ಚೈತ್ರಾ ಶಿವಯೋಗಿಮಠ
ಒಂದು ಕ್ಷಣವೂ ಆಚೀಚೆ ನೋಡದಂತೆ ಓದಿಸಿಕೊಳ್ಳುವ ಕಾದಂಬರಿ ‘ಇಜಯಾ’ ಬಹಳ ದಿನಗಳ ಮೇಲೆ ಒಂದೇ ಗುಕ್ಕಿಗೆ ಓದಿ ಮುಗಿಸಿದ ಕಾದಂಬರಿ ಇದು. ಕಾದಂಬರಿಯ ಕಥಾನಾಯಕಿ ‘ಇಜಯಾ’ ಪಾತ್ರ ನನಗೆ ಬಹಳಷ್ಟು ಕನೆಕ್ಟ್ ಆಯಿತು. ಎಲ್ಲರಿಗೂ ಕನಸುಗಳಿರುತ್ತವೆ ಆದರೆ ಪರಿಸ್ಥಿತಿಗಳು ಅಥವಾ ತಮ್ಮದೇ ಮಿತಿಗಳಿಂದಾಗಿ ಆ ಕನಸುಗಳು ಚಿಗುರುವುದಕ್ಕೂ ಮುನ್ನವೇ ಕಮರಿ ಹೋಗುತ್ತವೆ.
ಕೆಲವರಿಗೆ ಸುಶ್ರಾವ್ಯವಾಗಿ ಹಾಡುವುದು, ಮತ್ಯಾರಿಗೊ ನೃತ್ಯ ಕಲಿಯುವುದು, ಲೇಖಕ/ಲೇಖಕಿಯಾಗುವುದು, ಕ್ರೀಡಾಪಟುವಾಗುವುದು ಹೀಗೇ ನಾನಾ ರೀತಿಯದು ಆದರೆ ಯಾವುದೋ ಕಾರಣಗಳಿಂದ ಅಂತಹ ಕನಸುಗಳನ್ನ ನನಸು ಮಾಡಿಕೊಳ್ಳುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.
ಇಡೀ ಕಾದಂಬರಿಯ ಆಶಯ ನಿಮ್ಮ ಕನಸುಗಳ ಬೆನ್ನಟ್ಟಿ ಮತ್ತು ವ್ಯರ್ಥವಾಗಿ ಅದು ಇದು ಕಾರಣಗಳನ್ನು ಕೊಡುತ್ತ ಇರುವ ಒಂದೇ ಜೀವನದಲ್ಲಿ ನಾವು ಯಾರಿಗೂ ಅನಿವಾರ್ಯ ಅಲ್ಲ ಅನ್ನುವುದನ್ನು ಮನಗಾಣಿರಿ ಎನ್ನುವುದು. ಜೀವನ ಕನಸುಗಳ ಬೆಂಬತ್ತಿದ ನಡಿಗೆಯಾದಾಗ ಸಿಗುವ ತೃಪ್ತಿ ಆನಂದ ಹೇಳಲಾಗದು. ಕಾದಂಬರಿ ಓದುವಾಗ ಈ ‘ಇಜಯಾ’ ನಾನೇ ಅನ್ನಿಸುವಷ್ಟರ ಮಟ್ಟಿಗೆ ನನ್ನನ್ನ ತಲ್ಲೀನಳಾಗಿಸಿ ಓದಿಸಿಕೊಂಡಿತು. ಇದು ಕಥೆಯನ್ನ ಕಟ್ಟಿದ ಪರಿಗೆ ಸಲ್ಲಬೇಕಾದ ಶ್ರೇಯಸ್ಸು.
ಕಾದಂಬರಿಯ ಮೊದಲರ್ಧ ಇಜಯಾ ತನ್ನ ಕೆಲಸ, ಮನೆ, ಸಂಸಾರದ ಜೊತೆ ತಾನು ಲೇಖಕಿಯಾಗುವ ಕನಸನ್ನ ನನಸಾಗಿಸಲು ಪಡುವ ಪರಿಪಾಟಲು ಮತ್ತು ನಂತರ ಪ್ರವಾಸ ಹೋದಾಗ ರಿವರ್ ರಾಫ್ಟಿಂಗ್ ನಲ್ಲಾಗುವ ಅವಘಡದಿಂದಾಗಿ ಜೀವನವೇ ಬದಲಾಗಿ ಹೋಗುವ ದುರಂತ. ಓದುತ್ತಾ ಓದುತ್ತಾ ಇದೊಂದು ಸೈಕೊ ಥ್ರಿಲ್ಲರ್ ಕಾದಂಬರಿ ಎನ್ನಿಸಿಬಿಡುತ್ತದೆ. ಮಂಜನ ಪಾತ್ರಕ್ಕೆ ಮನಸ್ಸಿನಲ್ಲೇ ನಮಿಸಬೇಕೆನಿಸುತ್ತದೆ.
ಕಾದಂಬರಿಯ ತುಂಬಾ ಚಂದದ ರೂಪಕಗಳು
‘ಹರುಕು ಮುರುಕು ಕ್ಯಾನ್ವಸ್ ಮೇಲೆ ಉಳಿದ ಬಳಿದ ಬಣ್ಣಗಳನ್ನು ಸ್ವಲ್ಪವೂ ಶ್ರದ್ಧೆಯಿಲ್ಲದ ಕಲಾವಿದ ಎರಚಿದಂತಿತ್ತು’ ಒಟ್ಟಿನಲ್ಲಿ ಒಂದು ಅತ್ಯಂತ ಒಳ್ಳೆಯ ಓದಿನ ಅನುಭವ ನೀಡುವ ಹೊಸತನದ ಕಾದಂಬರಿ ‘ಇಜಯಾ’. ಕಡೆಯದಾಗಿ ನನಗೆ ಬಹಳ ಹಿಡಿಸಿದ ಸಾಲು ‘ನಮ್ಮನ್ನು ಪ್ರೀತಿಸುವವರ ಜೀವನದಲ್ಲಿ ನಾವು ಅತ್ಯಂತ ಅನಿವಾರ್ಯವಾದವರು ಎಂದು ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳುತ್ತಾ, ಕನಸುಗಳ ಬಲಿ ಕೊಡುವುದಕ್ಕಿಂತ ದೊಡ್ಡ ಕ್ರೌರ್ಯ ಬೇರೆ ಇಲ್ಲ’ ಹೆಚ್ಚಿಗೆ ಹೇಳುವುದಿಲ್ಲ ಚಂದದ ಮುಖಪುಟ ಹಾಗೂ ಮುದ್ರಣದ ಇಜಯಾ ಕಾದಂಬರಿ ಕೊಂಡು ಓದಿ ಆಸ್ವಾದಿಸಿ.
ಧನ್ಯವಾದಗಳು ಪೂರ್ಣಿಮಾ ಮೇಡಂ ಒಂದು ಒಳ್ಳೆಯ ಕಾದಂಬರಿಗಾಗಿ.
0 ಪ್ರತಿಕ್ರಿಯೆಗಳು