ವಡ್ಡಗೆರೆ ನಾಗರಾಜಯ್ಯ
ಇಲ್ಲಿರುವ ಎರಡು ಚಿತ್ರಗಳನ್ನು ನೋಡಿರಿ.
ಇವು ಆದಿಜಾಂಬವರ (ಮಾದಿಗರ) ಅರಸ ಕುರಂಗರಾಜನು ಚರ್ಮವನ್ನು ಹದಮಾಡಿ ಸಂಸ್ಕರಿಸಲು ಬಂಡೆಯಲ್ಲಿ ಕೊರೆಸಿರುವ ಗಲ್ಲೆಬಾನಿಗಳ ಚಿತ್ರಗಳೆಂದು ಸಿಧ್ಧರಬೆಟ್ಟದ ಸ್ಥಳಪುರಾಣ ಹೇಳುತ್ತದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ ದೇಶಿ ಯೋಗಿಗಳ ಒಂದು ಪ್ರಸಿದ್ಧ ಅಧ್ಯಾತ್ಮ ಕೇಂದ್ರ. ಕುರಂಗರಾಜನು ಚರ್ಮದ ನಾಣ್ಯಗಳನ್ನು ಚಲಾವಣೆಗೆ ತರುವ ಮೂಲಕ ಕುಶಲಕರ್ಮಿ ಚಮ್ಮಾರರ ಕಲೆ ಮತ್ತು ಬದುಕನ್ನು ಪೊರೆದವನು. ಇಂದು ಚರ್ಮಗಾರಿಕೆಯನ್ನು ನೆಚ್ಚಿಕೊಂಡ ಮಾದಿಗರು ಕೈಗಾರಕೀಕರಣದ ಪರಿಣಾಮ ತಮ್ಮ ಉದ್ಯಮಶೀಲತೆಯ ನೆಲೆಯಿಂದ ನಿರ್ವಸತಿಗರಾಗಿದ್ದಾರೆ.
ಆ ಮಾತಿರಲಿ, ಸಮಸಮಾಜವನ್ನು ನಿರ್ಮಿಸಲು ಬಯಸಿದ ಬಸವಣ್ಣನವರು ಮಾದಿಗರ ಹರಳಯ್ಯ-ಕಲ್ಯಾಣಮ್ಮನವರ ಮಗನಾದ ಶೀಲವಂತನಿಗೂ ಬ್ರಾಹ್ಮಣರ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹ ಮಾಡಿದ ಕಲ್ಯಾಣ ಕ್ರಾಂತಿಯ ಕಥನ ನಿಮಗೆ ಗೊತ್ತಿದೆ. ಅವರು ಬಸವಣ್ಣನವರಿಗೆ ಚಮ್ಮಾವುಗೆಗಳನ್ನು ಹೊಲೆದುಕೊಟ್ಟ ಕಥನವೂ ನಿಮಗೆ ಗೊತ್ತಿದೆ. ಸಮಗಾರ ಹರಳಯ್ಯ ಮತ್ತು ಕಲ್ಯಾಣಮ್ಮ ಇದೇ ಸಿದ್ಧರಬೆಟ್ಟದಲ್ಲಿಯೇ ಜೀವಸಮಾಧಿಯಾದರೆಂದು ಹೇಳಲಾಗುತ್ತದೆ.
ಆ ಸಮಾಧಿಗಳನ್ನು ನಾನು ಹಲವಾರು ಸಲ ನೋಡಿದ್ದೆನು. ಇಲ್ಲಿದ್ದ ಆ ಶರಣರ ಜೀವಗದ್ದಿಗೆಗಳನ್ನು ಈಗ್ಗೆ ಏಳೆಂಟು ವರ್ಷಗಳ ಹಿಂದೆಯಷ್ಟೇ ವೀರಶೈವ ಜಂಗಮರು ನಾಶ ಮಾಡಿ ಅಲ್ಲಿ ಮಠವನ್ನು ಕಟ್ಟಿದ್ದಾರೆ.
ಬಸವಣ್ಣನವರಿಗೆ ತಮ್ಮ ತೊಡೆ ಚರ್ಮವನ್ನು ತಾವೇ ಸುಲಿದು ಉರಿಚಮ್ಮಾಳಿಗೆ ಹೊಲಿದುಕೊಟ್ಟವರು ಚರ್ಮಕಾರ (ಮಾದಿಗ) ಜನಾಂಗದ ಘನಮಹಿಮ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ. ಅಂಥವರ ಜೀವಗದ್ದಿಗೆಗಳನ್ನು ನಾಶಮಾಡಿ ತಮ್ಮದೇ ಮಠ ಕಟ್ಟಿಕೊಳ್ಳುವ ಮೂಲಕ ದಲಿತ ಜನಾಂಗಕ್ಕೆ ಲಿಂಗಾಯತರು ಈ ರೀತಿಯಲ್ಲಿ ಋಣಸಂದಾಯ ಮಾಡಿದ್ದಾರೆ.
ಈ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬಯಸುವವರು, ನನ್ನ ಬಾಲ್ಯದ ಜೀವದ ಗೆಳೆಯ ಸಂಶೋಧಕ ಡಾ.ಓ.ನಾಗರಾಜು (9448659646) ಅವರು ಬರೆದಿರುವ “ಆದಿಜಾಂವ ಕುಲತೇಜ ಕುರಂಗರಾಜ ವೈಭವ” ಎಂಬ ಐತಿಹಾಸಿಕ ಕಾದಂಬರಿಯನ್ನು ಓದಿರಿ.
ಆದಿಜಾಂಬವ ಮಾದಿಗರಿಂದ ಸಿಡಿದುಹೋಗಿ ಅಲೆಮಾರಿಗಳಾಗಿ ಮಾರ್ಪಟ್ಟಿರುವ ಸಿಂದೋಳ್ಳು, ದಕ್ಕಲಿಗರು, ಗೋಸಂಗಿ ಮುಂತಾದ ನಿರ್ಗತಿಕರನ್ನು ಕುರಿತು ಎಡಗೈ-ಬಲಗೈ ಎಂದು ಕಚ್ಚಾಡುವ ದಲಿತರು ಎಂದಾದರೂ ಯೋಚಿಸಿರುವರೇ? ಇವರಿಗೆ “ದಲಿತ ಸಾಹಿತ್ಯ ಪರಿಷತ್’ ಮತ್ತು “ಮಾತಂಗ ಸಾಹಿತ್ಯ ಪರಿಷತ್ ” ಯಾವ ಪುರುಷಾರ್ಥಕ್ಕೆ ಬೇಕೋ ನನಗೆ ಅರ್ಥವಾಗುತ್ತಿಲ್ಲ.
I feel veerashaiva jangamas have done a great disservice to the history of sharanas by demolishing the said samadhis.