ಸಬಿತಾ ಬನ್ನಾಡಿ
ನಿನ್ನಿನ ಅನುಭವ ವಿಶಿಷ್ಟವಾದುದು. ಯಾರದೋ ಕೃತಿ ಬಗ್ಗೆ ನಾನು ಕೇಳಿಸಿಕೊಂಡಂತೆ ಅಲ್ಲಿನ ವಾತಾವರಣ. ಅಲ್ಲಿ ವೇದಿಕೆ ಇರಲಿಲ್ಲ. ಸ್ವಾಗತ, ಪ್ರಾಸ್ತಾವಿಕ, ಅಧ್ಯಕ್ಷತೆ,ವಂದನಾರ್ಪಣೆ ಏನೂ ಇರಲಿಲ್ಲ. ಮಾತಾಡಲು ಆಹ್ವಾನಿತರಾದವರ ಪಕ್ಕ, ಕಾರ್ಯಕ್ರಮಕ್ಕೆ ಆಗಮಿಸಿದ ಯಾರು ಬೇಕಾದರೂ ಕುಳಿತುಕೊಳ್ಳಲು ಅನುವು ಮಾಡಿಕೊಡುವ ಕುರ್ಚಿಯೊಂದಿತ್ತು. ಮತ್ತು ಎಲ್ಲಾ ಕುರ್ಚಿಗಳೂ ಪರಸ್ಪರ ಜೋಡಣೆಗೊಂಡಿತ್ತು. ಮುರಳಿ, ಭಾಸ್ಕರ ‘ಎಲುವಿನ ಹಂದರದೊಳಗೊಂದು. .’ ವಿನಿಂದ ಶುರು ಆಯ್ತು. ವಿದ್ಯಾಜೋಸೆಫ್ ಚಂದವಾಗಿ ಚಾಲನೆಯ ಮಾತಾಡಿದರು. ಈ ಅಂಕಣಗಳು ತೆರೆಯುವ ಹಲವು ಕಿಂಡಿಗಳೇ ರೂಪಕಗಳಾಗಿವೆ ಎಂದರು.
ಸಂದೇಶ್, ಕಾವ್ಯಾ, ಮಮತಾ ನಿರಂಜನ, ಸರೋಜ, ಸುಧಾ ಬಿ.ಎಸ್, ವೃಂದಾ, ಗಾಯತ್ರಿ, ಎಚ್.ಟಿ.ಕೃಷ್ಣಮೂರ್ತಿ ಮೊದಲಾದವರ ಅಭಿಪ್ರಾಯಗಳು ಹಣತೆಗಳಂತಿದ್ದವು. ಉಮಾಪತಿ ಭಾರತ, ಇರಾನ್ ನ ಪರಿಸ್ಥಿತಿಗಳ ಸಾಮ್ಯವನ್ನು ರೂಪಕಗೊಳಿಸಿ ಮಾತಾಡಿದರು. ‘ಇದಿರು ನೋಟ’ ವು ಕ್ರಾಂತಿ ಪ್ರತಿಕಾಂತಿಯಲ್ಲಿ ಪ್ರತಿಕ್ರಾಂತಿಯ ನೆಲೆಯ ನೋಟ ಎಂದು ಗುರುತಿಸಿದರು. ಎಚ್.ಎಸ್.ಅನುಪಮಾ, ಸ.ಉಷಾ ಇದಿರುನೋಟ ಒಳಗೊಂಡಿರುವ ತಾಯಿ ಮಾದರಿಯ ಕಟ್ಟುವಿಕೆ ಮತ್ತು ಕಾವ್ಯಾತ್ಮಕ ಅಭಿವ್ಯಕ್ತಿ ಯನ್ನು ವಿಸ್ತರಿಸಿದರು. ರೇಖಾಂಬ ಆತ್ಮೀಯವಾಗಿ ಕಾರ್ಯಕ್ರಮ ನಡೆಸಿಕೊಟ್ಟರು.ಭಾನುವಾರದ ಬಿಡುವನ್ನು ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದವರ ಪ್ರೀತಿಗೆ ನನ್ನ ಮರುಪ್ರೀತಿಯನ್ನಷ್ಟೇ ಹೇಳಬಲ್ಲೆ.
ಸಂದೇಶ್ ಪದವಿ ವಿದ್ಯಾರ್ಥಿ. ಕಾಶ್ಮೀರ ಕುರಿತ ಲೇಖನ ಓದಿದ ಮೇಲೆ ಮೂಲಭೂತವಾದದ ಬಗೆಗೆ ತನ್ನೊಳಗಾದ ಅಭಿಪ್ರಾಯ ಬದಲಾವಣೆ ಬಗ್ಗೆ ಹೇಳಿದ – ಸಾಕು ನಮ್ಮೆಲ್ಲರಿಗೂ ಇಂತಹದೊಂದು ಮಾತು – ಹಣತೆ ಹಚ್ಚಲು ಮತ್ತು ಮುಂದೊಯ್ಯಲು. ನೇಹದ ಈ ಲೋಕಕ್ಕೆ, ಲೋಕದ ಈ ನೇಹಕ್ಕೆ ತುಂಬು ಪ್ರೀತಿ.
0 ಪ್ರತಿಕ್ರಿಯೆಗಳು