ಸನತ್ ಕುಮಾರ ಬೆಳಗಲಿ
ಕಳೆದ ಐದಾರು ವರ್ಷಗಳಿಂದ ನನ್ನ ಆತ್ಮೀಯ ಮಿತ್ರರಾಗಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರ ಅಗಲಿಕೆ ಆಘಾತವನ್ನುಂಟು ಮಾಡಿತು. ವಯಸ್ಸು ಬರೀ ೬೧. ಇನ್ನೂ ಅವರು. ಇರಬೇಕಾಗಿತ್ತು. ಆದರೆ ಹೃದಯಾಘಾತ ಮತ್ತು ಮೆದುಳು ನಿಷ್ಕ್ರಿಯಗೊಂಡ ಪರಿಣಾಮವಾಗಿ ಸುಧಿಂದ್ರ ಅಸು ನೀಗಿದರು.
ಡಿ.ಆರ್.ಡಿ.ಒ ದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಸುಧೀಂದ್ರ ಅವರ ಬರವಣಿಗೆಗೆ ನಿವೃತ್ತಿ ಇರಲಿಲ್ಲ. ಅತ್ಯಂತ ಕ್ಲಿಷ್ಟ ವಾದ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸರಳ ಕನ್ನಡದಲ್ಲಿ ಸುಧೀಂದ್ರ ಬರೆಯುತ್ತಿದ್ದರು.
ಪ್ರತಿ ಮಂಗಳವಾರ ‘ವಿಜಯ ಕರ್ನಾಟಕ’ ದಲ್ಲಿ ‘ನೆಟ್ ನೋಟ’ ಎಂಬ ಅಂಕಣ ಬರೆಯುತ್ತಿದ್ದ ಸುಧೀಂದ್ರ ಕನ್ನಡದ ಜನಪ್ರಿಯ ವಿಜ್ಞಾನ ಅಂಕಣಕಾರರಾಗಿದ್ದರು. ಈಗ ಎರಡು ವರ್ಷದ ಒಂದು ದಿನ ಫೋನ್ ಮಾಡಿದ ಸುಧೀಂದ್ರ ‘ಬೆಂಗಳೂರಿನಲ್ಲಿ ಇದ್ದೀರಾ’ ಎಂದು ಕೇಳಿದರು. ‘ಹೌದು ಇದ್ದೀನಿ’ ಎಂದು ಹೇಳಿದೆ. (ಆಗ ನಾನು ಬೆಂಗಳೂರಿನ ಬಿಟಿಎಂ ಲೇ ಔಟ್ ನ ನಮ್ಮ ಮನೆಯಲ್ಲಿದ್ದೆ) ಈಗ ಬಂದೆ ಎಂದವರು ಬಂದೇ ಬಿಟ್ಟರು.
ಪುಸ್ತಕಗಳ ಗಂಟನ್ನೇ ಹೊತ್ತು ಕೊಂಡು ಬಂದಿದ್ದ ಸುಧೀಂದ್ರ ಅದನ್ನು ನನಗೆ ಕೊಟ್ಟು ಓದಿ ಅಭಿಪ್ರಾಯ ತಿಳಿಸಲು ಕೇಳಿಕೊಂಡರು. ಪ್ರತಿವಾರ ‘ವಾರ್ತಾಭಾರತಿ’ಯಲ್ಲಿ ನಾನು ಬರೆಯುತ್ತಿದ್ದ ಅಂಕಣ ಬರಹ ಓದುತ್ತಿದ್ದ ಸುಧಿಂದ್ರ ‘ನಿಮ್ಮ ಲೇಖನ ಓದಿ ನನ್ನ ಕೆಲ ಅನಿಸಿಕೆಗಳು ಬದಲಾದವು’ ಎಂದಾಗ ಧನ್ಯನಾದೆ. ಅವರ ಅಂಕಣ ಬರಹಗಳನ್ನು ನಾನು ಪ್ರತಿವಾರ ತಪ್ಪದೇ ಓದುತ್ತಿದ್ದೆ. ಆಗಾಗ ಫೋನ್ ಮಾಡುತ್ತಿದ್ದ ಸುಧೀಂದ್ರ ಈ ವಾರದ ತಮ್ಮ ಬರಹದ ಬಗ್ಗೆ ನನ್ನ ಅಭಿಪ್ರಾಯ ಕೇಳುತ್ತಿದ್ದರು.
ನಾನು ಕಂಡ ಅತ್ಯಂತ ಸಜ್ಜನ ಸರಳ ವ್ಯಕ್ತಿ ಸುಧೀಂದ್ರ ಹಾಲ್ದೊಡ್ಡೇರಿ. ಹೆಸರಾಂತ ವಿಜ್ಞಾನಿಯಾಗಿದ್ದರೂ ಅದೆಂದೂ ಅವರಲ್ಲಿ ಅಹಂಕಾರ ತರಲಿಲ್ಲ. ಸುಧೀಂದ್ರ ಅವರ ತಂದೆ ಎಚ್.ಆರ್.ನಾಗೇಶರಾವ್ ನಮ್ಮ ‘ಸಂಯುಕ್ತ ಕರ್ನಾಟಕ’ದ ಬೆಂಗಳೂರು ಕಚೇರಿಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿಂದ ಬಂದ ನಾಗೇಶರಾವ್ ಕಟ್ಟಾ ನೆಹರೂವಾದಿ. ಅವರ ಪ್ರಭಾವ ಕೂಡ ಸುಧೀಂದ್ರ ಅವರ ಮೇಲಿತ್ತು. ತಂದೆಯ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದರು.
ಬೆಂಗಳೂರಿನ ನಮ್ಮ ಮನೆಗೆ ಬಂದಾಗೆಲ್ಲ ವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಸುಧೀಂದ್ರ ಕಳೆದ ವಾರವೇ ಫೋನ್ ಮಾಡಿ ಮಾತನಾಡಿದ್ದರು. ಸುಧೀಂದ್ರ ಅವರ ಅಗಲಿಕೆಯಿಂದ ಕರ್ನಾಟಕ ಬಹು ದೊಡ್ಡ ವಿಜ್ಞಾನ ಲೇಖಕನನ್ನು ಕಳೆದುಕೊಂಡಂತಾಗಿದೆ. ನಾನು ನನ್ನ ವೈಚಾರಿಕ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ‘ಅಪ್ಪ ಅಂದರೆ ಆಕಾಶ’ ಎಂದು ಹೇಳುತ್ತಿದ್ದ ಮಗಳು ಮೇಘನಾ ಮತ್ತು ಅವರ ಮನೆಯವರು. ಈ ಆಘಾತದಿಂದ ಚೇತರಿಸಲಿ.
0 ಪ್ರತಿಕ್ರಿಯೆಗಳು