ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ!

ಜಿತೇಂದ್ರ ಬೇದೂರು.


ಮನದ ಗರ್ಭದೊಳಗೆ,

ಭಾವ ಬೀಜ ಮೊಳೆತು,

ಪದದ ಭ್ರೂಣ ಬಲಿಯುವ

ಮೊದಲೇ ಗರ್ಭಪಾತ..

‘ಬಂಜೆ’ ಮನಕೆ ಒಂದೂ ಉಳಿಯಲಿಲ್ಲ,

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ.

ಅಲ್ಲೇ ಮೂಲೆಯಲೆಲ್ಲೋ,

ಕೊಳಲಿನ ನಾದ,ಆಗೊಮ್ಮೆ ಈಗೊಮ್ಮೆ.

ಗೆಜ್ಜೆಯೂ ಅಲ್ಲೇ ಇದೆ

ಏನೋ ತಡೆ, ಹೆಜ್ಜೆ ಹಾಕಲು ಒಮ್ಮೆ

ನಾದ ಹೊಮ್ಮುತ್ತಿಲ್ಲ,

ಮೌನವಾಗಿದೆ ವೀಣೆ

ಬೆರಳುಗಳು ಬಂಧಿ,

ಯಾವುದೋ ಬಂಧನದೊಳಗೆ

ಮನದ ಪರದೆಯ ಮೇಲೆ

ಚಿತ್ತಾರವಿಲ್ಲ.

ಬಣ್ಣ ಮಾಸಿದ ನೂರಾರು ರೇಖೆಗಳು,

ಅವು ಅರ್ಥವಾಗುವುದಲ್ಲ

ಈಗಿಲ್ಲ,ಮೊದಲಿದ್ದ ಕಲ್ಪನಾವಿಲಾಸ,

ಒಣಗಿತೇಕೋ ಈಗೆಲ್ಲ ಭಾವರಸ?

ಈಗಿಲ್ಲ, ಭಾವನೆಗಳ ವಿದ್ಯುದಾಲಿಂಗನ,

ಪದದೊಡನೆ ಪದಗಳ ಆ ಸಮ್ಮಿಲನ

ಮೊದಲೆಲ್ಲ  ಗಾಳಿಯೂ

ಪದಗಳ ಹೊತ್ತು ಬರುತ್ತಿತ್ತು,

ಸಮಯದ ಅರಿವಿಲ್ಲದೆ ಸಾಲಾಗುತ್ತಿತ್ತು.

ಎಲ್ಲೋ  ಜಾರಿದೆ  ಆ ಸಮಯ,

ಮತ್ತೆ ಸಿಕ್ಕುತ್ತಿಲ್ಲ.

ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲ

ಹಿತ್ತಲ ಮರ

ಹಿತ್ತಲ ಮರಕೀಗ ಇಳಿ ವಯಸು,

ಹಿಂದೊಂದು ಕಾಲದಲಿ,ಮರವೂ ನಳನಳಿಸುತಿತ್ತು,

ದಣಿವ ಮರೆಸಿತ್ತು ಹಸಿರು,ಹಣ್ಣು ಹಸಿವ ನೀಗಿಸಿತ್ತು

ಗೂಡು ಕಟ್ಟಿದ್ದವು ಹಲವು ಹಕ್ಕಿಗಳು,

ಎಲೆಮರೆಯ ಗೂಡಲ್ಲಿ ಹಲವು ಮೊಟ್ಟೆಗಳು,

ಕೊರಳೆತ್ತಿ ನೋಡುವ ಪುಟ್ಟ ಹಕ್ಕಿಮರಿಗೆ,

ತಾನೇ ತೊಟ್ಟಿಲಾಗಿ ತೂಗುತಿತ್ತು

ಬದಲಾಗಿದೆ ಈಗ,ಹಸಿರಿಲ್ಲ,ಕಂದು,

ಸವೆದು ಹೋಗಿದೆ ಚೆಲುವು ಕಾಲಚಕ್ರಕೆ ಸಿಲುಕಿ,

ಹಾರಿಹೋಗಿವೆ ದೂರ,ಎಲ್ಲಾ ಹಕ್ಕಿಗಳ ಹಿಂಡು,

ಬೋಳು ರೆಂಬೆಗೆ ನೆನಪುಗಳ ನೇತುಹಾಕಿ

ಬಂದು ಕೂರುತ್ತವೆ ಬೋಳು ರೆಂಬೆಯ ಮೇಲೆ,

ಆಗೊಮ್ಮೆ,ಈಗೊಮ್ಮೆ,ರೆಕ್ಕೆ ಸೋತಾಗ,

ಹಕ್ಕಿಮರಿಗಳಿಗಂತೂ,ಮರದ ನೆನಪಿಲ್ಲ ಬಿಡಿ,

ಅಗಾಧ ಅಗಸವೆ ಅವು ಕಣ್ಣು ಬಿಟ್ಟಾಗ

ಹಿತ್ತಲ ಮರಕೀಗ ಇಳಿ ವಯಸು

‍ಲೇಖಕರು Avadhi

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: