ಅಣಬೆ ಎಂದರೆ ಪಂಚಪ್ರಾಣ ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಹಣಬೆ ಸಿಗದೇ ನಿರಾಸೆಗೊಂಡ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನನಗೆ ರಾತ್ರಿ ಎಲ್ಲ ಒಂದೇ ಚಿಂತೆ. ನಾಳೆ ಅಣಬೆ ಏಳುತ್ತವೆ! ಅವುಗಳನ್ನು ಬೇರೆಯವರು ನೋಡುವ ಮೊದಲೇ ಸಂಗ್ರಹಿಸಬೇಕು ಎಂಬುದು. ನನ್ನ ಈ ಕಲ್ಪನೆಗೆ ಪೂರಕವಾಗಿ ನಮ್ಮ ಗುಂಡ ‘ನಾಳೆ ಅಣಬೆ ಏಳಬಹುದು’ ಎಂದು ಭವಿಷ್ಯ ನುಡಿದಿದ್ದನಲ್ಲದೆ ಅವು ಏಳುವ ಜಾಗವನ್ನೂ ತೋರಿಸಿದ್ದ.
ಆ ಜಾಗ ಬೇರೆಲ್ಲೂ ಅಲ್ಲ, ನಮ್ಮ ಕಚೇರಿ ಇರುವ ಕುವೆಂಪು ಶತಮಾನೋತ್ಸವ ಭವನ ಹೇಮಾಂಗಣದ ಮುಂದುಗಡೆಯೇ! ಗುಂಪುಗುಂಪಾಗಿ ಸಣ್ಣ ಕೋಪಿನಂತೆ ಬೆಳೆದಿರುವ ವಿವಿಧ ಗಿಡಮರ ಬಳ್ಳಿಗಳ ನೆಳಲಿನ ಸುಪುಷ್ಪ ಮಣ್ಣಿನಲ್ಲಿ ಪ್ರತಿವರ್ಷ ಅಸಂಖ್ಯಾತ ಅಣಬೆಗಳು ಏಳುತ್ತವೆ ಎಂದು ಗುಂಡ ಆ ಜಾಗಗಳನ್ನೆಲ್ಲಾ ತೋರಿಸಿದ್ದ.
ಅಲ್ಲದೆ ಕವಿಶೈಲದ ದಾರಿಯ ಅಕ್ಕಪಕ್ಕದ ಕಾಡಿನ ಮರಗಳಡಿಯಲ್ಲಿ ಎಲ್ಲೆಲ್ಲಿ ಅಣಬೆ ಏಳುತ್ತವೆ ಎಂದೂ ತೋರಿಸಿದ್ದ. ನನಗೆ ಚಿಕ್ಕಂದಿನಿಂದಲೂ ಅಣಬೆ ಎಂದರೆ ಪಂಚಪ್ರಾಣ. ನಮ್ಮದು ಬಯಲು ಸೀಮೆಯಾದರೂ ಮಳೆಗಾಲದ ನಂತರದ ತಂಪಿನ ತೇವಕ್ಕೆ ಆಗಸ್ಟ್ ತಿಂಗಳು ಮಣ್ಣು ಹದವಾಗಿ ನಮ್ಮ ಹೊಲದ ಒಂದು ಅಂಚಿನಲ್ಲಿದ್ದ ತಬಸೀ ಮರಗಳ ಪದತಳದಲ್ಲಿ ರಾಶಿ ರಾಶಿ ಮೊಗಟು ಅಣಬೆ ಏಳುತ್ತಿದ್ದವು.
ಅದೇ ಹೊಲದ ಇನ್ನೊಂದು ಅಂಚಿನ ಹುತ್ತಗಳ ತುಂಬ ಹುತ್ತ ಅಣಬೆ ಚಿಗುರುತ್ತಿದ್ದವು. ಇತ್ತೀಚೆಗಿನ ವರ್ಷಗಳಲ್ಲಿ ಆ ತೋಪೇ ಮಾಯವಾಗಿದೆ. ಬೋರ್ವೆಲ್ನ ನೀರು ರಾಸಾಯನಿಕಗಳ ಜೊತೆ ಸೇರಿ ಮಣ್ಣಿನ ನೈಜ ಗುಣಗಳು ಸರ್ವನಾಶವಾಗಿದೆ. ಅಷ್ಟೇ ಅಲ್ಲದೆ ನಿಯತವಾದ ಮಳೆಯೂ ಇಲ್ಲ. ಸುರಿದರೆ ಹುಚ್ಚನಂತೆ ಸುರಿದು, ಇಲ್ಲವಾದರೆ ತಿಂಗಳುಗಟ್ಟಲೆ ಇರುವುದೇ ಇಲ್ಲ. ಅಣಬೆಯ ಆ ಪ್ರಪಂಚವೇ ಕೆಲವು ಹಳ್ಳಿಗಳಿಗೆ ಈಗ ನೆನಪು ಮಾತ್ರ.
ಮೊದಲ ಮಳೆಯಲ್ಲಿ ಗುಡುಗು ಹುಟ್ಟಿ, ಬೆಳಗ್ಗೆ ಬಿಸಿಲು ಹೊಡೆದರೆ ಅಣಬೆ ಏಳುತ್ತವೆ, ಗುಡುಗಿಗೆ ನೆಲ ಬಾಯಿ ಬಿಡುತ್ತದೆ, ಎಳೆ ಬಿಸಿಲಿಗೆ ಅಣಬೆ ಮೊಳೆತು ಮೇಲೇರುತ್ತವೆ ಎಂದು ಗುಂಡ ಉಪದೇಶಿಸಿದ್ದ. ಬೆಳಗ್ಗೆ ಎದ್ದವನೇ ನನ್ನ ಬಾಲ್ಯದ ಅಣಬೆ ರುಚಿಯನ್ನು ನಾಲಿಗೆಯ ರಸಗ್ರಂಥಿಗಳಲ್ಲೆಲ್ಲಾ ಕಲ್ಪಿಸಿಕೊಂಡು ಗುಂಡ ತೋರಿಸಿದ್ದ ಪ್ರತಿಯೊಂದು ಜಾಗವನ್ನೂ ಕಾತುರದಿಂದ ಹುಡುಕಿದೆ.
ಮಳೆ ನಿಂತು ಬಿಸಿಲೂ ಬಿದ್ದಿದ್ದರಿಂದ ಅಣಬೆ ಏಳಲೇಬೇಕು ಎಂಬುದ ನನ್ನ ಒಳ ಮನಸ್ಸಿನ ತರ್ಕ. ಆದರೆ ಎಲ್ಲಿಯೂ ಅಣಬೆ ಇಲ್ಲ. ಕವಿಶೈಲದ ದಟ್ಟ ಕಾನನದ ಜಾಗಗಳಲ್ಲೂ ಅಣಬೆ ಎದ್ದಿಲ್ಲ. ನಿರಾಸೆಯೋ ನಿರಾಸೆ. ಕವಿಶೈಲದಲ್ಲಿ ಅಣಬೆ ಹುಡುಕುತ್ತಿರುವಾಗ ಮರದ ಬುಡದಲ್ಲಿದ್ದ ಹಸಿರು ಹುಲ್ಲಿನಲ್ಲಿ ಕುಂತಿದ್ದ ಹಸಿರು ಹಾವೊಂದು ನನ್ನ ಹೆಜ್ಜೆ ಸಪ್ಪಳಕ್ಕೆ ಚಿಮ್ಮಿ ರಾಕೆಟ್ ವೇಗದಲ್ಲಿ ಮರದ ನೆತ್ತಿಗೆ ಏರಿತು.
ಒಂದು ಕ್ಷಣ ಬೆಚ್ಚಿದ ನಾನು ಆ ಹಸಿರು ಹಾವಿನ ಸೌಂದರ್ಯವನ್ನೇ ನೋಡುತ್ತಾ ಅಣಬೆ ಸಿಗದ ನಿರಾಸೆಯಲ್ಲಿ ಎಷ್ಟು ಹೊತ್ತು ನಿಂತಿದ್ದೆನೋ, ನನಗೇ ಗೊತ್ತಿಲ್ಲ. ಮಧ್ಯಾಹ್ನ ಮೂರು ಗಂಟೆಯವರೆಗೆ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರಂಭವಾಯಿತು. ಜಡಿ ಮಳೆಯಾಗಿ ಸುರುವಾಗಿ ಬರಬರುತ್ತಾ ಒಂದೇ ಸಮನೆ ಜೋರಾಗಿಯೇ ಅಪ್ಪಳಿಸತೊಡಗಿತು. ನನ್ನ ಕಚೇರಿಯ ಎದುರು ಭಾಗದಲ್ಲಿ ನಾನು ಕುಂತಿದ್ದ ಜಾಗದಿಂದಲೇ ಮಳೆಯ ವೈಭವವನ್ನು ನೋಡುವ ಅದೃಷ್ಟ ನನ್ನದಾಗಿತ್ತು.
ಅಂದು ರಾತ್ರಿ ಸುಮಾರು ಎಂಟು ಗಂಟೆಯವರೆಗೆ ‘ಕುವೆಂಪು ತಂತ್ರಾಂಶ’ಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ನಡೆಯಲಿದ್ದ ಪೂರ್ವಭಾವಿ ಸಭೆಯ ಸಿದ್ಧತೆಗಳನ್ನು ಮುಗಿಸಿ, ನಂತರ ಟಾರ್ಚ್ ಹಿಡಿದು ಗಡಿಕಲ್ಲಿನ ಕಡೆಗೆ ನಾನು ಮತ್ತು ಗುಂಡ ಇಬ್ಬರೂ ಹೊರಟೆವು. ಯಾಕೆಂದರೆ ಗೆಸ್ಟ್ ಹೌಸಿಗೇ ಊಟ ತಂದು ನೀಡುತ್ತಿದ್ದ ಕವಿ ಮನೆಯ ಕ್ಯಾಂಟಿನ್ನಿನ ಸುಧಾಕರ್ ಅಂದು ರಜೆ ಹಾಕಿದ್ದ.
ಅನಿವಾರ್ಯವಾಗಿ ಒಂದೂವರೆ ಕಿ.ಮೀ. ನಡೆದು ಗಡೀಕಲ್ಲಿನ ಏಕೈಕ ಹೋಟೆಲ್ನಲ್ಲಿ ಊಟ ಮಾಡಬೇಕಿತ್ತು. ಕವಿಶೈಲಕ್ಕೆ ಹೋಗುವ ರಸ್ತೆಯ ತಿರುವಿಗೆ ಅಭಿಮುಖವಾಗಿರುವ ತೇಜಸ್ವಿ ಸ್ಮಾರಕವನ್ನು ದಾಟಿ ಮುಂದೆ ಹೋಗುತ್ತಿದ್ದೆವು. ಒಂದು ಕಿರು ಹಳ್ಳಕ್ಕೆ ಕಟ್ಟಿರುವ ಪುಟ್ಟ ಸೇತುವೆಯೊಂದು ಅಲ್ಲಿ ಸಿಗುತ್ತದೆ.
ಆ ಸೇತುವೆ ಮೇಲೆ ಹೋಗುತ್ತಿದ್ದಂತೆ ನೀರು ಧುಮ್ಮಿಕ್ಕುವ ಸದ್ದು ಕಿವಿಗೆ ಹೊಡೆದಂತೆ ಕೇಳಿಬರುತ್ತಿತ್ತು. ಅದು ಚಿಕ್ಕ ಹಳ್ಳವಾದರೂ ಹೆಚ್ಚಿದ ಮಳೆಯ ಕಾರಣಕ್ಕೆ ರಭಸದಿಂದ ಬರುತ್ತಿದ್ದ ನೀರು, ಅಡ್ಡ ಸಿಗುವ ಬಂಡೆಗಲ್ಲೊಂದಕ್ಕೆ ಹೊಡೆದು ಚಿಮ್ಮುತ್ತಿದ್ದುದರಿಂದ ಅಂಥ ಸದ್ದು ಬರುತ್ತಿತ್ತು.
ನಾನು ಮತ್ತು ಗುಂಡ ಇಬ್ಬರೂ ನಮ್ಮ ಬ್ಯಾಟರಿ ಬೆಳಕಿನಲ್ಲಿಯೇ ಆ ದೃಶ್ಯವನ್ನು ನೋಡಿ ಮುಂದುವರಿದೆವು. ಹಾಗೇ ಮುಂದೆ ಎಡಭಾಗಕ್ಕೆ ಸಿಗುವ ಇಳಿಜಾರಿನ ಗದ್ದೆಗಳಲ್ಲಿ ಜುಳುಜುಳು ಹರಿಯುವ ನೀರಿನ ನೀನಾದ ಕಿವಿಗೆ ಬಿತ್ತು. ಗದ್ದೆ ಬಯಲಿನಲ್ಲಿ ಅಲ್ಲಲ್ಲಿ ಹತ್ತಾರು ಬ್ಯಾಟರಿಗಳ ಮಿಂಚು ಬೆಳಕು ಸಣ್ಣಸಣ್ಣ ಕಿರಣಗಳಂತೆ ನಮ್ಮ ಕಣ್ಣಿಗೂ ಹೊಡೆಯುತ್ತಿತ್ತು.
ಆ ಬಿರುಮಳೆಯಲ್ಲಿ ಅದೆಂಥ ಬೆಳಕು ಎಂದು ಕುತೂಹಲದಿಂದ ಗುಂಡನನ್ನು ಕೇಳಿದೆ. ‘ಅವರೆಲ್ಲ ಹತ್ತು ಮೀನು ಹಿಡಿಯೋ ಜನ ಸಾರು’ ಎಂದ. ಮುಂಗಾರಿನ ಮೊದಲ ಮಳೆಗೆ ನಮ್ಮ ಕೆರೆಯಿಂದಲೂ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಸಸ್ಲು ಮೀನುಗಳ ಯಾತ್ರೆಯನ್ನು ಚಿಕ್ಕಂದಿನಲ್ಲಿ ನಾನೂ ಕಂಡಿದ್ದೆ. ಊರಿನ ಬಳಕೆಗಾಗಿ ಇದ್ದ ಸಣ್ಣ ಕೆರೆ ಬೇಸಿಗೆಗೆ ಪೂರಾ ಒಣಗದೇ ಇದ್ದ ಪಕ್ಷದಲ್ಲಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಮೀನು ಹತ್ತುತ್ತಿದ್ದವು.
ಊರ ಜನ ಕೊಡಮೆ ಮತ್ತು ಚಿಲುಮೆ ಎಂಬ ಸಾಧನಗಳನ್ನು ಬಳಸಿ, ಕಿತ್ತಾಡುತ್ತಾ ಮೀನು ಹಿಡಿಯುತ್ತಿದ್ದರು. ಸಿಕ್ಕಿದವರ ಸೀರುಂಡೆ. ಸಿಕ್ಕಿರುವವರಿಗೆ ಉಂಟು, ಇಲ್ಲದಿದ್ದರೆ ಇಲ್ಲ. ಮೀನು ಸಿಗದ ನತದೃಷ್ಟರಿಗೆ ಸಂತೆಗಳಲ್ಲಿ ಸಿಗುತ್ತಿದ್ದ ಕರಿಮೀನೇ ಗತಿಯಾಗುತ್ತಿತ್ತು.
ಆದರೆ ಇಲ್ಲಿ ಹಾಗಿರಲಿಲ್ಲ. ಗದ್ದೆ ಗದ್ದೆಗಳಲ್ಲಿ ಮೀನು. ಹಳ್ಳಕೊಳ್ಳ ಕೆರೆ ಕಟ್ಟೆಗಳಲ್ಲಿ ಅಡಗಿದ್ದ ಮೀನುಗಳೆಲ್ಲ ತಮ್ಮ ಸಂತಾನಾಭಿವೃದ್ಧಿಗಾಗಿ ಹೊಸ ನೀರಿನ ಜಾಡುಗಳನ್ನು ಹಿಡಿದು ಹೊರಟಿವೆ! ಊಟ ಮಾಡಿ ನಂತರ ನಾವೂ ಈ ಗದ್ದೆಗಳ ಹತ್ತಿರ ಬರೋಣ ಎಂದು ಗುಂಡನಿಗೆ ಹೇಳಿದೆ. ಗುಂಡ ಉತ್ಸಾಹದಿಂದ ಒಪ್ಪಿದ.
ವಾಸ್ತವವಾಗಿ ನಮ್ಮ ಗುಂಡನ ಜೀವವೆಲ್ಲ ಗದ್ದೆಗಳಲ್ಲಿ ಹತ್ತು ಮೀನು ಹಿಡಿಯುವವರ ಸಂಗಡವೇ ಇತ್ತು. ಅವನು ಅದನ್ನು ಬಾಯಿಬಿಟ್ಟು ಹೇಳಿಯೂ ಹೇಳಿದ. ‘ನೀವು ಇವೊತ್ತು ಇಷ್ಟೊತ್ತು ಆಫೀಸಿನಲ್ಲೇ ಉಳಿದ್ರಲ್ಲಾ ಸಾರು, ಇಲ್ದಿದ್ರೆ ನಿಮ್ಗೆ ಹೇಳಿ ರಾತ್ರಿ ಹನ್ನೆರಡು ಗಂಟೆವರೆಗೆ ನಾನೂ ಮೀನು ಬೇಟೆಗೆ ಹೋಗೋದೇ ಸೈ ಆಗಿತ್ತು” ಎಂದ.
‘ಅಲ್ಲಾ ಮಾರಾಯ ನನಗೇನು ಗೊತ್ತಿತ್ತು, ಇವೊತ್ತು ಮೀನು ಬೇಟೆ ಅಂತ, ನೀನು ಹೇಳಬೇಕಾಗಿತ್ತು’ ಎಂದು ದಬಾಯಿಸಿದೆ. ‘ಆದ್ರೂ ಕಾಲ ಮಿಂಚಿಲ್ಲ ನಡಿ’ ಎಂದು ಪ್ರೋತ್ಸಾಹಿಸಿದೆ. ಗಡಿಕಲ್ಲಿನ ಶೆಟ್ಟರ ಹೋಟೆಲಿನಲ್ಲಿ ಉಂಡೆವೋ ಇಲ್ಲವೋ ಎನ್ನುವಂತೆ ಊಟದ ಶಾಸ್ತ್ರ ಮಾಡಿ ಓಡೋಡಿ ಬಂದೆವು. ನಾನು ಒಂದು ಗದ್ದೆ ಬದುವಿನ ಮೇಲೆ ನಿಂತೆ. ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಅದನ್ನು ಲೆಕ್ಕಿಸದೆ, ಟಾರ್ಚ್ ಬೆಳಕಿನಲ್ಲಿ ಹೊಳೆಯುತ್ತಿದ್ದ ಮೀನುಗಳಿಗೆ ದೊಣ್ಣೆಯಿಂದ ಹೊಡೆದು, ರಕ್ತ ಒಸರುವಂತೆ ಮಾಡಿ,
ಅದು ಚಲಿಸದಂತಾದಾಗ ಹಿಡಿದು ಬುಟ್ಟಿಗೆ ತುಂಬುತ್ತಿದ್ದರು. ಹತ್ತಾರು ಯುವಕರು ಮತ್ತು ಮಧ್ಯ ವಯಸ್ಕರ ಪಡೆಯೇ ಅಲ್ಲಿತ್ತು. ಇಡೀ ಗದ್ದೆ ಬಯಲು ರಣರಂಗವಾಗಿತ್ತು. ಮೀನುಗಳ ಸುಗ್ಗಿಯೇ ಸುಗ್ಗಿ. ಕಾಲುಕಾಲಿಗೆ ಸಿಗುವಷ್ಟು ಮೀನುಗಳ ರಾಶಿ. ಉಡುಪಿಯ ಮಲ್ಪೆ ಬಂದರಿನಲ್ಲಿ ಬರುವಷ್ಟು ಮೀನಿನ ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ಯಾವ ಯಾವ ಬಗೆಯ ಮೀನುಗಳು? ಅಲ್ಲಿದ್ದವರಿಂದ ಹೆಸರುಗಳನ್ನು ಸಂಗ್ರಹಿಸಿದೆ.
ಸಸ್ಲು, ಗಿರಲು, ಕೊರುವ, ಕುಚ್ಚು, ಬಾಳೆ, ಮುಗುಡು, ಚೇಳು, ಕೊಳ್ಳೆ, ಗೊಚ್ಚಲು, ಮರುಗುಂಡು, ಕೆರ್ಸಿ, ಓಡಲು ಮುಂತಾದ ವಿಧವಿಧವಾದ ಮೀನುಗಳ ಶಿಖಾರಿ ಅಲ್ಲಿ ನಡೆದಿತ್ತು. ಟಾರ್ಚ್ ಬೆಳಕಿಗೆ ನಾಟ್ಯವಾಡುತ್ತಾ ಮಿಂಚುತ್ತಿದ್ದ ದೊಡ್ಡ ಮೀನುಗಳು ಮರುಕ್ಷಣಕ್ಕೆ ದೊಣ್ಣೆ ಏಟು ತಿಂದು ರಕ್ತಕಾರಿ ಮೂರ್ಚೆ ಬೀಳುತ್ತಿದ್ದವು. ಸಣ್ಣ ಮೀನುಗಳು ಚಿಲುಮೆ ಬಲೆಗೆ ಬಿದ್ದು ಸೆರೆಯಾಗುತ್ತಿದ್ದವು.
ಇದು ನೂರಾರು ವರ್ಷಗಳಿಂದ ಸಂಪ್ರದಾಯದಂತೆ ನಡೆದು ಬಂದ ಪದ್ಧತಿ. ತಮ್ಮ ವಂಶಾಭಿವೃದ್ಧಿಗಾಗಿ ಹತ್ತುತ್ತಿದ್ದ ಲಕ್ಷಾಂತರ ಮೀನುಗಳಲ್ಲಿ ಶಿಖಾರಿಕೆ ಸಿಗುತ್ತಿದ್ದುದು ಕೇವಲ ಶೇ. 20ರಷ್ಟು ಮಾತ್ರ. ಉಳಿದವು ಹಳ್ಳದ ಕೋಡಿನಲ್ಲಿ, ಗದ್ದೆಯ ಬಿಲಗಳಲ್ಲಿ, ಮಣ್ಣಿನ ಪಸೆಯಲ್ಲಿ ಅಡಗಿ ಜೀವ ಉಳಿಸಿಕೊಳ್ಳುತ್ತವಂತೆ. ಹಾಗೆ ಉಳಿದ ಮೀನುಗಳು ತಮ್ಮ ಗಬ್ಬದಲ್ಲಿರುವ ಕೋಟ್ಯಾಂತರ ತತ್ತಿಗಳನ್ನು ಹೊಸ ನೀರಿನ ರಕ್ಷಣಾತ್ಮಕ ಜಾಗಗಳಲ್ಲಿ ಇಟ್ಟು ಬಂದ ದಾರಿಯಲ್ಲಿ ಹಿಂತಿರುಗುತ್ತವಂತೆ.
ಗದ್ದೆಯ ತೋಡುಗಳಲ್ಲಿ, ಹಳ್ಳದ ಅಂಚಿನ ಸಣ್ಣ ಸಣ್ಣ ಮಡುಗಳಲ್ಲಿ, ನೀರು ತುಂಬಿದ ಹುಲ್ಲಿನ ಪಸೆಗಳಲ್ಲಿ ಹೀಗೆ ಎಲ್ಲಂದರಲ್ಲಿ ಮೀನಿನ ಮೊಟ್ಟೆಗಳು ತಮ್ಮ ಜಾಗ ಕಂಡುಕೊಳ್ಳುತ್ತವೆ. ಮಳೆಗಾಲದಾದ್ಯಂತ ಅವು ಮರಿಯಾಗಿ ಬೆಳೆಯುವ ಕ್ರಿಯೆ ನಡೆಯುತ್ತದೆ. ಅವಕ್ಕೆ ಚಲಿಸುವ ಶಕ್ತಿ ಬರುತ್ತಿದಂತೆ ಇಳಿ ನೀರಿನ ದಾರಿ ಕಂಡುಕೊಂಡು ಆ ನೀರು ಇಳಿಯುತ್ತಾ ಹೋದಂತೆ ಅವೂ ಪಯಣಿಸುತ್ತಾ ಹಳ್ಳಕೊಳ್ಳ ಕೆರೆ ಕಟ್ಟೆಗಳನ್ನು ಸೇರಿಕೊಳ್ಳುತ್ತವೆ.
ಇದೊಂದು ಜೀವಜಾಲದ ನಿಯಮಿತ ಪ್ರಕ್ರಿಯೆ. ಕಲ್ಕುಳಿ ವಿಠಲಹೆಗ್ಡೆ ತಮ್ಮ ‘ಮಂಗನ ಬ್ಯಾಟೆ’ ಕೃತಿಯಲ್ಲಿ ಈ ಹತ್ತು ಮೀನುಗಳ ಮತ್ತೊಂದು ರಹಸ್ಯವನ್ನು ಬಯಲು ಮಾಡುತ್ತಾರೆ. ಮೀನುಗಳ ಕಾಮ ಕೇಳಿಗೂ ಇದೇ ಸಂದರ್ಭವಂತೆ.
ಮಳೆಗಾಲದ ಮೂರು ತಿಂಗಳು ಆಹಾರ ತಿಂದು, ಮೊಟ್ಟೆ ಮರಿ ಮಾಡಿ ಒಂಬತ್ತು ತಿಂಗಳು ಭೂಮಿಯ ಆಳದ ಅಜ್ಞಾತಸ್ಥಳದಲ್ಲಿ ಹುದುಗಿ ಕುಳಿತ ಏಡಿಕಪ್ಪೆ, ನೀರುಳ್ಳಿ ಹಾವು ಮತ್ತಿತರ ಜೀವಿಗಳು, ಬೇಸಿಗೆಯಲ್ಲಿ ಸ್ಮಶಾನದಂತೆ ಬೆಂಗಾಡಾಗಿದ್ದ ಗದ್ದೆ ಬಯಲಲ್ಲಿ ಮಳೆ ನೀರು ನಿಂತ ಕೂಡಲೇ ಎಲ್ಲೆಂದರಲ್ಲಿ ಗೋಚರಿಸುತ್ತವೆ. ಮಳೆ ಬಂದಾಗ ಒಂದೇ ಬಾರಿಗೆ ಕಾಣುವ ಇವೆಲ್ಲಾ ಎಲ್ಲಿಂದಬಂದ್ವು, ಇಷ್ಟು ದಿನ ಎಲ್ಲಿ ಇದ್ವು ಎನ್ನುವುದೇ ವಿಸ್ಮಯ.
ನಿನ್ನೆ ಇಲ್ಲದವು ಇವತ್ತು ಆಕಾಶದಿಂದ ಬಿದ್ದವೇನು ಅಂದುಕೊಳ್ಳಬೇಕು. ಬತ್ತಿದ ಹೊಳೆಯಲ್ಲಿ ಹೊಟ್ಟೆತುಂಬಾ ಮೊಟ್ಟೆ ಕಟ್ಟಿಕೊಂಡು ಈಜಾಡುತ್ತಿದ್ದ ಮೀನುಗಳು ನೆರೆಮಳೆಯಾಗುತ್ತಿದ್ದಂತೆ ಬಯಲಿಗೆ ಬೆದೆಯಾಡಲು ಬರ್ತವೆ. ಒಂದು ಹೆಣ್ಣಿನೊಂದಿಗೆ ನಾಲ್ಕಾರು ಗಂಡು ಮೀನುಗಳು ಹಲುಬಿನ ದನಗಳಂತೆ ಮೈಮೇಲೆ ಎಚ್ಚರವಿಲ್ಲದೆ ಹಾರಿಕೊಂಡು ಏರಿಕೊಂಡು ತಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳೋಕೆ ಪೈಪೋಟಿ ಮಾಡ್ತಿರ್ತವೆ.
ದುರಂತ ನೋಡಿ, ಹೀಗೆ ಮೀನು ದ್ದೆ ಬಯಲಿಗೆ ಬರೋದು ಹದಮಳೆ ನೆರೆಮಳೆಯಾದರೆ ಮಾತ್ರ. ಹೊಟ್ಟೆಯೊಳಗೆ ತನ್ನಷ್ಟೇ ಗಾತ್ರದ ತತ್ತಿಚೀಲ ಕಟ್ಟಿಕೊಂಡಿದ್ದರೂ ಮಳೆ ಹದವಾಗದೆ ಗಂಡು ಹೆಣ್ಣು ಸೇರುವುದಿಲ್ಲ. ಕೈಕಾಲುಗಳಿಲ್ಲದ ಮೀನುಗಳು ನೀರಿನಲ್ಲಿ ಹೇಗೆ ಸೇರುತ್ತವೆ ಯೋಚಿಸಿ, ಅಂದೆಂಥ ವಿಕಾಸದ ವಿಸ್ಮಯ ನೋಡಿ. ನೀರಿನಲ್ಲಿ ಮೀನು ಒಂದರ ಮೇಲೆ ಒಂದು ಸವಾರಿ ಮಾಡಲು, ತಬ್ಬಿಕೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣು ಮೀನಿನ ಹೊಟ್ಟೆ ಅಡಿ ಇರುವ ಜನನೇಂದ್ರಿಯವನ್ನು ಗಂಡು ಮೀನಿನ ಮೂಗಿನ ತುದಿಯಿರುವ ಪುರುಷಕಾಯ ಸೇರಬೇಕು ಎಂಥ ಅದ್ಭುತ ಅಲ್ಲವೇ! ಅದಕ್ಕೇ ಒಂದು ಹೆಣ್ಣು ಮೀನಿನ ಜೊತೆ ಲೆಕ್ಕವಿಲ್ಲದಷ್ಟು ಗಂಡು ಮೀನುಗಳು ಜಡೆಕಟ್ಟಿ ಎಚ್ಚರವಿಲ್ಲದೇ ಓಡುತ್ತವೆ.
ಮೊಟ್ಟೆ ಇಡುವ ಯಾವುದೇ ಪ್ರಾಣಿ ಆಗಲಿ, ಮೊಟ್ಟೆ ಮರಿ ಮಾಡಲು ಸೂಕ್ತ ವಾತಾವರಣ, ರಕ್ಷಣೆ ಸಿಗದೆ ಸೇರುವುದಿಲ್ಲ; ಅವುಗಳ ಮೊಟ್ಟೆ ಮರಿಯಾಗುವುದೂ ಇಲ್ಲ. ಗೂಡುಕಟ್ಟದೆ ಹಕ್ಕಿಗಳು ಸೇರುವುದಿಲ್ಲ, ಮೊಟ್ಟೆ ಇಡುವುದೂ ಇಲ್ಲ. ಹಾಗಾಗಿಯೇ ಪ್ರಾಣಿಗಳಲ್ಲಿ ವೇಶ್ಯಾವಾಟಿಕೆ, ಅತ್ಯಾಚಾರ ನಡೆಯುವುದಿಲ್ಲ! ಅಷ್ಟು ಮಾತ್ರವಲ್ಲ, ಸೂಕ್ತ ಪರಿಸರ ಒದಗಿ ಬರದಿದ್ದರೆ, ಮೀನಿನ ಮೊಟ್ಟೆ ಮರಿಯಾಗದೆ ಅಂತರ್ ದಹನವಾಗಿ ಹೊಟ್ಟೆಯೊಳಗೇ ಕೊಬ್ಬಾಗಿ ಪರಿವರ್ತನೆಯಾಗುತ್ತದೆ.
ಪ್ರಾರಂಭದ ಮಳೆ ಭರವಸೆಯಂತೆ ಬಿರುಸಾಗಿ ಬಿದ್ದರೆ ಮಲೆನಾಡಿನ ಗದ್ದೆ ಬಯಲು ಎಲ್ಲವೂ ಜಲಚರಗಳ ಮರಿಗಳ ತೊಟ್ಟಿಲು. ಸೂಕ್ತ ಕಾಲಕ್ಕೆ ಸರಿಯಾಗಿ ನೆರೆ ಮಳೆ ಬರದಿದ್ದರೆ ಯಾವುದೇ ಮೀನು, ಕಪ್ಪೆ, ಏಡಿಗಳು ಮರಿಮಾಡುವುದಿಲ್ಲ; ಮೊಟ್ಟೆಗಳು ಮರಿಯಾಗುವುದೇ ಇಲ್ಲ, ಜೀವ ಬರುವುದೇ ಇಲ್ಲಾ, ಎಂಥಾ ದುರಂತ!
0 ಪ್ರತಿಕ್ರಿಯೆಗಳು