ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಬರಬೇಕಿತ್ತು ಬರಲಿಲ್ಲ ಅವನು…

ಹೀಗೊಂದು ಕಳವಳ …

11873451_952457641464604_8588628347365796834_n

ಡಾ ಶಿವಾನಂದ ಕುಬಸದ್

ಇಂದು ಬರಬೇಕಿತ್ತು ಬರಲಿಲ್ಲ ಅವನು.
ಹೌದು, ವಾರದ ಹಿಂದೆ ಇಲ್ಲೇ ನನ್ನೆದುರೇ
ಕುಳಿತು ಚಿಂತಿತನಾಗಿದ್ದ ನೆನಪು
 
ತಲೆಗೆ ನೀಟಾಗಿ ಸುತ್ತಿದ ಬಿಳಿಯ ರುಮಾಲು
ಮೈಮೇಲೆ ಸಾದಾ ಬಿಳಿಯ ಆದರೆ ಸ್ವಚ್ಚ ಅಂಗಿ
ಮುಖದಲ್ಲಿ ಕಳೆ ತುಂಬಿಕೊಂಡಿದ್ದ ಬಂದಾಗ
ಬದಿಗೆ ಮುಗ್ಧತೆಯೇ ಮೂರ್ತಿಯಾದ ಹೆಂಡತಿ
 
ಏನಾಗೈತ್ರಿ ಇಕಿಗೆ ..? ಅಂದಿದ್ದ
ನಾ ಹೇಳಬಾರದಿತ್ತೇನೋ , ಆದರೆ
ವೃತ್ತಿಗೊಂದು ಅನಿವಾರ್ಯತೆ ಇದೆಯಲ್ಲ
‘ಯಕೃತ್ತಿನ ತುಂಬ ಕ್ಯಾನ್ಸರ್ ಗಡ್ಡೆಗಳು’
ಅಪ್ರಯತ್ನ ಉತ್ತರ ನನ್ನದು
121
 
ಸಂತಳಂತೆ ಕುಳಿತ ಅವನ ಹೆಂಡತಿಯ
ಮುಖದಲ್ಲಿ ಭಾವ ಹುಡುಕಿದೆ ಕಾಣಲಿಲ್ಲ
ಅವನು ಮೇಲೆ ನೋಡುತ್ತಿದ್ದ. ಕಣ್ಣ ಕೊನೆಗೆ
ನೀರು ಜಿನುಗಿತೇ, ಕಾಣಲಿಲ್ಲ. ಕೆಲಹೊತ್ತು
ಕೋಣೆಯಲ್ಲಿ ಫ್ಯಾನು ಮಾತ್ರ ಮಾತಾಡುತ್ತಿತ್ತು
 
ಬದಿಗೆ ಕುಳಿತವಳೊಡನೆ ನಲವತ್ತು ವರ್ಷ
ಜೀವನ ಎಂಬುದನು ಕೂಡಿಸಿದುದನ್ನು
ಸುಖ ದುಃಖಗಳನು ಸಮನಾಗಿ ಹಂಚಿಕೊಂಡು
ಬದುಕು ಸವೆಸಿದ್ದನು ನೆನೆಸುವಂತಿತ್ತು
ಹೊರಗೆ ಗದ್ದಲವಿತ್ತು ಒಳಗೆ ಮೌನ ಕಾಡುತ್ತಿತ್ತು
 
‘ಮಕ್ಕಳಿಲ್ಲೇನಪಾ..’ಕೇಳಿದ್ದೆ ನಾನು. ಅರೇ,
ನನ್ನ ದನಿಯೂ ಪೂರ್ತಿ ಹೊರಬರಲಿಲ್ಲವೇ
‘ಅದಾನ್ರೀ ಒಬ್ಬ..’ ಅಸ್ಪಷ್ಟ ದನಿ, ಸತ್ಯ
ಸಾರುವಂತಿತ್ತು. ಆತ ಹೆಂಡತಿಯೆಡೆಗೆ ದಿಟ್ಟಿಸುತ್ತಿದ್ದ
ಅವಳು ನಿರ್ಲಕ್ಷಿಸಿದ ಮಗನ ನೆನೆಯುತ್ತಿದ್ದಳೇನೋ
 
ದೀರ್ಘ ನಿಟ್ಟುಸಿರು ‘ಮುಂದಿನ ವಾರ ಬರ್ತೀನ್ರಿ’
ಹೊರಟೇ ಹೋಗಿದ್ದ. ಇಂದು ನಾ ಕಾಯ್ದ ದಾರಿ ವ್ಯರ್ಥ.
ಯಾಕೆ ಬರಲಿಲ್ಲವೋ ಉತ್ತರ ಸಿಗುತ್ತಿಲ್ಲ.
ಮಗ ಒಪ್ಪಲಿಲ್ಲವೇ ಸೊಸೆ ಖರ್ಚು ಬೇಡವೆಂದಳೆ
ಹೇಗೂ ಮುಪ್ಪು ಸಾಯಲು ಬಿಡಿ ಎಂದಿರಬಹುದೇ ಮುದುಕಿ
 
ನಾನು ನೂರು ರೋಗಿಗಳ ನಡುವೆ ಆ ಸಂತಳ
ಮುಖಕ್ಕಾಗಿ ಹುಡುಕುತ್ತಿದ್ದೇನೆ ಸ್ವಾರ್ಥಿ ಸಂಸಾರಸ್ಥರ
ಧಾವಂತದ ಬದುಕು ಅವಳ ಶೇಷ ವರ್ಷಗಳನು
ನುಂಗಿಬಿಟ್ಟೀತೆ…ಕಳವಳ ನನಗೆ.

‍ಲೇಖಕರು avadhi-sandhyarani

9 September, 2015

7 Comments

  1. Dr.Ratna Kulkarni

    ಮನ ಕಲಕುವ ಕಥೆ!

  2. ಲಕ್ಷ್ಮೀಕಾಂತ ಇಟ್ನಾಳ

    ತುಂಬ ಮನಮುಟ್ಟುವ ಸಂವೇದನೆಯನ್ನು ಉದ್ದೀಪಿಸುವ ಕವನ. ಅನಿರ್ವಚನೀಯ ಮ್ಲಾನತೆ ಮನದ ತುಂಬ. ಮನುಷ್ಯ ಸ್ವಾರ್ಥ ಸ್ವಭಾವದ ಮುಂದೆ ಮುಗ್ಧತೆ ಮಂಡಿಯೂರಿತೆ?…ಅರಿಯೆ. ಇದುವೇ ಜೀವನವೇ…ಗೊತ್ತಿಲ್ಲ.

  3. Anonymous

    Sir very beautifully written. I think so , the situation of most mothers is not different from the one in your poem.

  4. Upendra

    ‘ಸುಂದರ ಕವಿತೆ’ ಅನ್ನುವುದಕ್ಕಿಂತ ‘ಮನಕಲಕುವ ವಾಸ್ತವದ ಚಿತ್ರಣ’ ಅನ್ನಬಹುದು
    ಪ್ರೀತಿ ಸಾಯುವುದಿಲ್ಲ ಅನ್ನುತ್ತಾರೆ… ಅದು ಬರೇ ಆದರ್ಶದ ಒಣಮಾತುಗಳು ಅಂತ ನನಗನ್ನಿಸುತ್ತದೆ.
    ಪ್ರೀತಿಯನ್ನು ಸ್ವಾರ್ಥ ನುಂಗಿಹಾಕುತ್ತದೆ ಅನ್ನುವುದಂತೂ ಖಚಿತ. ನುಂಗಿಹಾಕಿದ ಪ್ರೀತಿಗೆ ಜೀವವಿಲ್ಲ. ಜೀವವಿಲ್ಲದ ಯಾವುದೇ ವಸ್ತು, ವಿಷಯ,
    ಭಾವನೆಯನ್ನು ಅದು ‘ಸತ್ತಿದೆ’ ಅನ್ನುತ್ತೇವೆ. ಮತ್ತೆ ಮರುಜನ್ಮ ಪಡೆಯಬಹುದು. ಆದರೆ ಆಗ ಪಶ್ಚಾತ್ತಾಪಕ್ಕೂ ನಾಚಿಕೆಯಾಗುವಷ್ಟು. ತಡವಾಗಿರುತ್ತದೆ.
    ವಯಸ್ಸಾದಂತೆ ಮಾನಸಿಕ ಶಕ್ತಿ ಕುಂದುತ್ತದೆ. ಇಲ್ಲಿ ಧನಬಲಕ್ಕಿಂತ ಮನೋಬಲದ ಪ್ರಾಮುಖ್ಯತೆ, ಪ್ರಾಬಲ್ಯ ಒಂದು ಪಟ್ಟು ಹೆಚ್ಚು ಅನಿಸುತ್ತದೆ.
    ಒಂದು ಜೀವ ಉಳಿಸುವಲ್ಲಿ “ಶಕ್ತ್ಯಾನುಸಾರ” ನಮ್ಮ ಪ್ರಾಮಾಣಿಕ ಪ್ರಯತ್ನ ಖಂಡಿತಾ ಇರಬೇಕು.
    ‘ಕೊನೆಗೆ’ ಎಲ್ಲರೂ ಬಯಸುವುದು – ನೆಮ್ಮದಿಯ ಉಸಿರು … ಎಳೆಯುವುದು … ಬಿಡುವುದು …

  5. Ranjana Rayar

    so touching !!!!!!

  6. lakshmishankarjoshi.

    ಅದ್ಭುತ ಸರ್!ಹೊಟ್ಟೇಲಿ ತೊಳೆಸಿದಂತೆ ಆಗುತ್ತಿದೆ.

  7. DrBasavraj Siddappa Mahantshetti

    Absolutely well-written poem which not only touches the heart but makes one realise the bitter true side of relations and also the helplessness of being a victim of the dreaded disease,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading