೆಯ ಆತ್ಮವಿರುವುದು
ಪದಗಳನ್ನು ಪೋಣಿಸಿದ ಕ್ರಮದಲ್ಲೆ?
ಸೂಕ್ತ ಪದಗಳ ಆಯ್ಕೆಯಲ್ಲೇ?
ಆ ಪದಗಳು ಹೊರಡಿಸುವ ನಾದದಲ್ಲೆ?
ಊಹೂಂ..
ಕವಿತೆ ಓದುಗರಿಗೆ ಸೇರಿದ್ದು, ಕವಿಗಲ್ಲ.
ನನ್ನೊಳಗಿರುವ ಕವಿತೆಯನ್ನಷ್ಟೇ
ನಾನು ಓದಬಲ್ಲೆ ಎಂದು ಎನ್ನಿಸಿದ್ದೇ ತಡ
ಅದು ಆತ್ಮಹತ್ಯೆಯಲ್ಲ ಕೊಲೆ
ಎಂಬ ಯೋಚನೆ ಬಂದು ಭಯವೆನಿಸಿತು.
ಬೆವರು, ಕಂಪನ, ವಿದ್ಯುದಾಘಾತ
ಹೆರಿಗೆಯ ನೋವು ಕಳೆದು
ಆ ಕವಿತೆಯ ಸಾಲುಗಳು
ಕಣ್ಣೆದುರು ಮೂಡಿಬರತೊಡಗಿದವು
ಮರುಹುಟ್ಟು ಎಲ್ಲ ಕವಿತೆಗಳ ಕರ್ಮ
ಎಂದುಕ್ಕೊಳ್ಳುತ್ತಾ ನಿರಾಳನಾದೆ!
0 ಪ್ರತಿಕ್ರಿಯೆಗಳು