ಇಮ್ತಿಯಾಜ್ ಶಿರಸಂಗಿ
ಸದ್ಯದ ತುರ್ತಿಗೆ ಕನ್ನಡಿಹಿಡಿದ ಕವಿತೆಗಳು.
ಯಾವುದೇ ಲೇಖಕರನ್ನು ನಿಮ್ಮ ಸಾಹಿತ್ಯದ ಮೂಲ ದ್ರವ್ಯ ಯಾವುದು ಎಂದು ಕೇಳಿದರೆ ಎಲ್ಲರೂ ನಾವು ಬದುಕುವ ಬದಕು, ಅನುಭವ,ನಮ್ಮ ಬಾಲ್ಯ, ಇಂದಿನ ಸಮಾಜ ಇವೆ ನಮ್ಮ ಸಾಹಿತ್ಯದ ರಚನೆಗೆ ಮೂಲ ದ್ರವ್ಯ ಏನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೆ ಬದುಕಿನಲ್ಲಿ ಜೊತೆ ಜೊತೆಗೆ ಕೋಮುವಾದ ಧರ್ಮ ರಾಜಕಾರಣ ದೃವೀಕರಣ ಈ ಎಲ್ಲವೂ ಕೂಡ ನಮ್ಮ ಬದುಕಿನಲ್ಲಿ ಈಗ ಹಾಸು ಹೊಕ್ಕಾಗಿದೆ.. ನಾವು ಬದುಕುವ ಬದುಕೇ ನಮ್ಮ ಸಾಹಿತ್ಯದ ಮೂಲ ದ್ರವ್ಯ ಎನ್ನುವ ಲೇಖಕರಿಗೆ ಕೋಮುವಾದ ಧರ್ಮರಾಜಕಾರಣ ದೃವೀಕರಣದಂತಹ ಗಂಭೀರ ವಿಷಯಗಳ ಬಗ್ಗೆ ಜಾಣ ಕುರುಡನ್ನು ವಹಿಸುತ್ತಾರೆ…(ಕೆಲವರು )
ಆದರೆ ಪ್ರತಿಭಾ ನಂದಕುಮಾರ್ ಅವರು ಮನುಷ್ಯ ಸಹಜ ಪ್ರೀತಿ ಪ್ರೇಮ ಕಾಮ ನೋವು ನಲಿವುಗಳ ಬಗ್ಗೆ ಬರೆಯುವುದಲ್ಲದೆ ಸದ್ಯದ ತುರ್ತಿಗೆ ಸ್ಪಂದಿಸುವ ಕವಿತೆಗಳನ್ನು ಬರೆಯುತ್ತಾರೆ..
ಇವರ ಕಾವ್ಯದಲ್ಲಿ ಪ್ರಭುತ್ವದ ನೇತಾರನಿಂದ ಹಿಡಿದು ಪೂಜಿಸುವ ದೇವರು ಕೂಡ ಪ್ರಶ್ನೆಗೆ ಅರ್ಹರು.
ಕೌ ಬಾಯ್ಸ್ ಮತ್ತು ಕಾಮಪುರಾಣ ಸಂಕಲನದ ಕೆಲವು ಸಾಲುಗಳನ್ನು ನೋಡುವುದಾದರೆ
“‘”” ಗುಂಡಿಗೆಯ ಮಾತಾಡಿದರೆ
ಗುಂಡಿನ ಧ್ವನಿ ಕೇಳಿಸುವವರ
ಜೊತೆ ಪ್ರೇಮಾಲಾಪವೇನು??
ಸ್ವಚ್ಛ ಭಾರತದಲ್ಲಿ ಮಗ್ನ
ಕಾಷಾಯ ವಸ್ತ್ರಧಾರಿ
ಹೆಜ್ಜೆ ಹೆಜ್ಜೆಗೂ ನಗ್ನ
ಧರ್ಮದ ರಕ್ಷಕರಂತೆ ಸ್ಕಲನ ವೀರರು
ಕೂಗುಮಾರಿಗಳು ಇವರೇ ದಂಡಪಿಂಡಗಳು “”””
ಇದೇ ಸಂಕಲನದ ಅಯ್ಯಪ್ಪ ಕವಿತೆ ಗಮನಿಸಬೇಕು
“”””ಹತ್ತಬಾರದು 18 ಮೆಟ್ಟಿಲು
ಹೊರಬಾರದು ತಲೆ ಮೇಲೆ ಇರುಮುಡಿ
ನೈಷ್ಟಿಕ ಬ್ರಹ್ಮಚಾರಿಯ ಗುಡಿಯೊಳಗೆ
ಬೇಕಾದರೆ ಬರಬಹುದು
ಹೊರಗಾದವಳು ಮುಗಿದ ಮೇಲೆ ಒಳಗೆ “”””
ಇವರ ಕಾವ್ಯದಲ್ಲಿ ಸದ್ಯದ ತುರ್ತಿಗೆ ಸ್ಪಂದಿಸುವ ಗುಣವಿದೆ, ಪ್ರತಿಭಟಿಸುವ ಧ್ವನಿ ಇದೆ,
ಅಮೇರಿಕಾ ಅಧ್ಯಕ್ಷ ಭಾರತಕ್ಕೆ ಬಂದಾಗ ಆತನಿಗೆ ಸ್ಲಂ ಕಾಣದಿರಲೆಂದು ಗೋಡೆ ಕಟ್ಟಿದ ಬಗ್ಗೆ,,
ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಪಕ್ಕದ ರಾಜ್ಯದಲ್ಲಿ ಮಾಡುತ್ತಿರುವ ಬುಲ್ಡೋಜರ್ ರಾಜಕಾರಣದ ಬಗ್ಗೆ,,
ಮಹಿಳಾ ಪ್ರವಾಸಿ ಹೆಣ್ಣು ಮಕ್ಕಳು ಸ್ಕರ್ಟ್ ತೊಡಬಾರದು ಎನ್ನುವ ಸಚಿವನ ಮಾತುಗಳು ಬಗ್ಗೆ,,
ಎಲ್ಲ ಘಟನೆಗಳು ಇವರ ಕಾವ್ಯದಲ್ಲಿ ಸೃಜನಾತ್ಮಕವಾಗಿ ದಾಖಲೆಗೊಂಡಿವೆ, ಇವೆಲ್ಲವೂ ತಪ್ಪು ಎನ್ನುವ ಗಟ್ಟಿ ಧ್ವನಿಯೊಂದಿಗೆ..
“””ಟೀಕಾಚಾರ್ಯರು ಅವಳ ಸ್ಕರ್ಟ್ ನ ಅಂಚಿನಲ್ಲಿ ಹೊರಳಿ ಕೊಳೆಯಾಗಿ ವಾಷಿಂಗ್ ಮಷೀನ್ ನಲ್ಲಿ ತೊಳೆದು ಹೋಗುತ್ತಾರೆ ಗಟಾರ ಸೇರುತ್ತಾರೆ..”””
ಜನರ ಆಶೋತ್ತರಗಳ ಮಾರಿ ಬರಿ ಕುರ್ಚಿಯ ಭ್ರಮೆಯಲ್ಲಿ ಇರುವ ನಾಯಕರಿಗೆ ಎಚ್ಚರಿಸುವ ಕವಿತೆ ಈ ಕೆಳಗಿನಂತಿದೆ..
“”” ಉಳಿಯಲಿಲ್ಲ ಹಿಟ್ಲರ್ ನ ಅಸ್ತಿ ಪಂಜರಗೂ ಸಹ
ನಡೆಯಲಿಲ್ಲ ಅಂತ್ಯಕ್ರಿಯೆ ಮರ್ಯಾದೆ ಅಹ
ಸಾಯುವ ಮುನ್ನ ಮನುಷ್ಯನಂತೆ ಬದುಕಲಿಲ್ಲ
ಮುಂದಿನವರು ಅವನನ್ನು ನೋಡಿ ಕಲಿಯಲಿಲ್ಲ..””
ಆಹಾರ ಸ್ವಾತಂತ್ರ್ಯದ ಬಗ್ಗೆ ಕೆಲವು ಸಾಲುಗಳು ಗಮನಿಸಬೇಕು,,
ವಿವಿಧ ಆಹಾರ ಸೇವಿಸುವ ಸ್ವಾತಂತ್ರವನ್ನು ಗೌರವಿಸುವುದನ್ನು ಕಲಿಯಬೇಕು ಎನ್ನುವ ದಾಟಿಯಲ್ಲಿದೆ.
“””ನನ್ನ ರಾಮನಿಗಿಷ್ಟ ಪಾನಕ ಕೋಸಂಬರಿ ಮಜ್ಜಿಗೆ ಸಜ್ಜಿಗೆಚಿಂತೆ ಇಲ್ಲ ನೀವು ಮಾಡಿಕೊಂಡರು ಮಾಂಸದಡಿಗೆ”””
ಚಿಂತೆ ಇಲ್ಲ ನೀವು ಮಾಡಿಕೊಂಡರು ಮಾಂಸದಡಿಗೆ”””
—ನನ್ನ ರಾಮ ಬೇರೆ(ಅವನ ಮುಖ ಮರೆತು ಹೋಗಿದೆ ).
ಇದೆ ಸಂಕಲನ ಇನ್ನೊಂದು ಕವಿತೆಯ ಸಾಲುಗಳು
“””ಇದೀಗ ಇನ್ನೊಂದು ತಂತ್ರಕೊಂಡುಕೊಂಡಿದ್ದಾರೆ
ಅದವರ ರಾಮಬಾಣವೆಂದು ಭ್ರಮಿಸಿದ್ದಾರೆ
ಬಾಡು ತಿನ್ನುವವರಿಗೆ ಬಾಳೆಲೆಯ ಊಟ ಬಡಿಸಿದ್ದಾರೆ..””””
-ಚಕ್ರವ್ಯೂಹ
ದೇವರು ಇವರ ಕಾವ್ಯದಲ್ಲಿ ನರ ಮನುಷ್ಯರಂತೆ ಜಗಳಕ್ಕೆ ಸಿಕ್ಕಿಬಿಡುತ್ತಾನೆ ಏನಯ್ಯ ನಿನ್ನ ಕಥೆ ಎಂದು ಸಿಟ್ಟಿನಿಂದಲೇ ಗದುರಿಸುವ ಕವಿತೆ,, ದೇವರ ಹೆಸರಿನಲ್ಲಿ ಲಿಂಗ ತಾರತಮ್ಯ ಮಾಡುವ ಜನರನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸುವ ಕವಿತೆ.
“‘”ಹೆಂಗಸರಿಗೆ ಭಯ ಬೀಳುವೆಂದರೆ
ಜನರ ತಪ್ಪುಗಳ ಲೆಕ್ಕ ಬಿಡುವಿಯಂತೆ
ಕಾಗೆ ಬಂಗಾರದ ತಕ್ಕಡಿಯಲ್ಲಿ ತೂಗಿ ಒಪ್ಪಿಸಿಕೊಂಡು ಕಾಣಿಕೆ ಹಾಯಾಗಿದ್ದವನು ಅದ್ಯಾವಾಗ ಹೇಳಿದೆ ಹೆಣ್ಣುಗಳನ್ನು ಒಳಗೆ ಬಿಡಬಾರದೆಂದು??
ಏನಯ್ಯ ನಿನ್ನ ಕಥೆ ಆಂ???”””..
ಸದ್ಯ ಆಗುತ್ತಿರುವ ಈ ಧ್ರುವೀಕರಣ ಮತ್ತು ಸ್ಥಿತ್ಯಂತರದ ಬಗ್ಗೆ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಮುಂದಿನದ ಬಗ್ಗೆ ಚಿಂತಿಸುತ್ತಾ ವರ್ತಮಾನದ ಸ್ಥಿತಿಯನ್ನು ತಿಳಿಸುವ ಕವಿತೆ.
“””ನಾವು ಹೀಗಿರಲಿಲ್ಲ
ಇಷ್ಟು ಹಳಸಿರಲಿಲ್ಲ
ಮುಂದೆ ಏನಾಗುವುದು ತಿಳಿದಿಲ್ಲ”””
—ಚಾಟಿ (ಅವನ ಮುಖ ಮರೆತು ಹೋಗಿದೆ.)
ಈ ಸಾಲುಗಳನ್ನು ಗಮನಿಸಬೇಕು
“”””ನಿನ್ನೆ ತನಕ ನೆರೆಯವರಾಗಿದ್ದವರು ಇಂದು ಬೆಳಿಗ್ಗೆ ಪರಧರ್ಮೀಯರಾಗಿ ಬಿಡುತ್ತಾರೆ ಅಕ್ಕ ಪಕ್ಕದ ಅಂಗಡಿಯವರು ಸ್ಪರ್ಧಿಯಾಗುತ್ತಾರೆ “””
ಇಲ್ಲಿ ಕೆಲವು ಕವನಗಳ ಬಗ್ಗೆ ಮಾತ್ರ ನಾನು ಬರೆದಿದ್ದೇನೆ ಈ ಕವನ ಸಂಕಲಗಳನ್ನು ಇಡಿಯಾಗಿ ಓದಿಯೇ ಸವಿಯಬೇಕು, ದಕ್ಕಿಸಿಕೊಳ್ಳಬೇಕು. ಇನ್ನೂ,,
ಸೀದಾ ಎದೆಗೆ ನಾಟುವ ಪ್ರೇಮದ ಉತ್ಕಟ ಕವಿತೆಯ ಸಾಲುಗಳಿವೆ..
ಅವನ ಮುಖ ಮರೆತು ಹೋಗಿದೆ ಕವನ ಸಂಕಲನದ “ಓಡಿ ಹೋಗೋಣ “ಎಂಬ ಕವಿತೆ ನನ್ನನ್ನು ಅತಿಯಾಗಿ ಕಾಡಿದ ಮತ್ತು ಕಾಡುವ ಕವಿತೆ, ಆಗಾಗ ಈ ಕವಿತೆಯನ್ನು ಮತ್ತೆ ಮತ್ತೆ ಓದುತ್ತೇನೆ..
ಕಾವ್ಯಸಕ್ತರು ಈ ಎರಡು ಕವನ ಸಂಕಲನಗಳನ್ನು ಓದಿ…
ಬಹುಪರಾಕ ಹೇಳುತ್ತಾ ಸುದ್ದಿಯಲ್ಲಿರದೆ ಸತ್ಯವನುಡಿದು ರದ್ದಿ ಯಾದರು ಪರವಾಗಿಲ್ಲ ಎನ್ನುವ ತವಕದಲ್ಲಿರುವ ಈ ಕವಿತೆಗಳನ್ನು ನೀಡಿದ ಪ್ರತಿಭಾ ನಂದಕುಮಾರ್ ಅವರಿಗೆ,, ಧನ್ಯವಾದಗಳು.
0 ಪ್ರತಿಕ್ರಿಯೆಗಳು