ಕಾಮಧೇನು
– ಶ್ರೀಧರ ನಾಯಕ
ಸುತ್ತಲೂ ಕವಿದಿರಲು
ಅಜ್ಞಾನದ ಕತ್ತಲು
ಎಂದೂ ಆರದ ಅರಿವಿನ
ದೀಪ ಹೊತ್ತಿಸಿದೆ ನೀನು!
ಸ್ವಾಭಿಮಾನದ ಬೆಳಕು
ದಮನಿತರಲ್ಲಿ ಮೂಡಿಸಿ
ಅವಕಾಶಗಳ ದಿಕ್ಕು ನೀ ತೋರಿದೆ.
ಅನ್ಯಾಯ-ಅವಮಾನಗಳ
ಕುಲುಮೆಯಲಿ ಬೆಂದು
ದುಃಖ-ದುಮ್ಮಾನಗಳ
ಸುತ್ತಿಗೆಯೇಟು ತಿಂದು
‘ಭೀಮ’ಕಾಯದ ಪುತ್ಥಳಿಯಾದೆ.
ಭಾಷೆ-ಗಡಿಗಳ ದಾಟಿ
ರಾಶಿ ಕೋಶಗಳನೋದಿ
ಜ್ಞಾನಶಿಖರದ ತುತ್ತತುದಿಯೇರಿ
ಹಾರಿಸಿದೆ ವಿಚಾರಕ್ರಾಂತಿಯಧ್ವಜವ.
‘ಇಲ್ಲಿತ್ತು ಶೋಷಣೆ ಅಲ್ಲಿತ್ತು ದಾಸ್ಯ’
ಮೊಳಗಿಸಿದೆ ನೀನು ಹೋರಾಟದ ಘೋಷಣೆ.
‘ಸ್ವಾತಂತ್ರ-ಸಮತೆ ಜೊತೆಗೂಡಬೇಕು
ಬಿಡುಗಡೆಯ ಕನಸು ನನಸಾಗಬೇಕು’
ದಲಿತನಾಯಕ ನೀನು ರಾಷ್ಟ್ರನಾಯಕನಾದೆ;
ಸಮತ್ವವ ಸಾರುವ ರಾಜ್ಯಾಂಗ ರೂಪಿಸಿದೆ.
ಆಧುನಿಕ ಮನುವೆಂದು
ಕರೆಯುವರು ನಿನ್ನ
ಆದರೆ ತರತಮವ ಸೃಷ್ಠಿಸಿದ
ಮನುವಲ್ಲ ನೀನು
ಸಮಾನತೆಯ ಅಮೃತ ಕರೆದ ಕಾಮಧೇನು!
ಇಷ್ಟವಾಯ್ತು ಕವಿತೆ
sakaalika..
ತುಂಬಾ ಚನ್ನಾಗಿದೆ ಸರ್. ಆದರೆ ಮನು ಹೆಸರು ಸೈತ ಬಾಬಾ ಕೂಡ ಬರಬಾರದಿತ್ತು ಅಂತ ಅನಿಸ್ತು.